ಅಗ್ನಿಶಾಮಕ ಠಾಣೆಯ ಎಚ್.ಕೆ.ದೇವೇಂದ್ರಪ್ಪ-ಬಸವರಾಜುಗೆ ಮುಖ್ಯಮಂತ್ರಿಗಳ ಪದಕ
ಚಿಕ್ಕಮಗಳೂರು: ಉತ್ತಮ ಸೇವೆಯನ್ನು ಪರಿಗಣಿಸಿ ಮೂಡಿಗೆರೆ ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ಎಚ್.ಕೆ.ದೇವೇಂದ್ರಪ್ಪ ಹಾಗೂ ಕಡೂರು ಅಗ್ನಿಶಾಮಕ ಠಾಣೆಯ ನಿವೃತ್ತ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಸವರಾಜು ಅವರಿಗೆ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಪದಕ ನೀಡಿ ಗೌರವಿಸಿದೆ.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಬ್ಬರು ಸಾಧಕರಿಗೆ ಪದಕಗಳನ್ನು ಪ್ರದಾನ ಮಾಡಿದ್ದಾರೆ.
ಮೂಡಿಗೆರೆ ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ಎಚ್.ಕೆ.ದೇವೇಂದ್ರಪ್ಪಮಾತನಾಡಿ ೩೫ ವರ್ಷದ ಸೇವೆಯನ್ನು ಪರಿಗಣಿಸಿ ಮೇಲಾಧಿಕಾರಿಗಳು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಮುಖ್ಯಮಂತ್ರಿ ಪದಕ ಘೋಷಿಸಿದೆ. ಸಾರ್ವಜನಿಕರ ಜೀವ, ಆಸ್ತಿ,ಪಾಸ್ತಿ ರಕ್ಷಣೆಗೆ ನಮ್ಮ ಪ್ರಾಣವನ್ನು ಒತ್ತೆಯಿಟ್ಟು ಶ್ರಮಿಸುತ್ತೇವೆ. ಮುಖ್ಯಮಂತ್ರಿ ಪದಕ ನೀಡಿ ಗೌರವಿಸಿದ್ದಕ್ಕೆ ಅಗ್ನಿಶಾಮಕ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ನಿವೃತ್ತ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬಸವರಾಜ್ ಮಾತನಾಡಿ, ೧೯೮೮ ರಲ್ಲಿ ಇಲಾಖೆಗೆ ಸೇರಿದಾಗಿನಿಂದಲೂ ನಿವೃತ್ತಿ ಹೊಂದಿದ ವರೆಗೆ ೩೫ ವರ್ಷದ ಸೇವೆಯಲ್ಲಿ ಹಲವು ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ೧೯೯೬ ರಲ್ಲಿ ಕಡೂರಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಬೋರ್ವೆಲ್ನಲ್ಲಿ ಬಿದ್ದಿದ್ದ ಮಗುವೊಂದನ್ನು ರಕ್ಷಿಸುವ ಭಾಗ್ಯ ನಮ್ಮದಾಗಿತ್ತು. ಇದು ವಿಶ್ವದಲ್ಲೇ ಮೊದಲೆಂಬ ದಾಖಲೆಯಾಗಿದೆ.
ಇದಲ್ಲದೆ ಸಾಗರದ ಜೋಗ್ ಫಾಲ್ಸ್ನಲ್ಲಿ ೪೦೦ ಅಡಿ ಕೆಳಗೆ ಸಿಲುಕಿದ್ದ ವ್ಯಕ್ತಿಯೋಬ್ಬನನ್ನು ಹರಸಾಹಸ ಪಟ್ಟು ಸಿಬ್ಬಂದಿಗಳೊಂದಿಗೆ ಸೇರಿ ರಕ್ಷಿಸಿದ್ದೇವೆ. ಅನೇಕ ಅಪಘಾತ ಪ್ರಕರಣಗಲ್ಲಿ ಗಾಯಗೊಂಡವರು, ಬಾವಿ, ಕೆರೆ ಕಟ್ಟೆಗಳಲ್ಲಿ ಸಿಲುಕಿದವರನ್ನು ರಕ್ಷಿಸಿದ್ದೇವೆ. ಭದ್ರಾವತಿಯ ಎಂಪಿಎಂನಲ್ಲಿ ಸಂಭವಿಸಿದ ಬೆಂಕಿ ಅವಘಡ, ಮೂಡಿಗೆರೆಯ ಆಲೇಕಾನ್ ಹೊರಟ್ಟಿಯಲ್ಲಿ ಸಂಭವಿಸಿದ ಅತೀವೃಷ್ಠಿ ಅನಾಹುತಗಳಲ್ಲಿ ರಕ್ಷಣಾ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದೇವೆ.
ಇದೆಲ್ಲವನ್ನೂ ಗಮನಿಸಿ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳು ಮುಖ್ಯಮಂತ್ರಿಗಳ ಪದಕಕ್ಕೆ ಶಿಪಾರಸು ಮಾಡಿದ್ದರು ಇದಕ್ಕಾಗಿ ನಾವು ಅಭಾರಿಯಾಗಿರುತ್ತೇವೆ ಎಂದರು.
Chief Minister’s Medal to HK Devendrappa-Basavaraju