ಖರ್ಗೆ ಬಗ್ಗೆ ಅವಹೇಳನ ಇಡೀ ದಲಿತ ಸಮೂಹಕ್ಕೆ ಮಾಡಿದ ಅವಮಾನ
ಚಿಕ್ಕಮಗಳೂರು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರ ಬಗ್ಗೆ ಹಗುರವಾಗಿ ಮಾತನಾಡಿರುವ ಶಾಸಕ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕ ತೀವ್ರವಾಗಿ ಖಂಡಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ಅಧ್ಯಕ್ಷ ಎಂ.ಮಲ್ಲೇಶ್ ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣದ ಬಗ್ಗೆ ಹಾಗೂ ಕಲ್ಯಾಣ ಕರ್ನಾಟಕದ ಜನರು ಸುಟ್ಟು ಕರಕಲಾಗಿರುತ್ತಾರೆ ಎಂದು ಹೇಳಿರುವುದು ಅವರ ನಿಜವಾದ ಮನಃಸ್ಥತಿಯನ್ನು ಎತ್ತಿ ತೋರಿಸುತ್ತದೆ. ಶಾಸಕ ಆರಗ ಜ್ಞಾನೇಂದ್ರ ನಮ್ಮ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆರವರಿಗೆ ನೀವು ಮಾಡಿದ ಅವಮಾನ ಇಡೀ ದಲಿತ ಸಮುದಾಯಕ್ಕೆ ಅವಮಾನವಾಗಿದೆ ಎಂದು ಆರೋಪಿಸಿದರು.
ಬಿಜೆಪಿ, ಆರ್.ಎಸ್.ಎಸ್ ವಾಟ್ಸಪ್ ಫ್ಯಾಕ್ಟರಿ ಇಂತಹ ಸಂಸ್ಕೃತಿಯನ್ನು ಹೇಳಿಕೊಟ್ಟಿರುವುದು ತಾವು ಮಾಜಿ ಗೃಹ ಸಚಿವರಾಗಿ ರಾಷ್ಟ್ರ ನಾಯಕರ ಬಗ್ಗೆ ಈ ರೀತಿ ಮಾತನಾಡುವುದು ನಿಮಗೆ ಶೋಭೆ ತರುವಂತಹದ್ದಲ್ಲ. ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಟೀಕಿಸಿದರು.
ರಾಷ್ಟ್ರೀಯ ಯುವ ನಾಯಕ ರಾಹುಲ್ ಗಾಂಧಿಯವರು ಚುನಾವಣಾ ಸಂದರ್ಭದಲ್ಲಿ ಮೋದಿಯವರನ್ನು ಟೀಕಿಸಿದ್ದಕ್ಕೆ ಅವರ ಸಂಸತ್ ಸ್ಥಾನವನ್ನು ಅನರ್ಹಗೊಳಿಸಿರುವ ನಿಮ್ಮ ಕೇಂದ್ರ ಸರ್ಕಾರ ಇದೀಗ ತಾವು ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅವಹೇಳನ ಮಾಡಿರುವುದಕ್ಕೆ ನಿಮ್ಮನ್ನು ಸಹ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ನಿಮ್ಮ ಮನೋಭಾವ ಇದೇ ರೀತಿ ಮುಂದುವರೆದರೆ ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕವು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತದೆ. ಈ ಕೂಡಲೇ ತಾವುಗಳು ಮಲ್ಲಿಕಾರ್ಜುನ ಖರ್ಗೆರವರ ಹಾಗೂ ಕಲ್ಯಾಣ ಕರ್ನಾಟಕ ಜನರ ಮತ್ತು ರಾಜ್ಯದಲ್ಲಿರುವ ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಸಿ ಘಟಕದ ಉಪಾಧ್ಯಕ್ಷರಾದ ಶಾಂತಕುಮಾರ್, ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಹೆಚ್.ಸಿ, ರಘು.ಬಿ.ಎಂ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಯಣ್ಣ ಇದ್ದರು.
Insulting Kharge is an insult to the entire Dalit community