50 ಲಕ್ಷ ರೂಪಾಯಿ ಹಣ ಪಡೆದಿದ್ದಾರೆಂಬ ಸದಸ್ಯ ಎ.ಸಿ ಕುಮಾರ್ ಆರೋಪ ನಿರಾಧಾರ
ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ರವರನ್ನು ಬೆಂಬಲಿಸಲು ಕಾಂಗ್ರೇಸಿಗರು ೫೦ ಲಕ್ಷ ರೂಪಾಯಿ ಹಣ ಪಡೆದಿದ್ದಾರೆಂಬ ಸದಸ್ಯ ಎ.ಸಿ ಕುಮಾರ್ರವರ ಆರೋಪ ನಿರಾಧಾರ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಂಜೇಗೌಡ ಹೇಳಿದರು.
ನಗರದಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಕೋಮುವಾದಿ ಬಿಜೆಪಿಯನ್ನು ಬೆಂಬಲಿಸಿದ ಎ.ಸಿ ಕುಮಾರ್ರವರಿಗೆ ಅವರು ದಲಿತರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ಕಾಂಗ್ರೇಸ್ ಪಕ್ಷದ ಸದಸ್ಯರೆಲ್ಲರೂ ಜಾತ್ಯಾತೀತ ನಿಲುವಿಗೆ ಬದ್ದರಾಗಿ ಕೋಮುವಾದಿ ಬಿಜೆಪಿ ಪಕ್ಷದ ವಿರುದ್ದ ವಿರೋಧಿ ಸ್ಥಾನದಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದೇವೆ ಅವರು ನೀಡಿರುವ ಹೇಳಿಕೆಗೆ ಸೂಕ್ತ ದಾಖಲೆ ಒದಗಿಸದಿದ್ದರೆ ಅವರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲು ಹಿಂಜರಿಯುವುದಿಲ್ಲ ಎಂದು ಹೇಳಿದರು. ಕಾಂಗ್ರೇಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಗರಿಗೆ ವರಸಿದ್ದಿವೇಣುಗೋಪಾಲ್ರವರ ರಾಜೀನಾಮೆ ಪಡೆದುಕೊಳ್ಳಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ವಕ್ತಾರ ರೂಬಿನ್ಮೋಸೆಸ್ ಮಾತನಾಡಿ ಬಿಜೆಪಿಯವರಿಗೂ ಕಾಂಗ್ರೇಸ್ನವರಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಬಿಜೆಪಿಯ ಮುಖಂಡರು ಕಾಂಗ್ರೇಸ್ನ ಸದಸ್ಯರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ಆವಿಶ್ವಾಸ ಗೊತ್ತುವಳಿ ಮನವಿ ಪತ್ರಕ್ಕೆ ಸಹಿ ಹಾಕಿಸುವ ಪ್ರಯತ್ನ ನಡೆಸುತ್ತಿದ್ದಾರೆ ನಾವು ಹೈಕಮಾಂಡ್ನ ತೀರ್ಮಾನಕ್ಕೆ ಬದ್ದರಾಗಿದ್ದು ಅವಿಶ್ವಾಸ ನಿರ್ಣಯ ಗೊತ್ತುವಳಿ ಪತ್ರಕ್ಕೆ ಕಾಂಗ್ರೇಸ್ ಸದಸ್ಯರು ಯಾರು ಸಹಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಲಕ್ಷ್ಮಣ್, ಜಾವೀದ್, ಮುನೀರ್, ಪರಮೇಶ್, ಇಂದಿರಾಶಂಕರ್, ಮುಖಂಡರಾದ ತನೋಜ್ನಾಯ್ಡು ಸೇರಿದಂತೆ ಹಲವರಿದ್ದರು.
Block Congress President Manje Gowda press conference