ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಚಿಕ್ಕಮಗಳೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅವಹೇಳನಾಕಾರಿಯಾಗಿ ಹೇಳಿಕೆ ನೀಡಿರುವ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಸಭ್ಯಸ್ಥರಂತೆ ಮುಖವಾಡ ಧರಿಸಿರುವ ಗೋಮುಖ ವ್ಯಕ್ತಿ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಆರೋಪಿಸಿದರು.
ಅವರು ಗುರುವಾರ ನಗರದ ಹನುಮಂತಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಅಧಿಕಾರ ಕಳೆದುಕೊಂಡಮೇಲೆ ಅರಗ ಜ್ಞಾನೇಂದ್ರಗೆ ನೆನಪಿನ ಶಕ್ತಿ ಕಳೆದುಹೋಗಿದೆ, ಕಸ್ತೂರಿ ರಂಗನ್ ವರದಿ ಬಗ್ಗೆ ಈ ರಾಜ್ಯದ ಅರಣ್ಯ ಸಚಿವ ಈಶ್ವರಖಂಡ್ರೆ ಅವರು ಏನು ಹೇಳಿದ್ದಾರೆ ಎಂಬುದನ್ನು ಅರಿಯದೆ ಯಾರೋ ಹೇಳಿರುವುದನ್ನು ಕೇಳಿ ಕಸ್ತೂರಿ ರಂಗನ್ ವರದಿ ಬಗ್ಗೆ ಸಚಿವ ಖಂಡ್ರೆ ಅವರಿಗೆ ಏನು ಮಾಹಿತಿ ಇದೆ ಎಂಬ ಉದಾಹರಣೆ ಕೊಡುವ ರಭಸದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ದಲಿತ ನಾಯಕ ದೀನ ದಲಿತರ ಹೋರಾಟಗಾರ ಹಿರಿಯ ಮುತ್ಸದ್ದಿ ಬಗ್ಗೆ ಬಣ್ಣದ ಮಾತನಾಡಿರುವುದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್ ಮೂರ್ತಿ ಮಾತನಾಡಿ ಮಾನವ ಕುಲ ತಲೆ ತಗ್ಗಿಸುವ ಹೀನ ಕೆಟ್ಟ ಸಂಸ್ಕೃತಿಯನ್ನು ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ಹಬ್ಬಿಸುವ ಕೆಲಸ ಮಾಡುತ್ತಿದೆ. ಒಂದು ಕಡೆ ನಾಗರೀಕರನ್ನು ಅಮಾನೀಯವಾಗಿ ಕೊಲೆ ಮಾಡಿದರೆ ಇನ್ನೊಂದು ಕಡೆ ಮಹಿಳೆಯರನ್ನು ಬೆತ್ತಲೆಗೊಳಿಸಿ ಬಿಜೆಪಿ ಬೆಂಬಲಿತರು ಸಾಮೂಹಿಕ ಹತ್ಯಾಚಾರ ಮಾಡಿ ಹತ್ಯೆ ಮಾಡುತ್ತಿರುವುದು ವಿಶ್ವ ಮಟ್ಟದಲ್ಲಿ ಭಾರತೀಯರೆಂದರೆ ಕೀಳುಮಟ್ಟದವರು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಸೌಜನ್ಯದ ಸಜ್ಜನ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅರಗ ಜ್ಞಾನೇಂದ್ರ ಅವಹೇಳನವಾಗಿ ಮಾತನಾಡಿರುವುದು ಅವರ ಮೆದುಳಿಗೂ, ನಾಲಿಗೆಗೂ ಸಂಪರ್ಕ ಕಡಿತಗೊಂಡಂತೆ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಮುಖಂಡರುಗಳಾದ ಕೆ.ವಿ.ಮಂಜುನಾಥ್, ಕೆ.ಮೊಹಮದ್, ಜೆ.ಬಿ.ಮಹೇಶ್, ತನೋಜ್ ನಾಯ್ಡ್, ಹಿರೇಮಗಳೂರು ರಾಮಚಂದ್ರ, ನಗರಸಭೆ ಸದಸ್ಯರುಗಳಾದ ಶದಾಬ್ ಅಲಂ ಖಾನ್, ಮುನೀರ್ ಅಹಮ್ಮದ್, ಖಲಂದರ್, ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.
Congress protest against former home minister Araga Gyanendra