ಪಂಚಭೂತಗಳಲ್ಲಿ ಡಿ.ಬಿ.ಚಂದ್ರೇಗೌಡ ಲೀನ
ಚಿಕ್ಕಮಗಳೂರು: ಮಾಜಿ ಸಚಿವ ಡಿ.ಬಿ.ಚಂದ್ರೇಗೌಡರ ಪಾರ್ಥಿವ ಶರೀರಕ್ಕೆ ಪುತ್ರಿ ವೀಣಾ ಚಿತೆಗೆ ಅಗ್ನಿ ಸ್ಪರ್ಶಿಸುವುದರೊಂದಿಗೆ ಪಂಚಭೂತಗಳಲ್ಲಿ ಲೀನವಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಬಿ. ಚಂದ್ರೇಗೌಡರು ಮಂಗಳವಾರ ಮೃತರಾಗಿದ್ದು, ಬುಧವಾರ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿನ ಅವರ ಪೂರ್ಣಚಂದ್ರ ಎಸ್ಟೇಟ್ನಲ್ಲಿ ಸಕಲ ಸರ್ಕಾರಿ ಗೌರವ ಗಳೊಂದಿಗೆ ಅಂತ್ಯ ಕ್ರೀಯೆ ನಡೆಸಲಾಯಿತು.
ಇದಕ್ಕೂ ಮೊದಲು ಅವರ ಸ್ವ ಗೃಹದ ಆವರಣದಲ್ಲಿ ಪ್ರಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಬಿ.ಚಂದ್ರೇಗೌಡ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಬಳಿದ ಡಿ.ಬಿ.ಸಿ ಅವರ ಪತ್ನಿ ಪೂರ್ಣಿಮಾ ಹಾಗೂ ನಾಲ್ವರು ಪುತ್ರಿಯರಿಗೆ ಸಾಂತ್ವನ ಹೇಳಿದರು.
ಕೆಲಹೊತ್ತುವ ಪಾರ್ಥಿವ ಶರೀರದ ಮುಂದೇ ಕಾಲಕಳೆದ ಮುಖ್ಯಮಂತ್ರಿಗಳು ಅಲ್ಲಿಂದ ಮೂಡಿಗೆರೆ ಪಟ್ಟಣಕ್ಕೆ ತೆರಳಿದರು. ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಪಿ.ಜಿ.ಆರ್ ಸಿಂದ್ಯಾ, ಗೃಹ ಇಲಾಖೆ ಮಾಜಿ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ, ಶಾಸಕ ಡಿ.ಎನ್.ಜೀವರಾಜ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಡಿ.ಕೆ.ತಾರಾದೇವಿ, ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಎಚ್.ಎಂ.ವಿಶ್ವನಾಥ್, ಟಿ.ಡಿ.ರಾಜೇಗೌಡ, ನಯನ ಮೋಟಮ್ಮ, ಕೆ.ಎಸ್.ಆನಂದ್, ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಡಾ.ಮೋಟಮ್ಮ ಅಂತಿಮ ದರ್ಶನ ಪಡೆದರು.
ಜಿಲ್ಲಾ ಪೊಲೀಸ್ ಇಲಾಖೆ ಯಿಂದ ಮೃತರ ಗೌರವಾರ್ಥವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಬಿ.ಚಂದ್ರೇಗೌಡ ಅವರ ಪತ್ನಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಿದರು.
ಕುಟುಂಬಸ್ಥರು ಪಾರ್ಥಿವ ಶರೀರಕ್ಕೆ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ದಾರದಹಳ್ಳಿ ಸ್ವಗೃಹದ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಹಿರಿಯ ಮಗಳು ವೀಣಾ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಬಳಿಕ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗುವುದರೊಂದಿಗೆ ಜಿಲ್ಲೆ ಮುಸ್ಸದಿ ರಾಜಕಾರಣಿಯನ್ನು ಕಳೆದುಕೊಂಡಾಂತಾಯಿತು.
D. B. Chandra Gowda’s Panchabhutas Leena