ಜ.28 ಕ್ಕೆ ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ
ಚಿಕ್ಕಮಗಳೂರು: ಎಚ್.ಕಾಂತರಾಜು ವರದಿಯನ್ನು ರಾಜ್ಯ ಸರಕಾರ ಕೂಡಲೇ ಸ್ವೀಕರಿಸಿ ಯಥಾವತ್ತಾಗಿ ಅಂಗೀಕರಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಚಿತ್ರದುರ್ಗದಲ್ಲಿ ಜ.೨೮ ರಂದು ಶೋಷಿತರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ವಿವಿಧ ಪಕ್ಷ ಸಂಘಟನೆಯ ಮುಖಂಡರು ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ಡಿ.ಸಿ.ಪುಟ್ಟೇಗೌಡ ಮಾತನಾಡಿ, ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಶೋಷಿತರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಎಚ್.ಕಾಂತರಾಜು ವರದಿಯನ್ನು ಕೋಟ್ಯಂತರ ರೂ. ವ್ಯಯಿಸಿ ಸಿದ್ದಪಡಿಸಲಾಗಿದೆ. ಆದರೆ, ವರದಿ ಬಿಡುಗಡೆಗೂ ಮುನ್ನವೇ ಕೆಲ ಬಲಾಡ್ಯ ಸಮುದಾಯದವರು ಆ ವರದಿ ಬಿಡುಗಡೆ ಮತ್ತು ಜಾರಿ ಮಾಡದಂತೆ ಒತ್ತಡ ಹಾಕಿದ್ದಾರೆ. ಬಿಡುಗಡೆಗೂ ಮುನ್ನವೇ ಆ ವರದಿ ಸರಿಯಿಲ್ಲ ಎಂದು ಇವರು ಹೇಗೆ ನಿರ್ಧರಿಸಿದರು ಎಂದು ಪ್ರಶ್ನಿಸಿ ಇವರ ಉದ್ದೇಶ ಕಾಂತರಾಜು ವರದಿ ಜಾರಿಮಾಡಬಾರದು ಎಂಬುದಾಗಿದೆ ಎಂದು ದೂರಿದರು.
ಬಿಎಸ್ಪಿ ಮುಖಂಡ ಪರಮೇಶ್ವರ್ ಮಾತನಾಡಿ, ಎಚ್.ಕಾಂತರಾಜು ವರದಿ ಜಾತಿ ಜನಗಣತಿ ವರದಿಯಲ್ಲ. ಸಾಮಾಜಿಕ, ಶೈಕ್ಷಣಿಕ ಹಾಗೂ ಅರ್ಥಿಕ ಸ್ಥಿತಿಗತಿಯ ವರದಿಯಾಗಿದೆ. ಇದನ್ನು ಜಾರಿ ಮಾಡಲು ಕೆಲವರು ಏಕೆ ವಿರೋಧಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಬ್ರಿಟೀಷರ ಕಾಲದಿಂದಲೂ ೫ ವರ್ಷಕ್ಕೊಮ್ಮೆ ಆಯೋಗಗಳನ್ನು ರಚಿಸಿ ಸಮೀಕ್ಷೆ ಮಾಡಿ ಕೆಳಸ್ತರದ ಜನರನ್ನು ಮೇಲೆತ್ತುವ ಕೆಲಸ ನಡೆದೇ ಇದೆ. ಆದರೆ, ಸ್ವಾತಂತ್ರ್ಯ ನಂತರ ಈ ರೀತಿ ಅಡೆತಡೆ ಬರುತ್ತಿರುವುದು ಶೋಚನೀಯ ಎಂದರು.
ಡಿಎಸ್ಎಸ್ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ, ಚಿತ್ರದುರ್ಗದ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು ಅವರಲ್ಲಿ ಕಾಂತರಾಜು ವರದಿ ಜಾರಿ ಮಾಡುವಂತೆ ಆಗ್ರಹಿಸಲಾಗುವುದು ಎಂದರು.
ಡಿಎಸ್ಎಸ್ ಮರ್ಲೆ ಅಣ್ಣಯ್ಯ ಮಾತನಾಡಿ ಜಿಲ್ಲಾಧಿಕಾರಿ ಕಚೇರಿಯಿಂದ ೨೦೦ ಮೀಟರ್ವ್ಯಾಪ್ತಿ ನಿಷೇದಾಜ್ಞೆ ಜಾರಿ ಇದ್ದರೂ ಸೋಮವಾರ ಬಜರಂಗದಳ, ವಿಹಿಂಪ ಕಾರ್ಯಕರ್ತರು ಡಿಸಿ ಕಚೇರಿ ಬಾಗಿಲಲ್ಲೇ ಹೋಮ ಮಾಡಲು ಅವಕಾಶ ನೀಡಿದ್ದನ್ನು ಡಿಎಸ್ಎಸ್ ಖಂಡಿಸುತ್ತದೆ. ಇತರೆ ಸಂಘಟನೆಗಳಿಗೆ ಆಜಾದ್ ಪಾರ್ಕಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದರೆ ಬಜರಂಗದಳದಂತಹ ಸಂಘಟನೆಗಳು ಕಚೇರಿ ಮುಂದೆಯೇ ಹೋಮ ಮಾಡಿದರೂ ಅವರನ್ನು ವಶಕ್ಕೆ ಪಡೆದು ಮತ್ತೆ ಕಳುಹಿಸಲಾಗಿದೆ. ಕೂಡಲೇ ಅವರೆಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರವಿಕುಮಾರ್, ಸಂತೋಷ್ ಇದ್ದರು.
Convention of the exploited in Chitradurga on January 28