ಅಕ್ರಮ ಆಸ್ತಿ ಸಂಪಾದನೆ ವಿರುದ್ಧ ಲೋಕಾಯುಕ್ತರಿಗೆ ದೂರು
ಚಿಕ್ಕಮಗಳೂರು: ಇಲ್ಲಿನ ನಗರಸಭೆ ಪೌರಾಯುಕ್ತಾಗಿದ್ದ ಹೆಚ್.ಜಿ ಪ್ರಭಾಕರ್ ಎಂಬುವವರು ಆದಾಯ ಮೀರಿ ಅಕ್ರಮ ಆಸ್ತಿ ಮಾಡಿದ್ದಾರೆಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವುದಾಗಿ ಕಾಫಿ ಮಂಡಳಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಡಿ.ಎಂ ವಿಜಯ್ ತಿಳಿಸಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಈ ಅಧಿಕಾರಿ ಅಕ್ರಮ ಆಸ್ತಿ ಗಳಿಸಿರುವ ಬಗ್ಗೆ ಪಕ್ಷದ ಮುಖಂಡರು ಹಾಗೂ ಶಾಸಕರುಗಳ ಗಮನಕ್ಕೆ ತಂದಿದ್ದು, ಇವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿರುವುದಾಗಿ ಹೇಳಿದರು.
ಈಗ ವಿಧಾನಸೌಧದಲ್ಲಿ ಸೇವೆ ಸಲ್ಲಿಸುತ್ತಿದ್ದು, ಇಂತಹ ಭ್ರಷ್ಠ ಅಧಿಕಾರಿಗಳನ್ನು ತೆಗೆದುಹಾಕಬೇಕೆಂದು ಆಗ್ರಹಿಸಿದ ಅವರು ಕೃಷಿ ಸಚಿವ ಚಲುವರಾಯಸ್ವಾಮಿಯವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಅಧಿಕಾರಿ ವರ್ತನೆ ಬಗ್ಗೆ ಮತ್ತು ಅಕ್ರಮ ಆಸ್ತಿ ಗಳಿಸಿರುವ ಕುರಿತು ಸಚಿವರಿಗೆ ವಿವರಿಸಿರುವುದಾಗಿ ಹೇಳಿದರು.
ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಈ ಅಧಿಕಾರಿ ವಿರುದ್ಧ ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸರ್ಕಾರದ ಹಣ ದರುಪಯೋಗಪಡಿಸಿಕೊಂಡು ಸಂಪಾದಿಸಿರುವ ಅಕ್ರಮ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಲೋಕಾಯುಕ್ತ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ಅಮೀನ್, ಶ್ರೀನಿವಾಸ್, ಗೋಪಾಲಗೌಡ, ಶೋಭಾ ಮತ್ತಿತರರಿದ್ದರು.
Congress leader DM Vijay press conference