ಚಿಕ್ಕಮಗಳೂರನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯ
ಚಿಕ್ಕಮಗಳೂರು: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘದ ತಾಲೂಕು ಸಮಿತಿ ಮುಖಂಡರು ನಗರದ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತ ಸಂಘದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಕೂಗಿದರು. ತಹಸೀಲ್ದಾರ್ಗೆ ಮನವಿ ಸಲ್ಲಿಸಿ, ಚಿಕ್ಕಮಗಳೂರು ತಾಲೂಕಿನಲ್ಲಿ ಬರ ಅಧ್ಯಯನಕ್ಕೆ ನಿಯೋಗ ಕಳುಹಿಸಬೇಕೆಂದು ಒತ್ತಾಯಿಸಿದರು.
ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಾಗ ಚಿಕ್ಕಮಗಳೂರು ತಾಲೂಕನ್ನು ಹೊರತುಪಡಿಸಿ ಉಳಿದ ತಾಲೂಕನ್ನು ಘೋಷಿಸಿ ರೈತರಿಗೆ ಅನ್ಯಾಯವೆಸಗಲಾಗಿದೆ. ಬರಪೀಡಿತ ಪ್ರದೇಶಕ್ಕೆ ಕೊಡುವ ಸವಲತ್ತಿನಿಂದ ರೈತರು ವಂಚಿತರಾಗಿದ್ದಾರೆAದು ದೂರಿದರು.
ಮಳೆಕೊರತೆಯಿಂದ ಯಾವ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿಲ್ಲ, ರಾಗಿ, ಜೋಳ, ಭತ್ತದಂತಹ ಆಹಾರ ಬೆಳೆಗಳಾಗಲಿ, ತರಕಾರಿ ಬೆಳೆ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳು ಬರಗಾಲದಿಂದ ನಷ್ಟವಾಗಿದೆ. ಹಿಂಗಾರಿನಲ್ಲೂ ಇದೇ ಪರಿಸ್ಥಿತಿ ಮುಂದುವರೆದಿದ್ದರಿAದ ರೈತರು ತೊಂದರೆ ಅನುಭವಿಸಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಲೆನಾಡಿನಲ್ಲಿ ನೀರಿನ ಮೂಲಗಳೆಲ್ಲ ಬತ್ತಿಹೋಗಿವೆ. ನದಿ, ಹಳ್ಳಗಳಲ್ಲಿ ನೀರುಹರಿಯುವುದು ನಿಂತುಹೋಗಿದೆ. ಕೆರೆ,ಕಟ್ಟೆ, ಬಾವಿಗಳು ಒಣಗುವಹಂತ ತಲುಪಿವೆ. ಕೊಳವೆ ಬಾವಿಯಲ್ಲೂ ನೀರಿಲ್ಲವಾಗಿದೆ. ಅಂತರ್ಜಲ ಬತ್ತುತ್ತಿದೆ. ಮುಂದಿನ ದಿನಗಳಲ್ಲಿ ಜನರಿಗೆ ಕುಡಿಯುವ ನೀರು ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜನರಿಗೆ ಆಹಾರ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಲಿದೆ ಎಂದಿದ್ದಾರೆ.
ಹಿAಗಾರು ಹಂಗಾಮಿನಲ್ಲೂ ರೈತರು ಬಿತ್ತನೆಬೀಜ, ರಸಗೊಬ್ಬರ, ಔಷಧ, ಕಳೆ ಕೂಲಿಯಾಳುಗಳಿಗೆ ಹಣನೀಡಿದ್ದು, ಆದಾಯಮಾತ್ರ ಸಿಗದಂತಾಗಿದೆ. ರೈತರ ಹೆಗಲಮೇಲೆ ಸಾಲದ ಹೊರೆ ಇದೆ. ಈ ತಾಲೂಕಿನ ರೈತರು ಇಷ್ಟೆಲ್ಲ ಸಮಸ್ಯೆ ಎದುರಿಸುತ್ತಿದ್ದರೂ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬರಅಧ್ಯಯನ ಮಾಡದೆ ಕಚೇರಿಯಲ್ಲಿ ಕುಳಿತ ಉಪಗ್ರಹ ಆಧರಿತ ವರದಿ ತಯಾರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸರ್ವೇ ಮಾಡಿರುವುದಾಗಿ ಹೇಳಿ ಸರ್ಕಾರಕ್ಕೆ ವಾಸ್ತವ ಮರೆಮಾಚಿ ತಪ್ಪುವರದಿ ಸಲ್ಲಿಸಿದ್ದರಿಂದ ಬರಪೀಡಿತ ಪ್ರದೇಶ ಘೋಷಣೆಯನ್ನು ಕೈಬಿಡಲಾಗಿದೆ. ಬರಘೋಷಣೆಗೆ ಇರುವ ಮಾನದಂಡ ರೈತವಿರೋಧಿಯಾಗಿದೆ. ಸರ್ಕಾರ ಚಿಕ್ಕಮಗಳೂರು ತಾಲೂಕು ಬರ ಅಧ್ಯಯನಕ್ಕೆ ನಿಯೋಗ ಕಳುಹಿಸಿಕೊಡಬೇಕು. ವಾಸ್ತವ ಅರಿತು ಬರಪೀಡಿತ ಪ್ರದೇಶ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ರೈತರ ಸಾಲಮನ್ನಾ ಮಾಡಬೇಕು. ಬೆಳೆನಷ್ಟಕ್ಕೆ ವೈಜ್ಞಾನಿಕ ಪರಿಹಾರ ಘೋಷಿಸಬೇಕು. ಜಾನುವಾರುಗಳಿಗೆ ಮೇವುಒದಗಿಸಬೇಕು. ಸಮರೋಪಾದಿಯಲ್ಲಿ ಬರಪರಿಹಾರ ಕಾಮಗಾರಿ ಕೈಗೆತ್ತಿಕೊಂಡು ರೈತರಿಗೆ ಉದ್ಯೋಗ ಒದಗಿಸಬೇಕು. ವಿಮೆಮಾಡಿರುವ ರೈತರಿಗೆ ಬೆಳೆವಿಮೆ ತಲುಪಿಸಬೇಕೆಂದು ಕೋರಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಚAದ್ರಶೇಖರ್, ಪ್ರಧಾನಕಾರ್ಯದರ್ಶಿ ಎಚ್.ಎಸ್.ಲೋಕೇಶ್, ಗೌರವಾಧ್ಯಕ್ಷ ಮಲ್ಲುಂಡಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಪ್ರಧಾನಕಾರ್ಯದರ್ಶಿ ಮಹೇಶ್ ಮತ್ತಿತರರಿದ್ದರು.
Protest in front of Karnataka Raitha Sangh Taluk Office