8ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ರೈಲಿಗೆ ಸಿಲುಕಿ ಶಾಲಾ ಬಸ್ ಡ್ರೈವರ್ ಆತ್ಮಹತ್ಯೆ
ಚಿಕ್ಕಮಗಳೂರು: ಮಗಳು ಶಾಲೆಗೆ ಹೋಗುವಾಗ ಸುರಕ್ಷಿತವಾಗಿ ಹೋಗಲೆಂದು ಶಾಲಾ ಬಸ್ನಲ್ಲಿ ಕಳಿಸಿದ್ದಾರೆ. ಆದರೆ, ಬಸ್ನ ಡ್ರೈವರ್ ಅಂಕಲ್ ತನ್ನ ಮಗಳ ವಯಸ್ಸಿನ 8ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೇಮಪಾಶಕ್ಕೆ ಬೀಳಿಸಿಕೊಂಡಿದ್ದಾನೆ. ನಂತರ, ಆ ಹುಡುಗಿಯನ್ನು ಮನೆಯಿಂದ ಕರೆದುಕೊಂಡು ಹೋಗಿ ಹೊಸ ವರ್ಷದ ದಿನವೇ ರೈಲಿಗೆ ಅಡ್ಡನಿಂತು ಇಬ್ಬರೂ ಪ್ರಾಣ ಬಿಟ್ಟಿರುವ ದುರ್ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಶಾಲಾ ಬಸ್ ಡ್ರೈವರ್ ಪ್ರೇಮದಾಟಕ್ಕೆ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. 8ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ರೈಲಿಗೆ ಸಿಲುಕಿ ಡ್ರೈವರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ ಘಟನೆ ನಡೆದಿದೆ. ರೈಲಿಗೆ ಅಡ್ಡಲಾಗಿ ನಿಂತು ಡ್ರೈವರ್ ಸಂತೋಷ (38) ವಿದ್ಯಾರ್ಥಿನಿ ಜಾನವಿ (14) ಮೃತಪಟ್ಟಿದ್ದಾರೆ. ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 8ನೇ ತರಗತಿ ವಿದ್ಯಾರ್ಥಿನಿ ಜಾನವಿಯನ್ನ ಆಕೆಯ ಶಾಲೆಯ ಬಸ್ ಡ್ರೈವರ್ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಈ ಬಗ್ಗೆ ವಿದ್ಯಾರ್ಥಿನಿ ಮನೆಯಲ್ಲಿ ಪೋಷಕರೊಂದಿಗೆ ಹೇಳಿಕೊಂಡಿದ್ದಳು. ಕೂಡಲೇ ಪೋಚಕರು ಕೂಡ ಬಸ್ ಡ್ರೈವರ್ ಕಿರುಕುಳದ ಬಗ್ಗೆ ಶಾಲೆಯ ಮುಖ್ಯಸ್ಥರ ಬಳಿ ದೂರು ನೀಡಿದ್ದರು.
ಕಳೆದ ಮೂರು ವರ್ಷಗಳಿಂದ ಖಾಸಗಿ ಶಾಲೆಯಲ್ಲಿ ಬಸ್ ಡ್ರೈವರ್ ಆಗಿದ್ದ ಸಂತೋಷ ನಿರಂತರ ಕಿರುಕುಳ ನೀಡಿದ್ದಾನೆ. ವಿದ್ಯಾರ್ಥಿನಿ ಪೋಷಕರಿಂದ ಆತನಿಗೆ ವಾರ್ನಿಂಗ್ ನೀಡಿದ ನಂತರವೂ ಆಕೆಯನ್ನು ಪುಸಲಾಯಿಸಿ ಸ್ನೇಹ ಅಂತೆಲ್ಲ ಹೇಳಿ ಆತ್ಮೀಯತೆ ಬೆಳೆಸಿಕೊಂಡಿದ್ದಾನೆ. ನಿನ್ನೆ ಮನೆಯಿಂದ ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿಗೆಂದು (New year celebration) ಹೋಗುವುದಾಗಿ ಮನೆಯಲ್ಲಿ ಹೇಳಿ ಜಾನವಿ ಮನೆಯಿಂದ ಹೊರಗೆ ಬಂದಿದ್ದಾಳೆ. ಸಂತೋಷ ಆಕೆಯನ್ನು ಕರೆದುಕೊಂಡು ಸುತ್ತಾಡುವುದಕ್ಕೆ ಹೋಗಿದ್ದಾನೆ.
ಆದರೆ, ಜಾನವಿಯನ್ನ ತನ್ನ ಜೊತೆ ಕರೆದೊಯ್ದಿದ್ದ ಸಂತೋಷ ಮಧ್ಯರಾತ್ರಿಯೇ ರೈಲಿಗೆ ಅಡ್ಡನಿಂತುಕೊಂಡು ಸಾವಿಗೀಡಾಗಿದ್ದಾರೆ. ಆದರೆ, ಯಾರೂ ನೋಡದ್ದರಿಂದಾಗಿ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಶಾಲೆಯಲ್ಲಿ ಬಸ್ ಡ್ರೈವರ್ ಬಗ್ಗೆ ದೂರು ನೀಡಿದರೂ ಶಾಲಾ ಆಡಳಿತ ಮಂಡಳಿಯು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಶಾಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತುದ್ದಾರೆ.
ಇನ್ನು ರೈಲ್ವೆ ಟ್ರ್ಯಾಕ್ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
A school bus driver with a 8th class student committed suicide after getting hit by a train