ಅ. 19 ರಿಂದ 24ರ ವರೆಗೆ ಕಾಫಿ ನಾಡಿನಲ್ಲಿ ನಿಷೇದಾಜ್ಞೆ ಜಾರಿ
ಚಿಕ್ಕಮಗಳೂರು: ಮಹಿಷ ದಸರಾ ಸಂಬಂಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರ ವಿರೋಧ ಚರ್ಚೆಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ಹಾಗೂ ಮಹಿಷ ದಸರಾ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುಂಜಾಗ್ರತ ಕ್ರಮವಾಗಿ ಅ.19ರಿಂದ 24 ರವರೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಮಹಿಷ ದಸರಾ ಸಂದರ್ಭದಲ್ಲಿ ಯಾವುದೇ ರೀತಿಯ ಮೆರವಣಿಗೆ, ಪ್ರಚೋದನಾತ್ಮಕ ಭಾಷಣ, ಪೋಸ್ಟರ್, ಫ್ಲೆಕ್ಸ್ ಹಾಕಬಾರದು. ಈ ಸಂದರ್ಭದಲ್ಲಿ ಯಾವುದೇ ಪ್ರತಿಭಟನೆ ನಡೆಸುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ನಿಷೇದಾಜ್ಞೆ ಅವಧಿಯಲ್ಲಿ ಘೋಷಣೆಗಳನ್ನು ಕೂಗುವುದು, ಆವೇಶಭರಿತರಾಗಿ ಭಾಷಣ ಮಾಡುವುದು, ಸಂಗೀತ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ. ಯಾರಾದರೂ ನಿಷೇದಾಜ್ಞೆ ಉಲ್ಲಂಘನೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಅ. 20ರಂದು ಮಹಿಷ ದಸರಾ ಅಂಗವಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್ ನಿಂದ ಆಜಾದ್ ಪಾರ್ಕ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಲು ಮಹಿಷ ದಸರಾ ಆಚರಣಾ ಸಮಿತಿ ಮುಂದಾಗಿತ್ತು. ಜೊತೆಗೆ ಮಹಿಷ ದಸರಾದ ಸಭಾ ಕಾರ್ಯಕ್ರಮವನ್ನು ಚಿಂತಕ ಪ್ರೊ.ಭಗವಾನ್ ನೆರವೇರಿಸಲಿದ್ದರು. ಆದರೆ ನಿಷೇದಾಜ್ಞೆ ಜಾರಿಯಿಂದಾಗಿ ಮಹಿಷ ದಸರಾ ಅಂಗವಾಗಿ ನಡೆಯಬೇಕಿದ್ದ ಮೆರವಣಿಗೆ ರದ್ದಾದಂತಾಗಿದೆ.
ಮಹಿಷ ದಸರ ಕಾರ್ಯಕ್ರಮಕ್ಕೆ ಚಿಂತಕ ಪ್ರೊಫೆಸರ್ ಭಗವಾನ್ ಆಗಮಿಸುವುದಕ್ಕೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಪ್ರಮುಖವಾಗಿ ಒಕ್ಕಲಿಗರ ಸಂಘ, ಶ್ರೀರಾಮ ಸೇನೆ ಕಾರ್ಯಕರ್ತರು ಭಗವಾನ್ ಚಿಕ್ಕಮಗಳೂರಿಗೆ ಬಂದಲ್ಲಿ ಅವರಿಗೆ ಮಸಿ ಬಳಿಯುವುದಾಗಿ ಜೊತೆಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಭಗವಾನ್ ಚಿಕ್ಕಮಗಳೂರಿಗೆ ಬಾರದಂತೆ ಗಡಿಪಾರು ಮಾಡಬೇಕು ಎಂದು ಡಿಸಿಗೆ ಮನವಿಯನ್ನು ಸಲ್ಲಿಸಲಾಗಿತ್ತು.
ಮಹಿಷ ದಸರಾಗೆ ಭಗವಾನ್ ಬಂದಲ್ಲಿ ಮಸಿಬಳಿಯುವುದಾಗಿ ಕೆಲ ಸಂಘಟನೆಗಳು ಹೇಳಿಕೆ ನೀಡಿದ್ದ ಬೆನ್ನಲ್ಲೇ ದಲಿತ ಸಂಘಟನೆಗಳು ಭಗವಾನ್ ಅವರನ್ನು ಕರೆಯಿಸುತ್ತೇವೆ. ಅವರಿಗೆ ಮಸಿ ಬಳಿಯಲು ಬಂದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಜೊತೆಗೆ ಭಗವಾನ್ ಅವರಿಗೆ ಮಹಿಳಾ ಕಾರ್ಯಕರ್ತರಿಂದ ಮಸಿ ಬಳಿಸುವ ಸಾಧ್ಯತೆಯಿರುವುದರಿಂದ ಭಗವಾನ್ ಅವರಿಗೆ ನಾವು ಮಹಿಳೆಯರಿಂದಲೇ ರಕ್ಷಣೆ ಕೊಡಿಸುತ್ತೇವೆ ಎಂದು ಹೇಳಿದ್ದರು.
ಈ ಎಲ್ಲ ಘಟನಾವಳಿಗಳನ್ನು ಅವಲೋಕಿಸಿದ ಎಸ್ ಪಿ ವಿಕ್ರಮ್ ಅಮಟೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮುಂಜಾಗ್ರಾತಾ ಕ್ರಮವಾಗಿ ಅ.19 ರಿಂದ 24ರವರೆಗೆ ನಿಷೇದಾಜ್ಞೆ ಜಾರಿಗೊಳಿಸುವಂತೆ ಡಿಸಿ ಮೀನಾ ನಾಗರಾಜ್ ಅವರಿಗೆ ಶಿಫಾರಸ್ಸು ಮಾಡಿದ್ದರು. ಎಸ್ ಪಿ ಶಿಫಾರಸ್ಸಿನ ಮೇಲೆ ನಿಷೇದಾಜ್ಞೆ ಜಾರಿಗೊಳಿಸಿ ಡಿಸಿ ಆದೇಶಿಸಿದ್ದಾರೆ.
A. Prohibition in coffee country from 19th to 24th