ಗೌಡನಹಳ್ಳಿ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ
ಚಿಕ್ಕಮಗಳೂರು: ತಾಲ್ಲೂಕಿನ ಗೌಡನಹಳ್ಳಿ ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರವನ್ನು ಗ್ರಾಮದ ವಿವಿಧ ಮುಖಂಡರುಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಸ್ನ್ನು ಅಲಂಕರಿಸಿ ಪೂಜೆ ಸಲ್ಲಿಸುವ ಮೂಲಕ ಸೋಮವಾರ ಬಸ್ಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಮೋಹನ್ ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಬಸ್ ವ್ಯವಸ್ಥೆಯಿಲ್ಲದೇ ಗ್ರಾಮಸ್ಥರು ಆಟೋ ಅಥವಾ ಸ್ವಂತ ವಾಹನವನ್ನು ಅವಲಂಬಿಸಿದ್ದರು. ಇದೀಗ ಸರ್ಕಾರವು ಹಲವು ಮನವಿ ಮೇರೆಗೆ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿರುವುದು ಸಂತಸ ತಂದಿದೆ ಎಂದರು.
ಗ್ರಾಮದಿಂದ ನಗರಕ್ಕೆ ಸುಮಾರು ೫ ಕಿ.ಮೀ. ಅಂತರವಿದೆ. ಇದನ್ನರಿತು ಸರ್ಕಾರವು ಬಸ್ ವ್ಯವಸ್ಥೆ ಕಲ್ಪಿಸಿರುವು ದರಿಂದ ಸೂಕ್ತ ಸಮಯಕ್ಕೆ ಶಾಲಾ ವಿದ್ಯಾರ್ಥಿಗಳು ತೆರಳಲು ಹಾಗೂ ವಿವಿಧ ಕೆಲಸ ಅಥವಾ ಆರೋಗ್ಯ ಚಿಕಿತ್ಸೆಗೆ ಓಡಾಡಲು ಬಹಳಷ್ಟು ಅನುಕೂಲವಾಗಿದ್ದು ಜೊತೆಗೆ ಸುರಕ್ಷಿತವಾಗಿ ಸಂಚಾರವು ಲಭಿಸಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಧಮಯಂತಿ ಮಾತನಾಡಿ ಪ್ರಸ್ತುತ ಬಸ್ ಸಂಚಾರವು ದಿನದ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸಂಚರಿಸಲಿದ್ದು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿ ಸುವ ಮೂಲಕ ಮದ್ಯಾಹ್ನದ ಸಮಯದಲ್ಲೂ ಬಸ್ ಸಂಚರಿಸಬೇಕೆಂದು ಮನವಿ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಬಸ್ ಸಂಚಾಲಕ ದಿವಾಕರ್, ಕಂಡಕ್ಟರ್, ಛಾಯಾಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ, ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷ ಗಂಗಾಧರ್, ಕಾಂಗ್ರೆಸ್ ಅಂಬಳೆ ಹೋಬಳಿ ಓಬಿಸಿ ಅಧ್ಯಕ್ಷ ಚಿಕ್ಕೇಗೌಡ, ಗ್ರಾಮಸ್ಥರಾದ ಲೋಕೇಶಗೌಡ, ರಘು, ಹರೀಶ್, ಪುಟ್ಟಸ್ವಾಮಿಗೌಡ, ಶೀಲಾ, ಶಶಿಕಲಾ, ನಿಂ ಗಮ್ಮ, ನಾಗಮ್ಮ ಮತ್ತಿತರರು ಹಾಜರಿದ್ದರು.
Govt bus service started for Gaudanahalli village