ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಚಿಕ್ಕಮಗಳೂರು: ಜಿಲ್ಲೆಯ ಎಲ್ಲಾ ತಾಲ್ಲೂಕಿನ ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿಯಿಂದ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಆಜಾದ್ ಪಾರ್ಕ್ನಲ್ಲಿ ಸಮಾವೇಶಗೊಂಡ ಕಾರ್ಯಯರ್ತೆಯರು ಕೇಂದ್ರದ ಪ್ರೋತ್ಸಾಹಧನ ಮತ್ತು ರಾಜ್ಯ ಸರ್ಕಾರದ ಗೌರವಧನ ಸೇರಿ ಮಾಸಿಕ ೧೫ ಸಾವಿರ ರೂಗಳನ್ನು ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ನಗರದ ಬೀದಿಯಲ್ಲಿ ಮೆರವಣಿಗೆ ಮೂಲಕ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಧರಣಿ ನಡೆಸಿದರು.
ಪ್ರತಿಭಟನಾಗಾರರನ್ನುದ್ದೇಶಿಸಿ ಸಂಘದ ರಾಜ್ಯ ಸಮಿತಿ ಸದಸ್ಯೆ ಉಮಾದೇವಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ನಿಗಧಿತ ವೇತನ ಇದೆ. ಆದರೆ ಆಶಾಕಾರ್ಯಕರ್ತೆಯರಿಗೆ ಗೌರವಧನ ಹೊರತುಪಡಿಸಿ ಯಾವುದೇ ಆದಾಯ ಇಲ್ಲ. ಕೂಡಲೇ ಸರ್ಕಾರ ಮಾಸಿಕ ೧೫ ಸಾವಿರ ರೂ. ವೇತನ ನೀಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲಾಡಳಿತ ಕುಂದುಕೊರತೆ ಸಭೆ ಮಾಡುತ್ತಿಲ್ಲ, ಆರ್ಸಿಹೆಚ್ ಪೋರ್ಟಲ್ಗೆ ಲಿಂಕ್ ಮಾಡಿರುವುದರಿಂದ ಆಶಾಕಾರ್ಯಕರ್ತೆಯರಿಗೆ ವೇತನ ಸಂಪೂರ್ಣವಾಗಿ ಸಿಗದೆ ಸಾವಿರಾರು ರೂ ನಷ್ಟ ಅನುಭವಿಸುತ್ತಿದ್ದಾರೆ ಹಾಗೂ ಇತರ ವೇತನ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮತ್ತು ಮೊಬೈಲ್ ಆಧಾರಿತ ಕೆಲಸವನ್ನು ಕೈಬಿಡುವಂತೆ ಒತ್ತಾಯಿಸಿ ಇಂದು ಜಿಲ್ಲಾಮಟ್ಟದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಆಶಾ ಸಾಫ್ಟ್ವೇರ್ನಿಂದಾಗಿ ವೇತನ ಸರಿಯಾಗಿ ಪಾವತಿಯಾಗುತ್ತಿಲ್ಲ. ಈ ತೊಂದರೆಯನ್ನು ತಪ್ಪಿಸಬೇಕು. ಮೊಬೈಲ್ ಆಧಾರಿತ ಕೆಲಸಗಳಿಗೆ ತರಬೇತಿ ಕೊಡಬೇಕು. ಹಾಗೂ ಪದೆ ಪದೆ ಕೆಲಸದಿಂದ ತೆಗೆಯುತ್ತೇವೆಂಬ ಅಧಿಕಾರಿಗಳು ಬೆದರಿಸುತ್ತಿರುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಎಐಟಿಯುಸಿ ಅಧ್ಯಕ್ಷೆ ತಾರಾಕೃಷ್ಣಪ್ಪ ಮಾತನಾಡಿ ಸರ್ಕಾರ ಆಶಾಕಾರ್ಯಕರ್ತೆಯರಿಗೆ ಜೀವನ ಭದ್ರತೆ ಹಾಗೂ ಆರೋಗ್ಯ ಭದ್ರತೆ ಒದಗಿಸಬೇಕು. ಆಶಾ ಕಾರ್ಯಕರ್ತೆಯರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಧನ ಕೂಡಲೇ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ಜಿಲ್ಲಾ ಅಧ್ಯಕ್ಷೆ ತಾರಕೇಶ್ವರಿ, ಕಾರ್ಯದರ್ಶಿ ಎಂ.ಕೆ ಜ್ಯೋತಿ, ಕೊಪ್ಪ ತಾಲ್ಲೂಕು ಅಧ್ಯಕ್ಷೆ ಗೀತಾ, ಎನ್.ಆರ್ ಪುರ ಗಾಯಿತ್ರಿ, ಪ್ರಧಾನ ಕಾರ್ಯದರ್ಶಿ ಮಂಜುಳ, ಪ್ರೇಮ, ಪವಿತ್ರ, ನಯನ, ಲತಾ, ಪುಷ್ಟ, ಭಾಗ್ಯಲಕ್ಷ್ಮಿ, ರತ್ನಮ್ಮ, ರುಕ್ಮಣಿ ಮತ್ತಿತರರು ವಹಿಸಿದ್ದರು.
Protest demanding fulfillment of various demands of Asha workers