ಗಿರಿ ಪ್ರದೇಶದಲ್ಲಿ ನಿಯಂತ್ರಿತ ಪ್ರವಾಸೋದ್ಯಮಕ್ಕೆ ಆದ್ಯತೆ
ಚಿಕ್ಕಮಗಳೂರು: ಮುಳ್ಳಯ್ಯನ ಗಿರಿ, ದತ್ತಪೀಠದ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ ನಿಯಂತ್ರಿತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಶುಕ್ರವಾರ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಗಿರಿಶ್ರೇಣಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಾರಾಂತ್ಯದಲ್ಲಿ ಕಂಡು ಬರುವ ಟ್ರಾಫಿಕ್ ಜಾಮ್ ಇನ್ನಿತರೆ ಸಮಸ್ಯೆಗಳ ಬಗ್ಗೆ ವಿವಿಧ ಸಂಘಟನೆಗಳ ಜೊತೆ ಹಮ್ಮಿಕೊಳ್ಳಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯಲ್ಲಿ ಬರುವ ಸಲಹೆಗಳನ್ನು ಕ್ರೂಢೀಕರಿಸಿ ಪ್ರಸ್ತಾವನೆಯನ್ನು ತಯಾರಿಸಿ ಜಿಲ್ಲಾಡಳಿತದ ಮುಂದೆ ಇಟ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಕೈಮರದ ಚೆಕ್ಪೋಸ್ಟ್ನ್ನು ಜಾವರೈನ್ ಕ್ರಾಸ್ಗೆ ಸ್ಥಳಾಂತರಿಸುವುದಾಗಿ ಎಸ್ಪಿ ತಿಳಿಸಿದರು. ಚೆಕ್ಪೋಸ್ಟ್ನ ಸಿಬ್ಬಂದಿ ಮಂಜುನಾಥ್ ಮಾತನಾಡಿ, ಇದರಿಂದ ಸುರಕ್ಷತೆ ಸಮಸ್ಯೆ ಎದುರಾಗತ್ತದೆ ಸೂಕ್ತ ರಕ್ಷಣೆ ನೀಡಬೇಕಾಗುತ್ತದೆ ಎಂದರು.
೬ ಗಂಟೆ ನಂತರ ಗಿರಿಭಾಗದ ಹೋಂಸ್ಟೇ ಮತ್ತು ರೆಸಾರ್ಟಗಳಿಗೆ ಮುಂಗಡ ಬುಕ್ಕಿಂಗ್ ಮಾಡಿದ ಪ್ರವಾಸಿಗರು ಆಗಮಿಸುತ್ತಾರೆ ಅಂತಹವರಿಗಾಗಿ ಚೆಕ್ ಪೋಸ್ಟ್ನಲ್ಲಿ ರಾತ್ರಿ ೯ ರ ವರೆಗೆ ಇರಲೇ ಬೇಕಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದಾಗ, ನಿಮಗೆ ತೊಂದರೆ ಆಗದ ರೀತಿ ಪೊಲಿಸ್ ಇಲಾಖೆ ರಕ್ಷಣೆ ನೀಡುತ್ತದೆ. ಅವಶ್ಯವಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿ ಎಂದು ಸಲಹೆ ಮಾಡಿದರು.
ಇದೇ ವೇಳೆ ವಿವಿಧ ಸಂಘಟನೆ ಪ್ರತಿನಿಧಿಗಳು ಮಾತನಾಡಿ, ಜಾವರೈನ್ ಕ್ರಾಸ್ನಲ್ಲಿ ಚೆಕ್ ಪೋಸ್ಟ್ ತೆರೆಯುವುದರಿಂದ ಕೈಮರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ತಡೆಯಲು ಸಹಕಾರಿ ಆಗುತ್ತದೆ. ಅಲ್ಲಿಗೆ ಚೆಕ್ ಪೊಸ್ಟ್ ಸ್ಥಳಾಂತರಿಸಿ ಬ್ಯಾರಿಕೇಡ್, ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಸಿಸಿ ಕ್ಯಾಮೆರಾ, ಶೌಚಾಲಯ, ಪೊಲೀಸ್ ಸಿಬ್ಬಂದಿಗಳಿಗೆ ಪ್ರತ್ಯೇಕ ಚೌಕಿ, ಲಾಕರ್ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಸಲಹೆ ಮಾಡಿದರು.
ಮುಳ್ಳಯ್ಯನಗಿರಿ ಮತ್ತು ದತ್ತಪೀಠದ ರಸ್ತೆಗಳನ್ನು ಅಗಲೀಕರಣಗೊಳಿಸಬೇಕು, ಚಾಲಕರಿಗೆ ಎಚ್ಚರಿಕೆ ಫಲಗಳು, ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡಬೇಕು ಎಂದು ಒತ್ತಾಯ ಕೇಳಿಬಂತು.
ನಂದಿ ಬೆಟ್ಟದಲ್ಲಿ ಇರುವಂತೆ ಅಲ್ಲಂಪುರ ಗ್ರಾಮದಿಂದ ಕೈಮರ ದ ಮಧ್ಯೆ ಯಾವುದಾದರೂ ಸ್ಥಳ ಗುರುತಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಅಲ್ಲಿಂದ ಜಿಲ್ಲಾಡಳಿತ ಅಥವಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮಿನಿ ಬಸ್ಗಳ ವ್ಯವಸ್ಥೆ ಕಲ್ಪಿಸಿ ಸೂಕ್ತ ದರ ನಿಗದಿಪಡಿಸಿ ಅದರಲ್ಲೇ ಗಿರಿಶ್ರೇಣಿಯ ಪ್ರವಾಸಿ ತಾಣಗಳಿಗೆ ಹೋಗಿ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಕೆಲವರು ಕೊರಿದರು.
ಸೀತಾಳಯ್ಯನಗಿರಿಯ ಬ್ಯಾರಿಕೇಡ್ ಹಾಕಿರುವ ಸ್ಥಳದಲ್ಲಿ ಟಿಕೆಟ್ ಕೌಂಟರ್ ಹಾಗೂ ಪೊಲೀಸ್ ಚೌಕಿ ತೆರೆಯಬೇಕು. ಕುಡಿಯುವ ನೀರು, ಕಸದ ತೊಟ್ಟಿ ಮತ್ತು ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಹೊನ್ನಮ್ಮನಹಳ್ಳ ಸಹ ಮನಮೋಹಕ ಫಾಲ್ಸ್ ಸ್ಥಳವಾಗಿದ್ದು ಅಲ್ಲಿಯೂ ಜಲಕ್ರಿಡೆ ಆಡುವುದರಿಂದ ಬಟ್ಟೆ ಬದಲಿಸುವ ಶೆಡ್ಗಳನ್ನು ನಿರ್ಮಿಸಬೇಕು. ಕಸದ ತೊಟ್ಟಿ ಮತ್ತು ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಕೇಳಿಬಂತು.
ದತ್ತಪೀಠದಲ್ಲೂ ಪಾರ್ಕಿಂಗ್ ವ್ಯವಸ್ಥೆ ಮಾಡಿ ಅಲ್ಲಿಂದ ಗಾಳಿಕೆರೆ ಮತ್ತು ಮಾಣಿಕ್ಯಾಧಾರಕ್ಕೆ ತೆರಳುವ ಪ್ರವಾಸಿಗರಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶುಲ್ಕ ನಿಗಧಿ ಮಾಡಿ, ಕೌಂಟರ್ ತೆರೆದು ಖಾಸಗಿಯವರ ಸುಲಿಗೆ ತಪ್ಪಿಸಬೇಕು ಮತ್ತು ಕುಡಿಯುವ ನೀರು, ಶೌಚಾಲಯ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.
ಇದೆಲ್ಲವನ್ನೂ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳು, ಪರಿಸರ ಸಂಘಟನೆಗಳು, ಹೋಂಸ್ಟೇ, ರೆಸಾರ್ಟ ಮಾಲೀಕರ ಸಂಘಟನೆಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಮುಖಂಡರುಗಳ ಸಲಹೆ ಸಹಕಾರ ಪಡೆಯಬೇಕು ಎನ್ನುವ ಸಲಹೆಗಳು ಬಂದವು.
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರ ಜಿ.ಕೃಷ್ಣಮೂರ್ತಿ ಇತರರು ಇದ್ದರು.
Preference for controlled tourism in the hill region