ದತ್ತಪಾದುಕೆ ದರ್ಶನ ಪಡೆದ ವಿಪಕ್ಷ ನಾಯಕ ಆರ್.ಅಶೋಕ್
ಚಿಕ್ಕಮಗಳೂರು: ದತ್ತಜಯಂತಿ ಅಂಗವಾಗಿ ಬೆಳಗ್ಗೆ ಪಡಿ ಸಂಗ್ರಹದ ಬಳಿಕ ಪ್ರಮುಖ ನಾಯಕರುಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದು ಬಳಿಕ ಹೋಮ ಮಂಟಪದಲ್ಲಿ ನಡೆದ ಹೋಮ ಹವನಗಳಲ್ಲಿ ಭಾಗಿಯಾದರು.
ವಿಪಕ್ಷ ನಾಯಕ ಆರ್.ಅಶೋಕ್, ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಮಾಜಿ ಸಚಿವ ಸಿ.ಟಿ.ರವಿ ಹಾಗೂ ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಸೇರಿದಂತೆ ಪ್ರಮುಖ ನಾಯಕರುಗಳು ದತ್ತಪಾದುಕೆ ದರ್ಶನ ಪಡೆದು ಬಳಿಕ ಹೋಮ ಮಂಟಪದಲ್ಲಿ ಹೋಮ ಹವನದಲ್ಲಿ ಭಾಗಿಯಾದರು. ಅರ್ಧಗಂಟೆಗೂ ಹೆಚ್ಚುಕಾಲ ಹೋಮ ಹವನದಲ್ಲಿ ಭಾಗಿಯಾದ ಮುಖಂಡರುಗಳು ಬಳಿಕ ಚಿಕ್ಕಮಗಳೂರಿಗೆ ವಾಪಸ್ ಆಗಿ ದತ್ತಜಯಂತಿ ಶೋಭಾ ಯಾತ್ರೆಯಲ್ಲಿ ಭಾಗಿಯಾದರು.
ದತ್ತಪೀಠಕ್ಕೆ ಭೇಟಿಗೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ನಾನು ಇದೇ ಮೊದಲ ಬಾರಿಗೆ ದತ್ತಮಾಲೆ ಧಾರಣೆ ಮಾಡಿದ್ದೇನೆ. ದತ್ತಪೀಠಕ್ಕೆ ಈ ಹಿಂದೆಯೇ ಭೇಟಿ ನೀಡಿದ್ದೆ. ಆದರೆ ಇದೀಗ ಮಾಲೆ ಧರಿಸಿ ಮೊದಲ ಬಾರಿಗೆ ತೆರಳುತ್ತಿದ್ದೇನೆ. ಇದೊಂದು ವಿಶಿಷ್ಟ ಅನುಭವ ಎಂದು ಹೇಳಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗಲೇ ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಲಾಗಿದೆ. ಈಗಿರುವ ಸರ್ಕಾರ ದತ್ತಪೀಠಕ್ಕೆ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಬೇಕು. ದತ್ತಪೀಠ ಕೇವಲ ಹಿಂದೂಗಳ ಪವಿತ್ರ ಕ್ಷೇತ್ರವಾಗಬೇಕು ಎಂದು ಪ್ರತಿಪಾದಿಸಿದರು.
Opposition leader R. Ashok who received Dattapaduke’s darshan