Preparing for Datta Jayanti Festival: ದತ್ತ ಜಯಂತಿ ಉತ್ಸವಕ್ಕೆ ಜಿಲ್ಲಾಡಳಿತ ವತಿಯಿಂದ ಸಿದ್ಧತೆ
ಚಿಕ್ಕಮಗಳೂರುಎಕ್ಸ್ಪ್ರೆಸ್: ಚಿಕ್ಕಮಗಳೂರು ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳ ವತಿಯಿಂದ ಡಿಸೆಂಬರ್ ೬ರಿಂದ ೮ ರವರೆಗೆ ಮೂರು ದಿನಗಳ ಕಾಲ ನಡೆಯುವ ದತ್ತ ಜಯಂತಿ ಉತ್ಸವಕ್ಕೆ ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ರಮೇಶ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು.ಕೆಮ್ಮಣ್ಣುಗುಂಡಿ, ಕವಿಕಲ್ ಗಂಡಿ ಬಳಿ ರಸ್ತೆ ದುರಸ್ತಿಪಡಿಸುವ ಕೆಲಸ ಮಾಡಲಾಗುತ್ತಿದೆ. ಹೊನ್ನಮ್ಮನ ಹಳ್ಳದಲ್ಲಿ ಭಕ್ತಾದಿಗಳಿಗೆ ಸ್ನಾನ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಪೀಠದಲ್ಲಿ ತಾತ್ಕಾಲಿಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಆಂಬುಲೆನ್ಸ್ ವ್ಯವಸ್ಥೆ ಹಾಗೂ ಮೂರು ದಿನಗಳ ಕಾಲ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಭಕ್ತಾದಿಗಳ ಅನುಕೂಲಕ್ಕಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇದಕ್ಕಾಗಿ ಕೆಎಸ್ಆರ್ರ್ಟಿಸಿ ಹಾಗೂ ಖಾಸಗಿ ಬಸ್ಸು ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ದತ್ತ ಜಯಂತಿಯ ಬಂದೋಬಸ್ತಿಗಾಗಿ ಜಿಲ್ಲೆಯ ಗಡಿ ಭಾಗಗಳಲ್ಲಿ ಒಟ್ಟು ೨೫ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗುತ್ತಿದೆ ಈ ಪೈಕಿ ೧೪ ನಗರ ಪ್ರದೇಶದ ಒಳಗಡೆ ಇರಲಿದೆ ಎಂದು ತಿಳಿಸಿದರು.
೧೦೦ ಹೆಚ್ಚುವರಿ ಸಿಸಿ ಕ್ಯಾಮರ: ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲುಒಟ್ಟು ನೂರು ಕಡೆಗಳಲ್ಲಿ ಹೆಚ್ಚುವರಿಯಾಗಿ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಸಂತೆ ರದ್ದು: ಡಿಸೆಂಬರ್ ೭ರಂದು ನಗರದಲ್ಲಿ ನಡೆಯಲಿರುವ ವಾರದ ಸಂತೆಯನ್ನು ಬಂದೋಬಸ್ತ್ ದೃಷ್ಟಿಯಿಂದ ರದ್ದುಪಡಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಮದ್ಯ ನಿಷೇಧ: ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ಎನ್ ಆರ್ ಪುರ ತಾಲೂಕುಗಳಲ್ಲಿ ಡಿಸೆಂಬರ್ ೬ರಿಂದ ೮ರವರೆಗೆ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಪ್ರವಾಸಿಗರಿಗೆ ನಿರ್ಭಂಧ: ಇದೇ ವೇಳೆ ಡಿಸೆಂಬರ್ ೬ ರಿಂದ ೮ರ ವರೆಗೆ ದತ್ತ ಭಕ್ತರು, ಮಾಲಧಾರಿಗಳನ್ನು ಹೊರತುಪಡಿಸಿ ಇತರೆ ಪ್ರವಾಸಿಗರಿಗೆ ದತ್ತಪೀಠ ಸೇರಿದಂತೆ ಗಿರಿ ತಪ್ಪಲಿನ ಇತರೆ ಪ್ರವಾಸಿ ತಾಣಗಳಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದರು.
ದತ್ತಪಾದುಕೆಗಳ ದರ್ಶನವೇಳೆ ಪೀಠದ ಒಳಗೆ ಕ್ಯಾಮರಾ ಮತ್ತು ವಿಡಿಯೋಗಳನ್ನು ಬಳಸಲು ಅವಕಾಶವಿರುವುದಿಲ್ಲ ಎಂದು ಹೇಳಿದರು.
ಸೌಹಾರ್ಧ ಸಭೆ: ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ಸಲುವಾಗಿ ಈಗಾಗಲೇ ಎರಡು ಸಮುದಾಯದ ಮುಖಂಡರ ಸೌಹಾರ್ದ ಸಭೆಗಳನ್ನು ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗುತ್ತಿದ್ದು ಪ್ರಚೋದನಕಾರಿ ಹೇಳಿಕೆ ಹಾಗೂ ಪೋಸ್ಟ್ಗಳನ್ನು ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದತ್ತ ಜಯಂತಿ ಉತ್ಸವದ ವೇಳೆ ಅನ್ಯ ಕೋಮಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕೆಂದು ತಿಳಿಸಲಾಗಿದೆ, ಪೀಠಕ್ಕೆ ಬರುವ ಭಕ್ತರು ಉದ್ದ ಚಾಸಿಯ ವಾಹನಗಳನ್ನು ತರಬಾರದು ಎಂದು ಸೂಚಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ ಪ್ರಭು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಹೈ ಕೋರ್ಟ್ ಆದೇಶದ ಮೇರೆಗೆ ರಾಜ್ಯ ಸರ್ಕಾರ ಕ್ಯಾಬಿನೆಟ್ ಸಬ್ ಕಮಿಟಿ ರಚನೆ ಮಾಡಿ ಇದೀಗ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾ ಆಡಳಿತ ಸಮಿತಿಯನ್ನು ನೇಮಕ ಮಾಡಿದೆ. ಇನ್ನು ಮುಂದೆ ದತ್ತಪೀಠದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಇನ್ನಿತರ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಮಿತಿಯು ತೀರ್ಮಾನ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳಿಸಿ ಕೊಡಲಿದೆ ಸರ್ಕಾರ ನಂತರದ ತೀರ್ಮಾನ ಕೈಗೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ರಮೇಶ್ ತಿಳಿಸಿದರು.
ಈ ಬಾರಿಯ ದತ್ತ ಜಯಂತಿ ಉತ್ಸವದ ವೇಳೆ ದತ್ತ ಪೀಠದಲ್ಲಿ ಹಿಂದೂ ಅರ್ಚಕರಿಂದ ಧಾರ್ಮಿಕ ವಿಧಿಗಳನ್ನು ನಡೆಸುವ ಕುರಿತು ಸಮಿತಿಯ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು ಸಮಿತಿ ರಚನೆ ವೇಳೆ ತಾರತಮ್ಯ ಎಸೆಗಲಾಗಿದೆ ಒಂದೇ ಕೋಮಿನವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎನ್ನುವ ಆರೋಪಗಳ ಬಗ್ಗೆ ಪ್ರತಿಕ್ರಿಸಿದವರು ಸರ್ಕಾರ ಸಮಿತಿ ಸದಸ್ಯರಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದ ಸಂದರ್ಭದಲ್ಲಿ ೪೨ ಮಂದಿ ಅರ್ಜಿ ಸಲ್ಲಿಸಿದ್ದಾರೆ ಅವುಗಳ ಪೈಕಿ ಆರು ಅರ್ಜಿಗಳು ಆಗಿದೆ ಅವರ ಪೈಕಿ ಇಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ಇದೆ ಇನ್ನಿಬ್ಬರು ಅರ್ಜಿಯಲ್ಲಿ ತಮ್ಮ ವಿಳಾಸ ಹಾಕಿರಲಿಲ್ಲ ಈ ಹಿನ್ನೆಲೆಯಲ್ಲಿ ಒಬ್ಬರನ್ನು ಸಮಿತಿಗೆ ಸೇರಿಸಿಕೊಳ್ಳಲಾಗಿದೆ ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ಅವರಿಗೆ ಹಕ್ಕಿದೆ ಎಂದು ತಿಳಿಸಿದರು
Preparing for Datta Jayanti Festival