ಸರಳ ಸಜ್ಜನಿಕೆ ವ್ಯಕ್ತಿತ್ವದ ಜನಪ್ರಿಯ ಶಾಸಕ ತಮ್ಮಯ್ಯ
ಚಿಕ್ಕಮಗಳೂರು: ಹೆಚ್.ಡಿ ತಮ್ಮಯ್ಯ ಅವರು ಜನಪ್ರಿಯ ಶಾಸಕರಾದ ನಂತರ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಕೃತಜ್ಞತೆ ಸಭೆಗಳಿಗೆ ತೆರಳುವ ಮಾರ್ಗಮಧ್ಯೆ ಜಮೀನುಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಸರಳ ಸಜ್ಜನಿಕೆಗೆ ಹೆಸರಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಜಮೀನು ಕೆಲಸ ಮಾಡುವವರ ಸಮಸ್ಯೆಗಳನ್ನು ಕೇಳುವ ಮೂಲಕ ಬಡವರಿಗಾಗಿ ಸರ್ಕಾರ ಉಚಿತ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಅವುಗಳನ್ನು ಪಡೆದುಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಗ್ಯಾರಂಟಿ ಯೋಜನೆಗಳಾದ ಉಚಿತ ಅಕ್ಕಿ, ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಪಡೆದುಕೊಂಡು ಸರ್ಕಾರಿ ಬಸ್ನಲ್ಲಿ ತೆರಳಿ ದೇವರ ದರ್ಶನ ಮಾಡುವಂತೆ ತಿಳಿಸಿದರು.
ಗೃಹ ಜ್ಯೋತಿ ಯೋಜನೆಯಡಿ ಈಗಾಗಲೇ ನೊಂದಾಯಿಸಿರುವ ಗ್ರಾಹಕರಿಗೆ ಈ ತಿಂಗಳಿನಿಂದಲೇ ೨೦೦ ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಗೃಹಲಕ್ಷ್ಮಿ ಯೋಜನೆಯಡಿ ನೊಂದಾಯಿಸಲು ಆ.೧೭ ರವರೆಗೆ ಅವಕಾಶವನ್ನು ನೀಡಿದ್ದು, ಈ ಅವಧಿಯಲ್ಲಿ ನೊಂದಾಯಿಸಿರುವ ಮನೆಯ ಯಜಮಾನಿ ಖಾತೆಗೆ ೨೦೦೦ ಸಾವಿರ ರೂ. ಹಣ ಸಂದಾಯವಾಗಲಿದೆ ಎಂದು ಮನವರಿಕೆ ಮಾಡಿದರು.
ನಿರುದ್ಯೋಗ ಯುವಕರಿಗೆ ಅನುಕೂಲವಾಗಲೆಂದು ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಮುಂದಿನ ದಿನಗಳಲ್ಲಿ ಹಣವನ್ನು ನೀಡಲಾಗುವುದು. ಇಂತಹ ಜನಪರವಾದ ಯೋಜನೆಗಳನ್ನು ಬಡವರಿಗಾಗಿ ಸರ್ಕಾರ ಜಾರಿ ಮಾಡಿದ್ದು, ಇವುಗಳ ಸದ್ಭಳಕೆ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ನಂತರ ಜಮೀನಿನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹಣ್ಣುಗಳನ್ನು ವಿತರಿಸಿ ನೀವು ಮತ ನೀಡುವ ಮೂಲಕ ನಮಗೆ ಆಶೀರ್ವಾದ ಮಾಡಿದ್ದು, ನಿಮ್ಮಗಳ ಸಹಕಾರದಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ನಿಮ್ಮೆಲ್ಲರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.
Tammayya is a popular MLA with a simple gentleman personality