ಸಾಧನೆಗೆ ಶರೀರವೇ ಅಡಿಪಾಯ
ಚಿಕ್ಕಮಗಳೂರು: ಸಾಧನೆಗೆ ಶರೀರವೇ ಅಡಿಪಾಯ. ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ದೇಹ ಮತ್ತು ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳಬಹುದು ಎಂದು ಅಭಾಸಪ ನಿಕಟಪೂರ್ವ ಜಿಲ್ಲಾಧ್ಯಕ್ಷ, ವಾಗ್ಮಿ ಚಟ್ನಳ್ಳಿಮಹೇಶ್ ನುಡಿದರು
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಹಯೋಗದೊಂದಿಗೆ ಶ್ರಾವಣಮಾಸದ ಪ್ರವಚನ ಮಾಲಿಕೆ ’ಮುತ್ತಿನಂತ ಮತು’ ಅಭಿಯಾನದ ಅಂಗವಾಗಿ ವಾಸವಿ ವಿದ್ಯಾಸಂಸ್ಥೆಯಲ್ಲಿ ಅವರು ’ಸದೃಢ ದೇಹ-ಬಲಿಷ್ಠ ಮನಸ್ಸು’ ಕುರಿತಂತೆ ಸಂವಾದಿಸಿ ಉಪನ್ಯಾಸ ನೀಡಿದರು.
ಮಾನವನ ಎಲ್ಲ ಸಾಧನೆಗೂ ದೇಹ ಮತ್ತು ಮನಸ್ಸು ಬಹಳ ಮುಖ್ಯ. ಇವೆರಡನ್ನೂ ಸುಸ್ಥಿತಿಯಲ್ಲಿಟ್ಟುಕೊಳ್ಳಲು ಪಂಚೇಂದ್ರಿಗಳ ನಿಯಂತ್ರಣ ಅತ್ಯಗತ್ಯ ಎಂಬುದನ್ನು ಶರಣರು ಮತ್ತು ದಾಸರು ತಮ್ಮ ಅನುಭಾವದ ನುಡಿಗಳಲ್ಲಿ ವಿವರಿಸಿದ್ದಾರೆಂದರು.
ಭಗವಂತನ ಒಲಿಸಲು ಬಂದ ಕಾಯವಿದು, ವ್ರತ ಕೆಡಿಸಬಾರದು. ಅನ್ನ ಪ್ರಸಾದಿಭಾವ ನಮ್ಮದು. ಶರೀರಕ್ಕೆ ಯೋಗದ ಸ್ಥಿತಿ. ದೇಹ ಮತ್ತು ಮನಸ್ಸು ಸಮೀಕರಣದ ಕ್ರಮವೇ ಯೋಗ ಎಂದ ಚಟ್ನಳ್ಳಿಮಹೇಶ್, ಸಾಧನೆಗೆ ಅಂತರಂಗ ಮತ್ತು ಬಹಿರಂಗ ಎರಡ ಶುದ್ಧಿಕರಣ ಮುಖ್ಯ ಎಂಬುದು ಈ ನೆಲದ ಸಂಸ್ಕೃತಿಯ ಕಲ್ಪನೆ ಎಂದರು.
ಸಹಜವಾದ ಮಾತು ಪ್ರಕೃತಿಯಾದರೆ, ಮತ್ತೊಬ್ಬರನ್ನು ನೋಯಿಸುವ ಮಾತು ವಿಕೃತಿ. ಬೇರೆಯವರ ಮನಸ್ಸನ್ನು ಅರಳಿಸುವ ಮಾತು ಸಂಸ್ಕೃತಿಗೆ ಉದಾಹರಣೆ ಎಂದ ಅವರು, ಸೌಂದರ್ಯ ಮುಖದ ಮೇಲಿರುವುದಲ್ಲ, ಮಾಡುವ ಸತ್ಕಾರ್ಯದಲ್ಲಿದೆ. ಅಣಿಮುತ್ತುಗಳನ್ನು ಕೇಳಿದರೆ ಮನಸ್ಸು ಶುದ್ಧಗೊಂಡು ಒಳ್ಳೆಯ ಕಾರ್ಯಗಳಿಗೆ ಪ್ರೇರಣೆಯಾಗುತ್ತದೆ ಎಂದರು.
’ನಾನು’ ಎಂಬ ಅಹಂಕಾರವನ್ನು ಕಿತ್ತೊಗೆದು ’ನಾವು’ ಎಂಬ ಸಂಘಟಿತ ರೂಪ ಬೆಳೆಸುವುದೇ ಸಾಹಿತ್ಯ ಮತ್ತು ಸಂಸ್ಕೃತಿಯ ಬಹುದೊಡ್ಡ ಹೊಣೆಗಾರಿಕೆ. ಸದೃಢ ದೇಹದಲ್ಲಿ ಸದೃಢಮನಸ್ಸು ಇರುತ್ತದೆ ಎಂಬುದು ಜಾಗತಿಕ ಸತ್ಯ. ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ.. ಎಂದು ದಾಸರು ಎಚ್ಚರಿಸಿದ್ದಾರೆ. ಲಿಂಗ ವ್ಯಸನಿ ಜಂಗಮ ಪ್ರೇಮಿ ಎಂದು ಶರಣರು ನುಡಿದಿದ್ದಾರೆಂದು ಉಲ್ಲೇಖಿಸಿದ ಚಟ್ನಳ್ಳಿಮಹೇಶ್, ಆರೋಗ್ಯಪೂರ್ಣವಾಗಿ ಜೀವನ ನಡೆಸುವುದು ಮುಖ್ಯ ಎಂದರು.
ಪಾರ್ವತಿ ಮಹಿಳಾಮಂಡಳಿ ಕಾರ್ಯದರ್ಶಿ ಭವಾನಿವಿಜಯಾನಂದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಒಳ್ಳೆಯ ವಿಚಾರಗಳು ಮಕ್ಕಳ ಕಿವಿಯಮೇಲೆ ಬಿದ್ದರೆ ಅವರಲ್ಲಿ ಸಕಾರಾತ್ಮಕವಾದ ಪರಿವರ್ತನೆಗೆ ಅವಕಾಶವಾಗುತ್ತದೆ. ಶ್ರಾವಣಮಾಸದಲ್ಲಿ ಎರಡು ಸಾಂಸ್ಕೃತಿಕ ಸಂಘಟನೆಗಳು ಜ್ಞಾನದ ದಾಸೋಹವನ್ನು ಅಭಿಯಾನದ ಮೂಲಕ ಹಂಚುತ್ತಿವೆ ಎಂದು ಶ್ಲಾಘಿಸಿದರು.
ಹಿರಿಯಶಿಕ್ಷಕ ಸಾಹಿತಿ ರಮೇಶ್ಬೊಂಗಾಳೆ ಸ್ವಾಗತಿಸಿ, ಪ್ರಾಸ್ತಾವಿಸಿದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು. ಮುಖ್ಯಶಿಕ್ಷಕ ಬಿ.ಆರ್.ಕುಮಾರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು
Abhasaap immediate past district president orator Chatnallimahesh