September 19, 2024
ದತ್ತ ಜಯಂತಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

ದತ್ತ ಜಯಂತಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

ಚಿಕ್ಕಮಗಳೂರು:  ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ. ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಇಂದು ನೂರಾರು ಮಂದಿ ದತ್ತ ಮಾಲೆ ಧರಿಸುವ ಮೂಲಕ ವಿಶ್ವಹಿಂದೂ ಪರಿಷತ್-ಬಜರಂಗದಳದ ವತಿಯಿಂದ ನಡೆಯುವ ದತ್ತ ಜಯಂತಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನಿಡಲಾಯಿತು. ಬಜರಂಗದಳದ ದಕ್ಷಿಣ ಪ್ರಾಂತ ಕಾರ್ಯಕಾರಣಿ ಸದಸ್ಯ ರಘು ಸಕಲೇಶಪುರ, ಮಾಜಿ ಶಾಸಕ ಸಿ.ಟಿ.ರವಿ ಇನ್ನಿತರರಿಗೆ ದೇವಸ್ಥಾನದ ಪ್ರಧಾನ ಅರ್ಚಕ ರಘು ಅವಧಾನಿ ಅವರು ವಿಧಿವತ್ತಾಗಿ ಮಾಲೆ ತೊಡಿಸಿದರು. ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಾಲಾಧಾರಿಗಳು ಭಜನೆ, ಸಂಕೀರ್ತನೆಗಳನ್ನು ಹಾಡಿದರು.

ಕಳೆದ ವರ್ಷಕ್ಕಿಂತ ಈ ಬಾರಿ ಭಾರೀ ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದತ್ತಭಕ್ತರು ಮಾಲಾಧಾರಣೆ ಮಾಡಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಕಾಫಿನಾಡು ಬೂದಿ ಮುಚ್ಚಿದ ಕೆಂಡದಂತಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡ ಜಿಲ್ಲಾದ್ಯತ ಹೈ ಅಲರ್ಟ್ ಘೋಷಿಸಿ ಹದ್ದಿನ ಕಣ್ಣಿಟ್ಟಿದೆ. ಇದೇ 24ರ ಭಾನುವಾರದಂದು ನಗರದಲ್ಲಿ ಸಾವಿರಾರು ಮಹಿಳೆಯರು ಬೃಹತ್ ಸಂಕೀರ್ತನ ಯಾತ್ರೆ ನಡೆಸಿ ದತ್ತಪೀಠದಲ್ಲಿ ಹೋಮ ಹವನ ನಡೆಸುವ ಮೂಲಕ ಅನುಸೂಯ ಜಯಂತಿ ಆಚರಿಸಲಿದ್ದಾರೆ.

25ರ ಸೋಮವಾರದಂದು ಚಿಕ್ಕಮಗಳೂರು ನಗರದಲ್ಲಿ ದತ್ತಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು 20 ಸಾವಿರಕ್ಕೂ ಅಧಿಕ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. 26ರಂದು ರಾಜ್ಯದ ಮೂಲೆ ಮೂಲೆಗಳಿಂದ ಬರುವ 25,000ಕ್ಕೂ ಅಧಿಕ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತ ಪಾದಕ್ಕೆ ದರ್ಶನ ಪಡೆಯಲಿದ್ದಾರೆ.

ದತ್ತಾತ್ರೇಯರ ಆಸ್ತಿಯನ್ನ ಹೆಚ್ಚಿನ ಪ್ರಮಾಣದಲ್ಲಿ ಕಬಳಿಸಿರುವವರು ಕಾಂಗ್ರೆಸಿನವರು. ಅದರಲ್ಲಿ ಪ್ರಭಾವಿಗಳೂ ಸಹ ಸೇರಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಆರೋಪಿಸಿದರು. ದತ್ತಮಾಲೆ ಧರಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಾಸ್ತವಿಕವಾಗಿ ದತ್ತಪೀಠವೇ ಬೇರೆ, ದರ್ಗಾವೇ ಬೇರೆ ಎನ್ನುವುದು ಕಾಂಗ್ರೆಸ್ನವರಿಗೂ ಗೊತ್ತಿದೆ. ಆದರೆ ಆಸ್ತಿ ಹೋಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.

ಗುರು ದತ್ತಾತ್ರೇಯ ಪೀಠ-ಬಾಬಾಬುಡನ್ ದರ್ಗಾ ವ್ಯವಸ್ಥಾಪನಾ ಸಮಿತಿಯನ್ನು ರದ್ದು ಪಡಿಸಬೇಕು ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಆದರೆ ಅದು ಭಿಕ್ಷೆಯಲ್ಲ. ನ್ಯಾಯಾಲಯದ ತೀರ್ಪಿನ ಅನ್ವಯ ಸಮಿತಿ ರಚನೆ ಆಗಿದೆ. ಅದನ್ನು ರದ್ದು ಪಡಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದರು. ವಿಶ್ವಹಿಂದೂ ಪರಿಷತ್ ವಿಭಾಗ ಸಹ ಕಾರ್ಯದರ್ಶಿ ಅರಡಿ ಮಹೇಂದ್ರ, ವಿಭಾಗ ಸಂಯೋಜಕ್ ಶಶಾಂಕ್ ಹೆರೂರು, ಬಜರಂಗದಳ ಜಿಲ್ಲಾ ಸಂಯೋಜಕ್ ಸಿ.ಡಿ.ಶಿವಕುಮಾರ್, ಅಮಿತ್, ಶ್ಯಾಂ ವಿ ಗೌಡ, ಸುನೀಲ್ ಆಚಾರ್ಯ ಇತರರು ಮಾಲೆ ಧಾರಣೆ ಮಾಡಿದರು.ಕೊನೆ ಮೂರು ದಿನ ದತ್ತಜಯಂತಿಯ ಸೂಕ್ಷ್ಮ ದಿನವಾಗಿದ್ದು ಜಿಲ್ಲಾದ್ಯಂತ ಸಾವಿರಾರು ಪೊಲೀಸರ ಹದ್ದಿನ ಕಣ್ಣಿಡಲಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಚಿಕ್ಕಮಗಳೂರು ಬೂದಿ ಮುಚ್ವಿದ ಕೆಂಡದಂತಿರಲಿದೆ.

Official launch of Dutta Jayanti programme

About Author

Leave a Reply

Your email address will not be published. Required fields are marked *

You may have missed