ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಡಿ.ಬಿ.ಚಂದ್ರೇಗೌಡ ಅಂತಿಮ ದರ್ಶನ
ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಿಧನರಾದ ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಅವರ ಅಂತಿಮ ದರ್ಶನ ಪಡೆದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿಯ ನಿವಾಸಕ್ಕೆ ತೆರಳಿ ಚಂದ್ರೇಗೌಡರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಬಳಿಕ ಮಾತನಾಡಿದ ಅವರು ಡಿ.ಬಿ.ಚಂದ್ರೇಗೌಡ ಒಳ್ಳೆಯ ಸ್ಪೀಕರ್ ಎಂದು ಪ್ರಶಂಸೆ ಪಡೆದುಕೊಂಡಿದ್ದರು. ಏಕೆಂದರೆ ಆಗಿನ ಕಾಲದಲ್ಲಿ ಸ್ಪೀಕರ್ ಆಗಿ ಕೆಲಸ ಮಾಡುವುದು ಬಹಳ ಕಠಿಣವಾಗಿತ್ತು. ಬಿಜೆಪಿ ಬೆಂಬಲ ಪಡೆದು ರಾಮಕೃಷ್ಣ ಹೆಗ್ಡೆ ಸಿಎಂ ಆಗಿದ್ದರು. ಆಗ ಚಂದ್ರೇಗೌಡ ಸ್ಪೀಕರ್ ಆಗಿ ಚಾಕಚಕ್ಯತೆಯಿಂದ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
ಬಳಿಕ ಜನತಾ ಪಾರ್ಟಿಯಲ್ಲಿ ಬಹಳ ದಿನ ನಮ್ಮ ಜೊತೆಯಲ್ಲಿ ಇದ್ದರು. ಮತ್ತೆ ಕಾಂಗ್ರೆಸ್ ಸೇರಿ ಶಾಸಕ ಹಾಗೂ ಮಂತ್ರಿಯೂ ಆಗಿದ್ದರು. ಅವರು ರಾಜಕೀಯವಾಗಿ ನಾಲ್ಕು ಸದನದಲ್ಲೂ ಸದಸ್ಯರಾಗಿದ್ದರು. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ನ ಸದಸ್ಯರಾಗಿದ್ದರು. ಆ ರೀತಿ ನಾಲ್ಕು ಸದನದಲ್ಲೂ ಸದಸ್ಯರಾಗುವುದು ತೀರಾ ಅಪರೂಪ ಎಂದು ಮೆಲುಕು ಹಾಕಿದರು
ಪ್ರಜಾಪ್ರಭುತ್ವದ ನಾಲ್ಕು ವೇದಿಕೆಯಲ್ಲೂ ಇದ್ದರು. ೮೭ ವರ್ಷದ ಅವರು ನಮ್ಮನ್ನು ಅಗಲಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ನಷ್ಟ ಭರಿಸುವ ಶಕ್ತಿ ನೀಡಲಿ ಎಂದು ಸಿದ್ದರಾಮಯ್ಯ ಸಾಂತ್ವನಗಳನ್ನು ತಿಳಿಸಿದರು. ಮೂರು ಬಾರಿ ಶಾಸಕರಾಗಿ, ೩ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಚಂದ್ರೇಗೌಡ, ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿಗಳಲ್ಲಿ ಒಬ್ಬರಾಗಿದ್ದರು.
Final darshan of DB Chandra Gowda by Chief Minister Siddaramaiah