September 19, 2024

ಜು.೩೦ ಬಾಳೇಹೊನ್ನೂರಿನಲ್ಲಿ ಜನ-ದನಿ ಸಮಾವೇಶ

0
ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಸಂಚಾಲಕ ಕೆ.ಎಲ್ ಅಶೋಕ್ ಪತ್ರಿಕಾಗೋಷ್ಠಿ

ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಸಂಚಾಲಕ ಕೆ.ಎಲ್ ಅಶೋಕ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಮಲೆನಾಡಿನ ಸಮಸ್ತ ಜನಸಾಮಾನ್ಯರ ಹಕ್ಕೋತ್ತಾಯಗಳನ್ನು ಈಡೇರಿಸಲು ಎಲ್ಲಾ ಶಾಸಕರು ನಿಖರವಾದ ಭರವಸೆ ಖಾತ್ರಿಪಡಿಸುವಂತೆ ಒತ್ತಾಯಿಸಿ ಜನ-ದನಿ ಸಮಾವೇಶವನ್ನು ಜು.೩೦ ರಂದು ಬಾಳೇಹೊನ್ನೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಎದ್ದೇಳು ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಸಂಚಾಲಕ ಕೆ.ಎಲ್ ಅಶೋಕ್ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಅಂದು ಬೆಳಗ್ಗೆ ೧೧-೩೦ ಕ್ಕೆ ಜನ-ದನಿ ಸಮಾವೇಶ ನಡೆಯಲಿದ್ದು ಇದರಲ್ಲಿ ಜಿಲ್ಲೆಯ ಎಲ್ಲಾ ಶಾಸಕರನ್ನು ಆಹ್ವಾನಿಸಲಾಗಿದ್ದು ಈಗಾಗಲೇ ಚಿಕ್ಕಮಗಳೂರು ಶಾಸಕ ಹೆಚ್.ಡಿ ತಮ್ಮಯ್ಯ, ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಹಾಗೂ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಇವರುಗಳು ಭಾಗವಹಿಸಲು ಒಪ್ಪಿದ್ದಾರೆ. ಇನ್ನುಳಿದ ಕಡೂರು ಮತ್ತು ತರೀಕೆರೆ ಶಾಸಕರನ್ನು ಭೇಟಿ ಮಾಡಿ ಆಹ್ವಾನಿಸುವುದಾಗಿ ತಿಳಿಸಿದರು.

ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ತಾತ್ಕಾಲಿಕವಾಗಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ಹಿಂದಿನ ಸರ್ಕಾರ ಜಾರಿಗೆ ತಂದಿರುವ ಜಮೀನು ಲೀಸ್‌ಗೆ ಕೊಡುವ ಕಾಯಿದೆಯನ್ನು ಸಂಪೂರ್ಣವಾಗಿ ವಾಪಸ್ ಪಡೆಯುವಂತೆ ಆಗ್ರಹಿಸಲಾಗುವುದು. ಭೂಮಿ ವಸತಿ ಮತ್ತು ಜನವಿರೋಧಿ ಅರಣ್ಯ ಯೋಜನೆ ಕೈಬಿಡುವಂತೆ ಈ ಸಮಾವೇಶದಲ್ಲಿ ಒತ್ತಾಯಿಸಿ ನಿರ್ಣಾಯಿಸಲಾಗುವುದೆಂದು ಹೇಳಿದರು.

ಮಲೆನಾಡಿಗರ ಕೂಗು ಒಂದು ರೀತಿಯಲ್ಲಿ ಅರಣ್ಯ ರೋಧನವೇ ಆಗಿದೆ. ಬೆಲೆ ಏರಿಕೆ, ಭ್ರಷ್ಟಾಚಾರ, ದ್ವೇಷ ರಾಜಕಾರಣ ಮುಂತಾದ ಸಮಸ್ಯೆಗಳು ಮಲೆನಾಡಿಗರಿಗೆ ಹೆಚ್ಚುವರಿ ಸಾಲು ಸಾಲು ಸಮಸ್ಯೆಗಳು. ಅರಣ್ಯ ಇಲಾಖೆಯ ನಿತ್ಯ ಕಿರುಕುಳ, ತಲೆಯ ಮೇಲೆ ಒಕ್ಕಲೆಬ್ಬಿಸುವ ತೂಗುಕತ್ತಿ. ನಾನಾ ರೀತಿಯ ಬೆಳೆ ರೋಗಗಳು, ಧಿಡೀರೆಂದು ಬಂದೆರುಗುವ ಪ್ರಾಕೃತಿಕ ವಿಕೋಪಗಳು. ಇಂದಿನ ಮಲೆನಾಡೆಂದರೆ ಕುವೆಂಪು ರವರ ಕಾದಂಬರಿಯಲ್ಲಿ ಬರುವ ಅಂದಿನ ’ಮಲೆಗಳಲ್ಲಿ ಮಧುಮಗಳು’ ಅಲ್ಲ. ’ಕೆಂಡದ ಮೇಲೆ ಬಿದ್ದ ತರಗೆಲೆಗಳು’ ಎಂಬಂತಾಗಿದೆ. ಜನರ ಯಾವೊಂದು ಸಮಸ್ಯೆಗೂ ಪರಿಹಾರ ನೀಡಲಿಲ್ಲ ಎಂದು ಆರೋಪಿಸಿದರು.

ಹಾಗಾಗಿ ಮಲೆನಾಡಿನ ಜನರೆಲ್ಲರೂ ಮನದೊಳಗೆ ತೀರ್ಮಾನ ಮಾಡಿದ್ದು, ಈ ದುರಂಕಾರಕ್ಕೆ ಕೊನೆ ಹಾಡಲೇಬೇಕು ಎಂದು ಅದರ ಫಲಿತಾಂಶ ಕಣ್ಣ ಮುಂದಿದೆ. ಹೊಸ ಸರ್ಕಾರ ರಚನೆಯಾಗಿದೆ. ಹೊಸ ಶಾಸಕರುಗಳು ಗೆದ್ದು ಬಂದ್ದಿದ್ದಾರೆ. ಗೆದ್ದವರ ಸರ್ಕಾರವೇ ಅಧಿಕಾರದಲ್ಲಿದೆ. ಇದಕ್ಕಿಂತ ಉತ್ತಮ ಸಂದರ್ಭ ಸುಲಭ ಸಾಧ್ಯವಿಲ್ಲ ಎಂದರು.

ಈಗಲಾದರೂ ಮಲೆನಾಡಿಗರ ನೋವು ಸರ್ಕಾರಕ್ಕೆ ತಲುಪಬೇಕು. ದಶಕಗಳ ಸಮಸ್ಯೆಗೆ ಪರಿಹಾರ ದೊರಕಲೇಬೇಕು. ಯಾವ ಜಾತಿ, ಧರ್ಮ, ಪಕ್ಷ ಎಂಬ ಬೇಧವಿಲ್ಲದೆ ಎಲ್ಲರ ಸಮಸ್ಯೆಗಳಿಗೂ ಪರಿಹಾರ ದೊರಕಬೇಕು ಎಂದು ಒತ್ತಾಯಿಸಿದರು.
ಮಲೆನಾಡಿಗರ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲು ಹಾಗೂ ಈ ಸಮಸ್ಯೆಗಳಿಗೆ ಪರಿಹಾರ ತಂದುಕೊಡಲು ಅವರು ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಕೊಳ್ಳಲು, ಕೆಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಕಂಡುಕೊಳ್ಳಲು ಜನ-ದನಿ ಸಮಾವೇಶವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಾಗರೀಕ ಚಳವಳಿಯ ಸಂಚಲನ ಮೂಡಿಸಿದ ಎದ್ದೇಳು ಕರ್ನಾಟಕ ಅಭಿಯಾನದ ಪ್ರಮುಖ ರಾಜ್ಯ ನಾಯಕರುಗಳು ಆಗಮಿಸುತ್ತಿದ್ದಾರೆ. ಜನ-ದನಿ ಸಮಾವೇಶ ಜನರ ಹಾಗೂ ಜನಪ್ರತಿನಿಧಿಗಳ ನಡುವಿನ ಸಂಬಂಧ ಹೇಗಿರಬೇಕು ಎಂಬುದಕ್ಕೆ ಹೊಸ ಮಾದರಿಯನ್ನು ಹುಟ್ಟುಹಾಕಲಿದೆ. ಈ ಸಮಾವೇಶಕ್ಕೆ ಮತದಾರರು ತಮ್ಮೆಲ್ಲಾ ಬಂಧು ಮತ್ತು ಮಿತ್ರರೊಂದಿಗೆ ತಪ್ಪದೇ ಹಾಜರಾಗಬೇಕೆಂದು ಕೋರಿದರು.

ಓಟು ಹಾಕಿದರೆ ಮಾತ್ರ ನಾಗರೀಕರಾಗಿ ನಮ್ಮ ಕರ್ತವ್ಯ ಮುಗಿಯಲಿಲ್ಲ. ಏತಕ್ಕಾಗಿ ಓಟು ಹಾಕಿದೆವೋ ಆ ಉದ್ದೇಶ ಈಡೇರುವತನಕ ನಾವು ಒಟ್ಟಾಗಿ ಮತ್ತು ಗಟ್ಟಿಯಾಗಿ ದನಿ ಎತ್ತಬೇಕು ಮತ್ತು ಸಮಸ್ಯೆಯ ಪರಿಹಾರಕ್ಕೆ ಸೃಜನಶೀಲ ರೀತಿಯ ಪ್ರಯತ್ನ ಮುಂದುವರೆಸಲೇಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸಂಚಾಲಕರಾದ ಯೂಸೂಫ್ ಹಾಜಿ, ಟಿ.ಎಲ್ ಗಣೇಶ್, ಹಸನಬ್ಬ, ಹೆಚ್.ಎಸ್ ಪುಟ್ಟಸ್ವಾಮಿ, ಗೋಪಾಲಗೌಡ, ಮುನ್ನ ಮತ್ತಿತರರಿದ್ದರು.

Ju.30 Jana-Dani conference at Balehonnur

About Author

Leave a Reply

Your email address will not be published. Required fields are marked *

You may have missed