ಡಿ.17 ರಿಂದ 26 ರವರೆಗೆ ದತ್ತಜಯಂತಿ ಕಾರ್ಯಕ್ರಮಗಳು
ಚಿಕ್ಕಮಗಳೂರು: ವಿಶ್ವಹಿಂದೂಪರಿಷತ್ ಮತ್ತು ಬಜರಂಗದಳದಿಂದ ಈ ಬಾರಿಯ ದತ್ತಜಯಂತಿ ಕಾರ್ಯಕ್ರಮಗಳು ಡಿ.೧೭ ರಿಂದ ೨೬ ರವರೆಗೆ ನಡೆಯಲಿವೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಕೆ.ಆರ್.ಸುನಿಲ್ ಹೇಳಿದರು.
ಈ ಬಾರಿಯ ದತ್ತಜಯಂತಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ.ರಾಜ್ಯಾದ್ಯಂತ ೩೦ ಸಾವಿರ ದತ್ತಭಕ್ತರು ದತ್ತಜಯಂತಿಗೆ ಭಾಗವಹಿಸುವ ನಿರೀಕ್ಷೆ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಿ.೨೪ ರಂದು ಅನುಸೂಯ ದೇವಿ ಪೂಜೆಯ ಹಿನ್ನೆಲೆಯಲ್ಲಿ ಮಹಿಳೆಯರು ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಸಲಿದ್ದು ದತ್ತಪೀಠದಲ್ಲಿ ಅಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಡಿ.೨೫ ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭೆ ನಡೆಯಲಿದೆ. ಡಿ.೨೬ ರಂದು ದತ್ತಜಯಂತಿಯಂದು ದತ್ತಭಕ್ತರು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಅಂದು ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,ವಿವಿಧೆಡೆಯಿಂದ ಸಾಧುಸಂತರು ಭಾಗವಹಿಸಲಿದ್ದಾರೆ ಎಂದರು.
ವಿಶ್ವ ಹಿಂದೂಪರಿಷತ್ನ ಪ್ರಾಂತ ಕಾರ್ಯದರ್ಶಿ ಜಗನ್ನಾಥಶಾಸ್ತ್ರಿ ಮಾತನಾಡಿ, ಜನವರಿ ೨೨ ರಂದು ಅಯೋದ್ಯೆ ಶ್ರೀ ರಾಮಮಂದಿರದಲ್ಲಿ ಶ್ರೀರಾಮಲಲ್ಲಾನ ಪ್ರತಿಷ್ಠಾಪನಾ ಕಾರ್ಯಕ್ರಮವಿದೆ. ಅದರ ಪ್ರಯುಕ್ತ ದೇಶದ ಹಳ್ಳಿಹಳ್ಳಿಗೂ ಕರಪತ್ರ, ಮಂತ್ರಾಕ್ಷತೆ ಮತ್ತು ರಾಮಮಂದಿರದ ಭಾವಚಿತ್ರವನ್ನು ರಾಮಪ್ರಸಾದವಾಗಿ ಕಳುಹಿಸಕೊಡಲಾಗಿದೆ.
ಜ.೧ ರಿಂದ ೧೫ ರವರೆಗೆ ಮಹಾ ಸಂಪರ್ಕ ಅಭಿಯಾನ ನಡೆಯಲಿದೆ. ಜ.೨೨ ರಂದು ಅಯೋದ್ಯೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಪ್ರತಿ ಹಳ್ಳಿಯ ಮಂದಿರಗಳಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಅಂದು ೫ ಹಣತೆಗಳನ್ನು ಪ್ರತಿ ಮನೆಯಲ್ಲಿ ಹಚ್ಚಬೇಕು ಎಂದು ವಿಹಿಂಪ ಕರೆಕೊಡುತ್ತದೆ ಎಂದರು. ವಿಹಿಂಪ ಮುಖಂಡರಾದ ರಂಗನಾಥ, ಸಿ.ಡಿ.ಶಿವಕುಮಾರ್, ಶ್ರೀಕಾಂತ್ಪೈ , ಯೋಗೀಶ್ರಾಜ್ ಅರಸ್, ಆರ್.ಡಿ.ಮಹೇಂದ್ರ ಇದ್ದರು.
Datta Jayanti programs from 17th to 26th