ಮನುಷ್ಯನ ಪ್ರಯತ್ನಕ್ಕೆ ಪೂರಕವಾಗಿ ದೈವಕೃಪೆ ಆದಾಗ ಮಾತ್ರ ಎಲ್ಲವೂ ಸಾಧ್ಯ
ಚಿಕ್ಕಮಗಳೂರು: ಮನುಷ್ಯನ ಪ್ರಯತ್ನಕ್ಕೆ ಪೂರಕವಾಗಿ ದೈವ ಕೃಪೆ ಆದಾಗ ಮಾತ್ರ ಎಲ್ಲವೂ ಸಾಧ್ಯವಾಗುತ್ತದೆ ಜೊತೆಗೆ ರೈತರ ಬದುಕು ಹಸನುಗೊಳ್ಳುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಶನಿವಾರ ಬೈರಾಪುರ ಪಿಕಪ್ನಿಂದ ಲಕ್ಯಾ ಮಾದರಸನ ಕೆರೆಗೆ ನೀರು ತುಂಬಿಸುವ ಮೋಟಾರ್ ಪಂಪನ್ನು ಚಾಲನೆ ಮಾಡಿ ಮಾತನಾಡಿ ಮಳೆಗಾಗಿ ಪ್ರಾರ್ಥಿಸಿ ತೇಗೂರಿನಲ್ಲಿ ೧೦೧ ಎಡೆ ಬಿಲ್ಗುಡ್ ಸೇವೆಮಾಡಿ ಪೂಜೆ ಸಲ್ಲಿಸಲಾಗಿದೆ, ಈ ಮೂಲಕ ದೇವರು ಕೃಪೆ ತೋರಿದರೆ ಮಳೆ ಬೆಳೆ ಚನ್ನಾಗಿ ಬಂದು ಸಮೃದ್ಧ ನಾಡು ಕಾಣಲು ಸಾಧ್ಯವಾಗುತ್ತದೆ ಎಂದರು.
ಚುನಾವಣಾ ಪೂರ್ವದಲ್ಲಿ ಮತ್ತು ನಂತರದಲ್ಲಿ ಹೇಳಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ಅಲ್ಪಸಂಖ್ಯಾತರ ಪರವಾಗಿ ಕೊಟ್ಟ ಮಾತಿನಂತೆ ಕೃತಿಯಲ್ಲೂ ನಡೆದುಕೊಳ್ಳುತ್ತಿದ್ದೇವೆ, ಸರ್ಕಾರದ ಮಹತ್ವಾಕಾಂಕ್ಷೆಯ ಜನಪರವಾದ ೫ ಗ್ಯಾರಂಟಿಗಳ ಪೈಕಿ ಈಗಾಗಲೇ ೪ನ್ನು ಜಾರಿ ಮಾಡಿದ್ದು, ಮುಂದೆ ರೈತರ ಪರವಾಗಿ ಕೆಲಸ ಮಾಡುವುದಾಗಿ ಭವರಸೆ ನೀಡಿದರು.
ಕರಗಡಕ್ಕೆ ಹೋಗುವ ಚಾನಲ್ ಕೊಳಚೆಯಿಂದ ತುಂಬಿದ್ದು, ದೇವಿಕೆರೆ ಸಮೀಪ ೨ ಚಾನಲ್ಗಳನ್ನು ಹಿಟಾಚಿಗಳ ಮೂಲಕ ಸ್ವಚ್ಚ ಮಾಡುವ ಕೆಲಸ ನಡೆಯುತ್ತಿದೆ, ಮಳೆ ಬಂದರೆ ಕರಗಡ ನೀರಾವರಿ ಯೋಜನೆ ಮೂಲಕ ಬೆಳವಾಡಿ, ಕಳಸಾಪುರ ಕೆರೆ ತುಂಬಿಸುವ ಕೆಲಸಕ್ಕೆ ಪೂರ್ವಭಾವಿ ಸಿದ್ದತೆ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೈರಾಪುರ ಪಿಕಪ್ನಿಂದ ೩೦೦ ಹೆಚ್.ಪಿ ಮೋಟಾರ್ ೪೫ ದಿನಗಳ ಚಾಲನೆ ಮಾಡಿದರೆ ಮಾದರಸನ ಕೆರೆ ಭರ್ತಿಯಾಗುತ್ತದೆ, ಇದರಿಂದ ಲಕ್ಯಾ ಹೋಬಳಿಯ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಟಿ.ಡಿ ರಾಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಕೆರೆ ತುಂಬಿಸಲು ಹೋರಾಟ ನಡೆಸಿದ ಕೆ.ಪಿ.ಸಿ.ಸಿ ವಕ್ತಾರ ರವೀಶ್ ಕ್ಯಾತನಬೀಡು, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸೇರಿದಂತೆ ರೈತ ಮುಖಂಡರು, ಆ ಭಾಗದ ರೈತರು ಸಣ್ಣ ನೀರಾವರಿ ಇಲಾಖೆಯ ದಯಾಶಂಕರ್.ಹೆಚ್, ಇಂಜಿನಿಯರ್ ವಿಕಾಸ್ ಭಾಗವಹಿಸಿದ್ದರು.
Everything is possible only when God’s grace complements human effort