ನಗರಸಭೆ ಕಂದಾಯ ಪಾವತಿ ಮಾಡದಿದ್ದಲ್ಲಿ ಶಿಸ್ತುಕ್ರಮ
ಚಿಕ್ಕಮಗಳೂರು: ನಗರದಲ್ಲಿ ಅತಿ ಹೆಚ್ಚು ನೀರಿನ ಕಂದಾಯ ಮತ್ತು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರನ್ನು ಗುರುತಿಸಿ ಶೀಘ್ರದಲ್ಲಿ ಪಾವತಿ ಮಾಡುವಂತೆ ತಿಳಿಸಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ನಗರಸಭೆ ನೀರು ಸರಬರಾಜು ಶಾಖೆ ಸಿಬ್ಬಂದಿ ಮತ್ತು ವಾಲ್ಮೆನ್ಗಳು, ಫಿಟ್ಟರ್ಗಳು, ಇಂಜಿನಿಯರ್ಸ್, ಎಇಇ ಇವರೊಂದಿಗೆ ಸಭೆ ನಡೆಸಿ ಚರ್ಚಿಸಿ ನಗರದಲ್ಲಿ ಬಾಕಿ ಉಳಿದ ನೀರು ಮತ್ತು ಆಸ್ತಿ ತೆರಿಗೆಯ ಬಗ್ಗೆ ಚರ್ಚಿಸಲಾಗಿದ್ದು, ವಾಲ್ಮ್ಯಾನ್ಗಳು ಅವರಿಗೆ ಸಂಬಂದಪಟ್ಟ ವಾರ್ಡ್ಗಳಲ್ಲಿ ತೆರಿಗೆ ಪಾವತಿ ಮಾಡದಿದ್ದರು ಕೆಲವು ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿದ್ದು, ಮನೆ-ಮನೆಗಳಿಗೆ ತೆರಳಿ ಬಾಕಿ ಇರುವ ನೀರಿನ ತೆರಿಗೆ ವಸೂಲಾತಿ ಮಾಡುವಂತೆ ನೀರು ಸರಬರಾಜು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ಸಾರ್ವಜನಿಕರಿಗೆ ಅನುಕೂಲ ಆಗುವಂತೆ ತಿಂಗಳಿಗೆ, ಮೂರು ತಿಂಗಳಿಗೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕೊಮ್ಮೆ ಕಂದಾಯ ಕಟ್ಟುವ ಅವಕಾಶವಿದೆ, ತಿಂಗಳಿಗೆ ೧೨೦ ರೂಗಳು, ವರ್ಷಕ್ಕೆ ೧೪೪೦ ರೂ ನೀರಿನ ತೆರಿಗೆ ನಿಗದಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೌಂಟರ್ ಪ್ರಾರಂಭಿಸಿ ಪ್ರತಿ ತಿಂಗಳು ಕಟ್ಟುವ ವ್ಯವಸ್ಥೆ ಮಾಡುವಂತೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗುವುದು, ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿ ಮಾಡುವಂತೆ ತಿಳಿಸಿದರು.
ಬಾಕಿ ಉಳಿದ ಕಂದಾಯವನ್ನು ತಿಂಗಳ ಅಂತ್ಯದೊಳಗಾಗಿ ಸಾರ್ವಜನಿಕರು ಪಾವತಿ ಮಾಡಿ ನಗರಸಭೆಯೊಂದಿಗೆ ಸಹಕರಿಸಬೇಕು, ಇಲ್ಲವಾದಲ್ಲಿ ನಗರಸಭೆಯಿಂದ ದೋರೆಯುವ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸುವುದರ ಜೊತೆಗೆ, ಜಪ್ತಿಯಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿ ರಮೇಶ್ ನಾಯ್ಡ್, ಇಂಜಿನಿಯರ್ ರಶ್ಮಿ, ವಿನುತ ಮತ್ತಿತರರು ಉಪಸ್ಥಿತರಿದ್ದರು.
Disciplinary action for non-payment of municipal revenue