ಅಭಿವೃದ್ಧಿ ಕೆಲಸಗಳಿಗೆ ಮೊದಲ ಆದ್ಯತೆ
ಚಿಕ್ಕಮಗಳೂರು: ಸರ್ಕಾರ ಯಾವುದೇ ಅಭಿವೃದ್ಧಿ ಕಾಮಗಾರಿ ತಡೆಹಿಡಿಯದೆ ಮರು ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.
ಅವರು ಇಂದು ಬಿಳೆಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ದೇಬೋರನಹಳ್ಳಿ ರಾಷ್ಟ್ರೀಯ ಹೆದ್ದಾರಿ-೧೭೩ ಯಿಂದ ಬಿಳೇಕಲ್ಲಳ್ಳಿ, ಸರ್ಪನಹಳ್ಳಿ ಮಾರ್ಗವಾಗಿ ಅಯ್ಯನಕೆರೆಗೆ ಸಂಪರ್ಕ ಕಲ್ಪಿಸುವ ಸುಮಾರು ೪ ಕೋಟಿ ರೂ ವೆಚ್ಚದಲ್ಲಿ ಪಿ.ಡಬ್ಲ್ಯೂ.ಡಿ ಯಿಂದ ಕೈಗೊಳ್ಳುವ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಪಂಚ ಗ್ಯಾರಂಟಿಗಳಿಗಾಗಿ ಹಣ ಖರ್ಚು ಮಾಡುತ್ತಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಲ್ಲಿ ಹಣ ಇಲ್ಲ ಎಂಬ ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರವಾಗಿ ರಾಜ್ಯ ಸರ್ಕಾರ ಹಿಂದೆ ಮಂಜೂರಾದ ಎಲ್ಲಾ ಕಾಮಗಾರಿಗಳಿಗೂ ಮರುಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.
ಈ ರಸ್ತೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಪಿ.ಡಬ್ಲ್ಯೂ.ಡಿ ಸಹಾಯಕ ಸಹಾಯಕ ಕಾರ್ಯಪಾಲಕರು ಗುತ್ತಿಗೆದಾರರಿಗೆ ಸೂಚನೆ ನೀಡಿ ಕೆಲಸ ಮಾಡಿಸಬೇಕೆಂದು ಹೇಳಿದ ಶಾಸಕರು ಈ ರಸ್ತೆಯ ಕಾಮಗಾರಿಯನ್ನು ಅತಿ ಶೀಘ್ರ ಮುಕ್ತಾಯಗೊಳಿಸಿ ಅಯ್ಯನಕೆರೆಗೆ ಪ್ರವಾಸಿ ತಾಣಕ್ಕೆ ಸಾರ್ವಜನಿಕರು ಹೋಗಿ ಬರಲು ಅನುಕೂಲ ಕಲ್ಪಿಸಬೇಕೆಂದು ತಿಳಿಸಿದರು.
ಹಿಂದೆ ಕಾಮಗಾರಿ ನಡೆದಾಗ ನಾಮಫಲಕ ಹಾಕುತ್ತಿರಲಿಲ್ಲ. ಆದರೆ ಈಗ ಕಾಮಗಾರಿಯ ಯೋಜನೆ, ಅನುದಾನ, ಅಂದಾಜು ಮೊತ್ತ, ಗುತ್ತಿಗೆದಾರನ ಹೆಸರು ಮತ್ತು ಇತರ ಮಾಹಿತಿಯನ್ನು ಹಾಗೂ ಕಾಮಗಾರಿ ಪಾರದರ್ಶಕವಾಗಿದೆ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಲು ಕಾಮಗಾರಿ ನಡೆಯುವ ಸ್ಥಳದಲ್ಲಿ ನಾಮಫಲಕ ಹಾಕಲು ಸೂಚಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗವಿರಂಗಪ್ಪ ಮಾತನಾಡಿ ಯು ಬಿ ಹಳ್ಳಿ ಎನ್ಹೆಚ್.೧೭೩ ರಿಂದ ಬಿಳೇಕಲ್ಲಳ್ಳಿ, ಸರ್ಪನಹಳ್ಳಿ ಮಾರ್ಗವಾಗಿ ಅಯ್ಯನಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸುಮಾರು ೪ ಕೋಟಿ ರೂ ವೆಚ್ಚದಲ್ಲಿ ೫ ಸಾವಿರ ಮೀಟರ್ ಉದ್ದ ೫.೫೦ ಮೀಟರ್ ಅಗಲದ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಗೋಪಿಕೃಷ್ಣ, ಮಾಜಿ ಅಧ್ಯಕ್ಷ ನಿಜಗುಣಮೂರ್ತಿ, ಸದಸ್ಯರುಗಳಾದ ಜಗದೀಶ್, ಮಾದಯ್ಯ ಭರತೇಶ್, ನಾಗರತ್ನ, ಪುಟ್ಟೇಗೌq, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹಡಿಮನೆ ಸತೀಶ್, ಹೆಚ್.ಪಿ ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
Guddalipuja for the road work undertaken by PWD