ಹಿರಿಯರನ್ನು ಗೌರವಿಸುವ ಗುಣ ವಿದ್ಯಾರ್ಥಿ ದಿಸೆಯಲ್ಲೆ ಬರಬೇಕು
ಚಿಕ್ಕಮಗಳೂರು-ಸಮಾಜದಲ್ಲಿ ಹಿರಿಯರನ್ನು ಗೌರವಿಸುವ ಪರಿಪಾಠವನ್ನು ಅಳವಡಿಸಿಕೊಂಡಾಗ ಮಾತ್ರ ಕಿರಿಯರಿಗೆ ಮಾರ್ಗದರ್ಶಕರಾಗಲು ಸಾಧ್ಯ ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಅನಿಲ್ಕುಮಾರ್ ರಾಥೋಡ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು
ಅವರು ಇಂದು ನಗರದ ಜ್ಞಾನ ಜ್ಯೋತಿ ಟಿ.ಎಂ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳಿಗೆ ನಾಯಕತ್ವ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು,
ಸಮಾಜದಲ್ಲಿ ಅನುಚಿತವಾಗಿ ವರ್ತಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಮುಖ ಭಾಗವಾಗಿ ನನ್ನ ವೃತ್ತಿ ಜೀವನದಲ್ಲಿ ಕಂಡಿದ್ದೇನೆ, ಅವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿರುವುದರಿಂದ ಉತ್ತಮ ಜೀವನ ನಡೆಸುತ್ತಿದ್ದಾರೆ, ಆದ್ದರಿಂದ ವಿದ್ಯಾರ್ಥಿಯ ಜೀವನದಲ್ಲಿ ಶ್ರಮ ವಹಿಸಿ ವ್ಯಾಸಂಗ ಮಾಡುವ ಮೂಲಕ ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿ ಎಂದು ಹೇಳಿದರು.
ಒಂದು ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದಾಗ ಅವರ ಬಗ್ಗೆ ಗುಣಗಾನ ಮಾಡಿ, ಬ್ಯಾನರ್ ಹಾಕಿ ಅಭಿನಂದಿಸುತ್ತಾರೆ, ಅದಕ್ಕಾಗಿ ವಿದ್ಯಾರ್ಥಿಗಳಿಂದ ಶಿಕ್ಷಕರಾಗಲಿ, ಶಿಕ್ಷಣ ಸಂಸ್ಥೆಯಾಗಲಿ ಹಣ ಕೇಳುವುದಿಲ್ಲ ಎಂಬುವುದನ್ನು ಮನಗಾಣಬೇಕು ಎಂದು ತಿಳಿಸಿದರು.
ಕಲಿತ ಶಿಕ್ಷಣ ಸಂಸ್ಥೆ ಮತ್ತು ಜೀವನ ರೂಪಿಸುವ ಶಿಕ್ಷಕರನ್ನು ಎಂದಿಗೂ ಮರೆಯಬೇಡಿ ಎಂಬ ಕಿವಿ ಮಾತು ಹೇಳಿದ ಅವರು ವಿದ್ಯಾರ್ಥಿ ಜೀವನವನ್ನು ಉದಾಸೀನ ಮನೋಭಾವ ಬಿಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಎಂದು ಹಾರೈಸಿದರು.
ಜ್ಞಾನ ಜ್ಯೋತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಇಂದ್ರೇಶ್ ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣ ಬೆಳೆಸಿಕೊಂಡಾಗ ಮಾತ್ರ ಮುಂದೆ ಉತ್ತಮ ಸಾಧನೆ ಮಾಡಲು ಸಾದ್ಯ ಎಂದು ಹೇಳಿದರು.
ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಶಾದಾಯಕವಾಗಿ ತೊಡಗಿಸಿಕೊಂಡು ಅರ್ಥಪೂರ್ಣವಾಗಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶ ಹಾಗೂ ನನ್ನ ಅಭಿಲಾಷೆಯು ಕೂಡ ಎಂದರು.
ಪ್ರಸ್ತುತ ವಿದ್ಯಾರ್ಥಿಗಳಾಗಿರುವ ನೀವು ಮುಂದೆ ಉತ್ತಮ ನಾಯಕರಾಗಬೇಕಾದ ಅನಿವಾರ್ಯತೆ ಬೇಕಾಗುತ್ತದೆ, ಒಬ್ಬ ನಾಯಕನಿಗೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಮುಂದೆ ಸಾಗುವ ತಾಕತ್ತು ಇರಬೇಕು, ಜೊತೆಗೆ ಎಲ್ಲರನ್ನು ಸಮಾನವಾಗಿ ನೋಡುವ ಮನೋಭಾವನೆ ಇರಬೇಕು, ಸಾಮಾಜಿಕ ನ್ಯಾಯ ಮತ್ತು ಸೇವಾ ಮನೋಭಾವ ಇವುಗಳನ್ನು ಮೈಗೂಡಿಸಿಕೊಂಡಿರಬೇಕು ಎಂದು ತಿಳಿಸಿದರು.
ನಾಯಕರು ಮಾತ್ರ ಕಾರ್ಯಕ್ರಮದಲ್ಲಿ ಇರುವುದಲ್ಲ, ನಿಮ್ಮನ್ನು ಆಯ್ಕೆ ಮಾಡಿದವರು ಭಾಗವಹಿಸುವಂತಾಗಬೇಕು ಇಲ್ಲದಿದ್ದರೆ ನಿಮ್ಮಲ್ಲಿಯೇ ಏನೋ ಕೊರತೆ ಇದೆ ಎಂಬಂತಾಗುತ್ತದೆ, ಆದ್ದರಿಂದ ಉತ್ತಮ ನಾಯಕತ್ವದ ಗುಣ ಬೆಳೆಸಿಕೊಳ್ಳಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಟಿ.ಎಂ.ಎಸ್ ಸಂಸ್ಥೆಯ ಅಧ್ಯಕ್ಷೆ ಗೀತಾ.ಎಮ್.ಎಲ್ ಮೂರ್ತಿ ಮಾತನಾಡಿ ನಮ್ಮ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನ ಪಡೆದು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ, ನೀವು ಸಹ ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಎಂ.ಬಿ.ಕಟಗಿ, ಮುಖ್ಯ ಶಿಕ್ಷಕ ಎಂ.ಎಸ್.ನಟರಾಜ್, ಸುಧಾನಾಗೇಶ್, ನೇತ್ರಾಅಣ್ಣಪ್ಪ ಉಪಸ್ಥಿತರಿದ್ದರು. ಸುಚಿತ್ರ ಸ್ವಾಗತಿಸಿ, ರಕ್ಷಿತಾ ನಿರೂಪಿಸಿದರು.
Student union election