ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ
ಚಿಕ್ಕಮಗಳೂರು: ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಎಚ್ ಡಿ ತಮ್ಮಯ್ಯ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಭಾನುವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಜನಾಂಗ ಏನು ಅದರ ಶಕ್ತಿ ಏನು ಎಂಬುದನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟವರು ವಿಶ್ವಕರ್ಮರು ಯಾವುದೇ ಒಂದು ಮರ ಅಥವಾ ಬಂಡೆಯನ್ನು ಸುಂದರವಾಗಿ ಕೆತ್ತಿ ಅದಕ್ಕೆ ಜೀವ ತುಂಬಿ ಜನ ಅದನ್ನು ಆರಾಧಿಸುವಂತೆ ಮಾಡಿದವರು ವಿಶ್ವಕರ್ಮ ಸಮುದಾಯದವರು ಎಂದರು.
ವಿಶ್ವಕರ್ಮ ಜನಾಂಗದ ಪ್ರತಿಭೆಗೆ ಬೇಲೂರು ಮತ್ತು ಹಳೆಬೀಡಿನ ದೇವಾಲಯಗಳು ಸಾಕ್ಷಿ ಎಂದು ತಿಳಿಸಿದರು.
ಪ್ರಧಾನ ಉಪನ್ಯಾಸ ನೀಡಿದ ಸಾಹಿತಿ ಚಟ್ನಳ್ಳಿ ಮಹೇಶ್ ಯಾವುದೇ ಮಹಾತ್ಮರ ಜಯಂತಿಗಳನ್ನು ಬರಿ ಆಚರಣೆ ಮಾಡಿದರೆ ಸಾಲದು ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಆಚರಣೆಗೆ ಅರ್ಥ ಬರುತ್ತದೆ ಎಂದರು.
ವಿಶ್ವಕರ್ಮ ಪ್ರಪ್ರಥಮ ಇಂಜಿನಿಯರ್ ಮತ್ತು ಪ್ರಪ್ರಥಮ ವಾಸ್ತುಶಿಲ್ಪಿ ಎಂದು ಬಣ್ಣಿಸಿದ ಅವರು ಮಹರ್ಷಿ ವಿಶ್ವಕರ್ಮರ ಬದುಕು ಮತ್ತು ಜೀವನ ವೃತ್ತಾಂತವನ್ನು ವಿವರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
Vishwakarma Jayanti