ಜೀವನದಲ್ಲಿ ಗುರುಗಳ ಪಾತ್ರ ಬಹಳ ಮುಖ್ಯ
ಚಿಕ್ಕಮಗಳೂರು: ಮಕ್ಕಳ ಮೃದು ಮನಸ್ಸನ್ನು ಸಮಾಜದ ಉನ್ನತದ ಬೆಳವಣಿಗೆಯ ಕಡೆ ಮಾರ್ಗದರ್ಶನ ತೋರಲು ಗುರುಗಳ ಪಾತ್ರ ಬಹಳ ಮುಖ್ಯವಾಗಲಿದೆ ಎಂದು ಶ್ರೀರಾಮಚಂದ್ರ ಮಿಷನ್ ಹಾರ್ಟ್ ಫುಲ್ ನೆಸ್ನ ಜಿಲ್ಲಾ ಸಂಚಾಲಕ ಆರ್.ಎಸ್.ಸತ್ಯನಾರಾಯಣ್ ಹೇಳಿದರು.
ನಗರದ ಕೋಟೆ ಚನ್ನಪುರ ಸಮೀಪ ಕ್ರೈಸ್ತ ದ ಕಿಂಗ್ ಶಾಲೆಯಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ ಮನುಷ್ಯನ ಜೀವನದಲ್ಲಿ ಗುರುವು ಮಹತ್ವದ ಪಾತ್ರ ವಹಿಸುತ್ತಾರೆ. ಗುರುವನ್ನು ದೇವರಂತೆ ಪೂಜಿಸುವುದು ಭಾರತೀಯ ಸಂಸ್ಕೃತಿಯಲ್ಲಿದೆ. ಹಾಗಾಗಿ ಗುರುಪೂರ್ಣಿಮಾ ಬಹಳ ಮಹತ್ವವನ್ನು ಪಡೆದುಕೊಂಡಿದೆ ಎಂದು ಹೇಳಿದರು.
ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುವ ಮೂಲಕ ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ಗುರು ಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೇ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವವಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲೆಯ ಪ್ರಾಂಶುಪಾಲೆ ಚಂದ್ರಪ್ರಭ ಮಾತನಾಡಿ ಜೀವನದ ನಿಜವಾದ ಮಾರ್ಗತೋರಿಸಲು ಗುರುಗಳ ಸಹಾಯ ಅವಶ್ಯಕತೆಯಿದೆ. ಭಾರತೀಯ ಸಂಸ್ಕೃತಿಯ ಪರಂಪರೆ, ಸಂಸ್ಕಾರ ಮತ್ತು ಹಿಂದಿನ ಗುರುಕುಲ ಶಿಕ್ಷಣ ವನ್ನು ಮರುಕಳಿಸುವುದು ಹಾಗೂ ಮಕ್ಕಳ ಉತ್ತಮ ಸಂಸ್ಕಾರ, ಮೌಲ್ಯಗಳನ್ನು ಬೆಳೆಸುವುದಾಗಿದೆ ಎಂದು ತಿಳಿಸಿ ದರು.
ಇದೇ ವೇಳೆ ವಿದ್ಯಾರ್ಥಿಗಳು ಹಿಂದೂ, ಮುಸ್ಲೀಂ ಹಾಗೂ ಕ್ರೈಸ್ತ ಧರ್ಮಗ್ರಂಥಗಳ ಮೂಲಕ ಗುರು ಪೂರ್ಣಿಮಾ ಶುಭಾಶಯ ಕೋರಿದರು. ಬಳಿಕ ವಿದ್ಯಾರ್ಥಿಗಳು ಗುರುಬ್ರಹ್ಮ, ಗುರವೇ ನಮಃ ಸಂದೇಶವನ್ನು ಸಾರಿ ಶಿಕ್ಷಕರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಸಿ.ಹೆಚ್.ಶ್ರೀನಿವಾಸ್, ಮುಖ್ಯಶಿಕ್ಷಕಿ ಸುಮ, ಶಿಕ್ಷಕರಾದ ಮಂಜುಳಾ, ಹೆಚ್.ಎನ್.ಬಾನುಪ್ರಿಯಾ, ಬಿಂದುಶ್ರೀ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Guru’s role is very important in life