ವರಸಿದ್ದಿ ವೇಣುಗೋಪಾಲ್ ವಿರುದ್ಧ ಬಿಜೆಪಿಯ ಸದಸ್ಯರು ಅವಿಶ್ವಾಸ ನಿರ್ಣಯ
ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ಧ ಬಿಜೆಪಿಯ ಎಲ್ಲಾ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸುವ ತೀರ್ಮಾನ ಕೈಗೊಂಡಿದ್ದು, ಈ ಸಬಂಧ ಗುರುವಾರ ನಗರಸಭೆ ಆಯುಕ್ತರಿಗೆ ಪತ್ರ ನೀಡಿ ಅವಿಶ್ವಾಸ ಮಂಡನೆ ಸಭೆ ಕರೆಯಲು ಒತ್ತಾಯಿಸಿದ್ದಾರೆ.
೧೭ ಮಂದಿ ಬಿಜೆಪಿ ಸದಸ್ಯರು ಸೇರಿ ೨೧ ಸದಸ್ಯರ ಸಹಿ ಇರುವ ಪತ್ರವನ್ನು ಆಯುಕ್ತರಿಗೆ ಸಲ್ಲಿಸಿದ ನಂತರ ನಗರಸಭೆ ಉಪಾಧ್ಯಕ್ಷ ಚನ್ನಕೇಶವ ಮಾತನಾಡಿ, ಕಳೆದ ೮ ದಿನಗಳಿಂದ ಅಧ್ಯಕ್ಷರು ನಗರಸಭೆಗೆ ಬಾರದಿರುವ ಹಿನ್ನೆಲೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗದೆ ಅಭಿವೃದ್ಧಿ ಕಾರ್ಯಗಳು ನಿಂತುಹೋಗಿದೆ. ಜನರಿಗೂ ಇದರಿಂದ ತೊಂದರೆ ಆಗಿರುವ ಹಿನ್ನೆಲೆಯಲ್ಲಿ ನಮ್ಮ ಅಧ್ಯಕ್ಷತೆಯಲ್ಲೇ ತುರ್ತು ಸಭೆ ಸೇರಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ತರಲು ತೀರ್ಮಾನಿಸಿ ಆಯುಕ್ತರಿಗೆ ಪತ್ರ ಕೊಟ್ಟಿದ್ದೇವೆ ಎಂದರು.
ಅಂಬೇಡ್ಕರ್ ಅವರ ಸಂವಿಧಾನದ ಪ್ರಕಾರ ಯಾರಿಗೆ ಬಹುಮತದ ಬೆಂಬಲ ಇದೆಯೋ ಅವರು ಅಧಿಕಾರ ನಡೆಸಬೇಕು. ಆದರೆ ಈಗ ಅಧ್ಯಕ್ಷ ಬೆಂಬಲವನ್ನು ಕಳೆದುಕೊಂಡಿದ್ದಾರೆ. ಅವರ ಅತಿಯಾಸೆ, ದುರಾಸೆಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಪಕ್ಷ ಮಾಡಿದ ಸಹಾಯವನ್ನು ಅಧ್ಯಕ್ಷರು ಮರೆತಿದ್ದಲ್ಲದೆ, ಪಕ್ಷದ ಗೌರವವನ್ನೂ ಹಾಳು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಬೇಗನೆ ಸಭೆ ಕರೆದು ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಯುಕ್ತರನ್ನು ಕೋರಿದ್ದೇವೆ ಎಂದರು.
ನಗರಸಭೆ ಹಿರಿಯ ಸದಸ್ಯ ಟಿ.ರಾಜಶೇಖರ್ ಮಾತನಾಡಿ, ಕಳೆದ ಗುರುವಾರ ನಾಪತ್ತೆಯಾಗಿರುವ ಅಧ್ಯಕ್ಷರು ಇಂದಿಗೂ ಪತ್ತೆಯಾಗಿಲ್ಲ. ನಗರದಲ್ಲಿ ಜನರ ಕಷ್ಟ ಕೇಳಲು ಜನಪ್ರತಿನಿಧಿಗಳು ಯಾರೂ ಬಾರದ ಸ್ಥಿತಿಯನ್ನು ಅಧ್ಯಕ್ಷರು ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.
ಈ ಕಾರಣಕ್ಕೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಿದ್ದೇವೆ. ೨೧ ಜನ ನಗರಸಭೆ ಸದಸ್ಯರು ಸಹಿ ಮಾಡಿದ ಪತ್ರವನ್ನು ಪೌರಾಯುಕ್ತರಿಗೆ ಸಲ್ಲಿಸಿ ಅವಿಶ್ವಾಸ ನಿರ್ಣಯಕ್ಕೆ ವಿಶೇಷ ಸಭೆ ಕರೆಯುವಂತೆ ಮನವಿ ಮಾಡಿದ್ದೇವೆ ಎಂದರು.
ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ಮುಂದಿನ ಕ್ರಮವನ್ನು ಆಯುಕ್ತರು ಕೈಗೊಳ್ಳಬೇಕು. ವಿಶ್ವಾಸವಿಲ್ಲದೆ, ಸದಸ್ಯರ ಬೆಂಬಲವಿಲ್ಲದೆ ಅಧ್ಯಕ್ಷರಾಗಿ ಇರುವುದಕ್ಕಿಂತಲೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಬೇಕು ಎಂದು ಅಧ್ಯಕ್ಷರಿಗೆ ಸಲಹೆ ಮಾಡುತ್ತೇವೆ. ತಮ್ಮ ಹಠ, ಬೇರೆ ಬೇರೆ ಆಸೆಗಳನ್ನು ಬಿಟ್ಟು, ಬಿಜೆಪಿ ಹೇಳಿಕೊಟ್ಟಿರುವ ತ್ಯಾಗ, ಬಲಿದಾನ, ಸೇವೆ ಇದರಕಡೆ ಗಮನಕೊಡಬೇಕು ಎಂದು ಕೇಳುತ್ತೇವೆ ಎಂದರು.
No-confidence motion by BJP members against Varasiddi Venugopal