ಕಾಫಿನಾಡಿನಲ್ಲಿ ಬಿದ್ದಮಳೆಗೆ ಜಲಪಾತಗಳಿಗೆ ಜೀವಕಳೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪುಷ್ಯ ಮಳೆ ಮುಂದುವರೆದಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ.ಮುಳುಗು ಸೇತುವೆ ಎಂದು ಪ್ರಸಿದ್ಧಿ ಪಡೆದಿರುವ ಹೆಬ್ಬಾಳೆ ಸೇತುವೆ ಮುಳುಗುವ ಹಂತ ತಲುಪಿದೆ. ಜಲಪಾತಗಳಿಗೆ ಜೀವಕಳೆ ಬಂದರೆ, ಮನೆಯೊಂದು ಕುಸಿದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.
ಮಲೆನಾಡು ಭಾಗದ ತಾಲೂಕುಗಳಾದ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ,ಕೊಪ್ಪ ಮತ್ತು ನರಸಿಂಹರಾಜಪು ತಾಲೂಕುಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಕಳಸ, ಹಿರೇಬೈಲು ಹೊಸಕೆರೆ, ಶೃಂಗೇರಿ, ಕಿಗ್ಗ, ಕೊಪ್ಪ, ಹರಿಹರಪುರ ಜಯಪುರ ಕಮ್ಮರಡಿ ಬಸರಿಕಟ್ಟೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ.
ವಾರಗಳ ಹಿಂದೆ ನೀರಿಗಾಗಿ ಆಗಸವನ್ನು ದಿಟ್ಟಿಸಿನೋಡುತ್ತಿದ್ದ ಸಸಿಮಡಿಗಳು ಈಗ ಮಳೆಬರುತ್ತಿರುವುದರಿಂದ ಹಸಿರು ಮೊಗೆಯುತ್ತಿವೆ. ಕೆಲವಡೆ ನಾಟಿಕಾರ್ಯ ಮುಂದುವರೆದಿದ್ದರೆ, ಮತ್ತೆ ಕೆಲವರು ಗದ್ದೆಹಸನುಗೊಳಿಸಲು ಬೇಸಾಯಕ್ಕೆ ಮುಂದಾಗುತ್ತಿದ್ದಾರೆ. ತರೀಕೆರೆ ತಾಲೂಕಿನಲ್ಲಿರುವ ಕಲ್ಹತ್ತಿಗಿರಿ ಜಲಪಾತ ೧೫ ದಿನಗಳ ಹಿಂದೆ ಸೊರಗಿಹೋಗಿತ್ತು.
ಈಗ ಸುರಿಯುತ್ತಿರುವ ಮಳೆಗೆ ಮೈದುಂಬಿ ಧುಮ್ಮಕ್ಕುವ ಮೂಲಕ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೀಳುತ್ತಿರುವ ನೀರಿಗೆ ಮೈಯೊಡ್ಡುವಂತೆ ಆಹ್ವಾನಿಸುತ್ತಿದೆ.ಗಿರಿಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವುದೇ ಈ ಜಲಪಾತಕ್ಕೆ ಜೀವಕಳೆ ಬಂದಿದೆ.
ಬಾಳೆಹೊನ್ನೂರು ಮಾರ್ಗದ ಶಂಕರಫಾಲ್ಸ್, ಮುಳ್ಳಯ್ಯನಗಿರಿ ಮತ್ತು ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ದಬೆದಬೆ ಫಾಲ್ಸ್ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.
ಚಿಕ್ಕಮಗಳೂರು ತಾಲೂಕಿನಲ್ಲೂ ಮಳೆ ಮುಂದುವರೆದಿದ್ದು, ಹೊಸಪೇಟೆ ಸಮೀಪದ ಶಿವಪುರದಲ್ಲಿ ರಾಜೇಂದ್ರ ಎಂಬುವವರಿಗೆ ಸೇರಿದ ಮನೆ ಕುಸಿದಿದ್ದು, ವಿಷಯ ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Falling rain in Kaffinad is life-giving for the waterfalls