ಅ.14 ರಂದು ಧಮ್ಮೋಪದೇಶ – ಧಮ್ಮದೀಕ್ಷಾ ಕಾರ್ಯಕ್ರಮ
ಚಿಕ್ಕಮಗಳೂರು: ಭಾರತೀಯ ಬೌದ್ಧ ಮಹಾಸಭಾ ಚಿಕ್ಕಮಗಳೂರು ಘಟಕದಿಂದ ಅ.೧೪ ರಂದು ಧಮ್ಮೋಪದೇಶ ಮತ್ತು ಧಮ್ಮದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಹಂಗಾಮಿ ಅಧ್ಯಕ್ಷ ಎಂ.ಎಸ್.ಅನಂತ್ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ನಗರದ ಕುವೆಂಪು ಕಲಾಮಂದಿರದಲ್ಲಿ ಅಂದು ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆಯೋಜಿಸಿದ್ದು ಅದಕ್ಕೂ ಮುನ್ನ ನಗರದ ತಾಲ್ಲೂಕು ಕಛೇರಿಯಿಂದ ಎಂಜಿ ರಸ್ತೆ ಮೂಲಕ ಶಾಂತಿಮೆರವಣಿಗೆ ನಡೆಯಲಿದೆ ಎಂದರು.
ದೇವನಹಳ್ಳಿ ಚೌಡಪ್ಪನಹಳ್ಳಿಯ ಅಶೋಕ ಬುದ್ದವಿಹಾರದ ನ್ಯಾನಲೋಕ ಭಂತೇಜಿ, ಬೀದರ್ ಬುದ್ದವಿಹಾರದ ನಾಗರತ್ನ ಭಂತೇಜಿ ಸಾನಿಧ್ಯ ವಹಿಸಲಿದ್ದು ರಾಜ್ಯ ಮಹಾಸಭಾ ಅಧ್ಯಕ್ಷ ಡಾ.ಶಿವಕುಮಾರ್ ಭಾಗವಹಿಸಲಿದ್ದಾರೆ. ಸಾಮೂಹಿಕ ಬುದ್ದಪ್ರವಂದನೆ ಧಮ್ಮಪ್ರವಚನ, ಧಮ್ಮದೀಕ್ಷಾ ಕಾರ್ಯಕ್ರಮ, ಭಂತೇಜಿ ಅವರಿಂದ ಪ್ರವಚನ ನಡೆಯಲಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ೧೪ ಅಕ್ಟೋಬರ್ ೧೯೫೬ ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧಧಮ್ಮದೀಕ್ಷೆ ಪಡೆದರು. ಬುದ್ಧರು ನೀಡಿದ ಪ್ರೀತಿ, ಕರುಣೆ, ಮೈತ್ರೀಯ ಶಾಂತಿ ಸಂದೇಶದ ಮಹತ್ವ ಸಾರಿದ ದಿನದ ನೆನೆಪಿಗಾಗಿ ಅಂದು ಧಮ್ಮ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ ಮಾತನಾಡಿ ಶೋಷಿತರಿಗೆ ಬೌದ್ಧಧಮ್ಮ ಅನಿವಾರ್ಯ ಹಾಗೂ ಸಕಾಲಿಕವಾಗಿದೆ. ಸನಾತನ ಧರ್ಮದ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಮನುಷ್ಯರನ್ನು ಉತ್ತಮ ಚಿಂತನೆಗೆ ದೂಡುವ ವಿಚಾರಗಳು ಇಲ್ಲದಾಗಿದೆ ಎಂದು ವಿಷಾಧಿಸಿದರು.
ಹಿಂದೂ ಧರ್ಮದ ಅನಿಷ್ಠ ಪದ್ದತಿಗಳ ವಿರುದ್ಧ ಅಂಬೇಡ್ಕರ್ ಜೀವಮಾನವಿಡಿ ಸಿಡಿದೆದ್ದು ಕೊನೆಗೆ ಬೌದ್ಧ ಧಮ್ಮ ಸ್ವೀಕರಿಸಿದರು. ಬರಿ ಅಸ್ಪೃಶ್ಯರನ್ನು ಮಾತ್ರ ಅಲ್ಲ ಎಲ್ಲ ಸಮುದಾಯದ ಶೋಷಿತರನ್ನು ಬೌದ್ಧ ಧಮ್ಮಕ್ಕೆ ಕರೆದುಕೊಂಡು ಹೋಗುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು. ಮಹಾಸಭಾದ ಕಾರ್ಯದರ್ಶಿ ಅನಿಲ್ಕುಮಾರ್, ಹುಣಸೇಮಕ್ಕಿ ಲಕ್ಷ್ಮಣ ಮಾತನಾಡಿದರು. ಭೀಮ್ ಆರ್ಮಿ ಹೊನ್ನೇಶ್, ಡಿಎಸ್ಎಸ್ ದಂಟರಮಕ್ಕಿ ಶ್ರೀನಿವಾಸ್, ಓಂಪ್ರಕಾಶ್, ಹರೀಶ್ಮಿತ್ರ ಮತ್ತಿತರರಿದ್ದರು
Dhammopadesh – Dhammadiksha program on A.14