ಜಿಲ್ಲೆಯಲ್ಲಿ ಬೀದಿದೀಪ ಅಳವಡಿಕೆಯಲ್ಲಿ ಬಾರೀ ಹಣ ದುರುಪಯೋಗ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೀದಿದೀಪ ಅಳವಡಿಕೆಯಲ್ಲಿ ಬಾರೀ ಹಣ ದುರುಪಯೋಗವಾಗಿದೆ. ಲೋಕಾಯುಕ್ತಕ್ಕೆ ದೂರು ನೀಡಿದ್ದು, ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಸೈಯದ್ ಜಮೀಲ್ ಅಹಮದ್ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿಯವರು ೨೦೨೨ ಮಾಚ್ ೧೫ರಂದು ಮೇ| ಇ-ಸ್ಮಾರ್ಟ್ ಎನರ್ಜಿ ಸಲ್ಯೂಷನ್ಸ್ ಪ್ರವೇಟ್ ಲಿಮಿಟೆಡ್ ಕಂಪನಿಗೆ ಎಲ್ಇಡಿ ಬೀದಿದೀಪ ಅಳವಡಿಕೆಗೆ ಟೆಂಡರ್ ನೀಡಿದ್ದು, ಹಿಂದಿನ ಬಿಜೆಪಿ ಆಡಳಿತದಲ್ಲಿ ಬೀದಿ ದೀಪ ಅಳವಡಿಕೆಯಲ್ಲಿ ಭಾರೀ ಭ್ರಷ್ಟಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಿದರು.
ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಲ್ಲಿ ರಸ್ತೆ ಬದಿಯಲ್ಲಿ ಎಲ್ಇಡಿ ಬಲ್ಬ ಬೀದಿದೀಪ ಅಳವಡಿಸಿದ್ದು, ಇದರಲ್ಲಿ ಬಾರೀ ಅವ್ಯವಹಾರ ನಡೆದಿದೆ. ಈ ಎಲ್ಇಡಿ ಬಲ್ಬಗಳು ಕಳಪೆ ಗುಣಮಟ್ಟದಾಗಿದ್ದು, ಮೇ| ಇ-ಸ್ಮಾರ್ಟ್ ಎನರ್ಜಿ ಸಲ್ಯೂಷನ್ಸ್ ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಎಲ್ಇಡಿ ಬಲ್ಬ ಅಳವಡಿಕೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ೨೩,೯೭,೧೭೨ ರೂ. ಭ್ರಷ್ಟಚಾರ ನಡೆದಿದ್ದು, ಸಾರ್ವಜನಿಕರ ಹಣ ಲೂಟಿ ಹೊಡೆ ಯಲಾಗಿದೆ. ಜೊತೆಗೆ ರಾಜ್ಯದ ಮೈಸೂರು, ಕಲಬುರಗಿ, ಬಳ್ಳಾರಿ, ಕೋಲಾರದಲ್ಲಿ ಬೀದಿದೀಪ ಅಳವಡಿಕೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಭಾರೀ ಭ್ರಷ್ಟಚಾರ ನಡೆಸಿದೆ. ಲೋಕಾಯುಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಆಮ್ ಆದ್ಮಿ ಮುಖಂಡ ರಾದ ಡಾ|ಸುಂದರಗೌಡ, ಲಿಂಗಾರಾಧ್ಯ ಇದ್ದರು.
Aam Aadmi Party Minority Wing President Syed Jameel Ahmed press conference