ವ್ಯಾಯಾಮ ಶಾಲೆಗೆ ಜೈ ಭೀಮ್ ಹೆಸರಿಡಲು ಮಾಜಿ ಅಧ್ಯಕ್ಷ ಅಕ್ಬರ್ ಸಲಹೆ
ಚಿಕ್ಕಮಗಳೂರು: ಜಿಮ್ ಗೆ ಹೆಸರಿಡುವ ವಿವಾದ ಸೃಷ್ಟಿಸಿ ಗೊಂದಲ ಉಂಟು ಮಾಡುವುದು ಸರಿಯಲ್ಲ ನಿಯಮ ಅನುಸಾರ ತೀರ್ಮಾನ ಕೈಗೊಂಡು ನಗರಸಭೆ ಆಡಳಿತ ನಡೆಸುವವರು ಅನುಷ್ಠಾನ ಗೊಳಿಸಬೇಕೆಂದು ನಗರ ಸಭಾ ಮಾಜಿ ಅಧ್ಯಕ್ಷ ಮಹಮದ್ ಅಕ್ಬರ್ ಸಲಹೆ ನೀಡಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರ ಸಭೆಯ ಆಡಳಿತ ನಡೆಸುವವರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನು ಬದ್ಧವಾದ ನಿಯಮಗಳಡಿಯಲ್ಲಿ ಕೆಲಸ ಮಾಡಿದರೆ ಯಾವುದೇ ವಿವಾದ ಉಂಟಾಗುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ವಾಧಿಕಾರಿ ನೀತಿಯಂತೆ ತೀರ್ಮಾನ ಕೈಗೊಳ್ಳುತ್ತಿರುವುದರಿಂದ ಗೊಂದಲಕ್ಕೆ ಕಾರಣವಾಗಿದೆ ಎಂದು ಹೇಳಿದರು.
ತಾವು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಗರದ ಮಾರ್ಕೆಟ್ ರಸ್ತೆಗೆ ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ ಎಂದು ನಾಮಕರಣ, ತಮಿಳು ಕಾಲೋನಿಗೆ ಅಜಾದ್ ನಗರ, ಟಿಪ್ಪು ನಗರಕ್ಕೆ ಮತ್ತಿತರ ಬಡಾವಣೆಗಳಿಗೆ ಹೆಸರಿಡುವಾಗ ಸಭೆಯಲ್ಲಿ ನಿರ್ಣಯ ಕೈಗೊಂಡು ಸಾರ್ವಜನಿಕ ಪ್ರಕಟಣೆ ಹೊರಡಿಸಿ ಇಲಾಖೆಯ ಅನುಮತಿ ಪಡೆದ ನಂತರ ಗೆಜೆಟ್ ನಲ್ಲಿ ಪ್ರಕಟವಾದ ನಂತರ ನಾಮಕರಣ ಮಾಡಲಾಗುತ್ತಿತ್ತು. ಈ ರೀತಿ ನಿಯಮಗಳನ್ನು ಅನುಸರಿಸಿ ಕ್ರಮ ಕೈಗೊಂಡರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.
ಕೆ.ಇ.ಬಿಯಿಂದ ತಾಲೂಕು ಕಚೇರಿವರೆಗೆ ಬಸವನಹಳ್ಳಿ ಮುಖ್ಯ ರಸ್ತೆಗೆ ಶಂಕರ ಮಠ ರಸ್ತೆ ಎಂದು ಹೆಸರಿಡಬೇಕೆಂದು ಶೃಂಗೇರಿ ಮಠದವರು ಪತ್ರ ಬರೆದ ಹಿನ್ನೆಲೆಯಲ್ಲಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರದ ಅನುಮತಿ ಪಡೆದು ಅಧಿಕೃತವಾಗಿ ಶಂಕರ ಮಠ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಆದರೆ ಆ ಹೆಸರು ಇನ್ನೂ ಕೂಡ ಚಾಲ್ತಿಗೆ ಬಂದಿಲ್ಲ ಎಂದರು.
ಚಿಕ್ಕಮಗಳೂರು ಜಿಮ್ನಾಷಿಯಂ ಎಂಬ ಹೆಸರು ಹಿಂದಿನಿಂದಲೂ ಇದ್ದ ವ್ಯಾಯಾಮ ಶಾಲೆಯನ್ನು ಉನ್ನತೀಕರಣ ಮಾಡಿ ನಗರಸಭೆಯವರು ಏಕಪಕ್ಷೀಯವಾಗಿ ಹೆಸರಿಡುವ ಬಗ್ಗೆ ತೀರ್ಮಾನ ಕೈಗೊಂಡಿರುವುದರಿಂದ ಶಾಲೆಗೆ ಜೈ ಭೀಮ್ ಎಂಬ ಹೆಸರಿಡುವಂತೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿದ್ದು ಇಡೀ ದೇಶ ಬಿ.ಆರ್ ಅಂಬೇಡ್ಕರ್ ರವರ ಸಂವಿಧಾನದ ಅಡಿ ಆಡಳಿತ ನಡೆಸುತ್ತಿದ್ದು ಅಂಬೇಡ್ಕರ್ ಸಂಕೇತವಾದ ಜೈ ಭೀಮ್ ಎಂಬ ಹೆಸರಿಡುವುದು ಸೂಕ್ತವಾಗಿದ್ದು ನಗರಸಭೆಯವರು ಆ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಆನ್ಸರ್, ನೂರು ಪಾಷ, ಶೋಹೇಬ್ ಉಪಸ್ಥಿತರಿದ್ದರು.
Jai Bheem is the name of the exercise school