ಕಾಫಿಬೆಳೆ ಅಭಿವೃದ್ಧಿಗೆ ದಶಕದ ಕ್ರಿಯಾಯೋಜನೆ ಕೇಂದ್ರಕ್ಕೆ ಸಲ್ಲಿಕೆ
ಚಿಕ್ಕಮಗಳೂರು: ದೇಶದ ಎಲ್ಲಾ ಕಾಫಿ ಬೆಳೆಯುವ ಪ್ರದೇಶಗಳನ್ನು ಒಳಗೊಂಡಂತೆ ಕಾಫಿ ಬೆಳೆ ಅಭಿವೃದ್ಧಿ ಹಾಗೂ ಅದಕ್ಕೊಂದು ವ್ಯವಸ್ಥಿತ ಮಾರುಕಟ್ಟೆಯನ್ನು ಒದಗಿಸುವ ಹಿನ್ನೆಲೆಯಲ್ಲಿ ಮುಂದಿನ ಒಂದು ದಶಕದ ಕ್ರಿಯಾಯೋಜನೆಯೊಂದನ್ನು ಕೇಂದ್ರ ವಾಣಿಜ್ಯ ಸಚಿವರಿಗೆ ಸಲ್ಲಿಸಲಾಗಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ ದಿನೇಶ್ ದೇವವೃಂದ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಕಾಫಿ ಬೆಳೆ ಹಾಗೂ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚಿಸಿ ಅನಂತರ ಮುಂದಿನ ಹತ್ತು ವರ್ಷಗಳಲ್ಲಿ ಕಾಫಿ ಬೆಳೆಗಾರರ ಆದಾಯವನ್ನು ಮುಂದಿನ ಹತ್ತು ವರ್ಷಗಳಲ್ಲಿ ದ್ವಿಗುಣಗೊಳಿಸುವ ಹಾಗೂ ಕಾಫಿ ರಫ್ತು ಪ್ರಮಾಣದಲ್ಲಿ ಪೂರಕ ಅಂಶಗಳನ್ನು ಒಳಗೊಂಡಿರುವ ವಿವರವಾದ ದಶವಾರ್ಷಿಕ ಕ್ರಿಯಾಯೋಜನೆಯನ್ನು ಸಚಿವರಿಗೆ ನೀಡಿರುವುದಾಗಿ ಹೇಳಿದರು.
ಸಚಿವರಿಂದ ಕ್ರಿಯಾಯೋಜನೆ ಬಗ್ಗೆ ಅತ್ಯಂತ ಸಕಾರಾತ್ಮಕವಾದ ಪ್ರತಿಸ್ಪಂದನೆ ದೊರೆತಿದ್ದು, ಅದರಲ್ಲಿರುವ ಅನೇಕ ಅಂಶಗಳನ್ನು ಮೆಚ್ಚಿಕೊಂಡ ಸಚಿವರು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಮರ್ದೀಪ್ ಸಿಂಗ್ ಭಾಟಿಯಾ ಅವರನ್ನು ಕರೆದು ಅಧ್ಯಕ್ಷರೊಂದಿಗೆ ಈ ಬಗ್ಗೆ ಚರ್ಚಿಸಿ ಮುಂದೆ ಕೈಗೊಳ್ಳಬೇಕಾದ ರೂಪು-ರೇಷೆಗಳನ್ನು ಸಿದ್ಧಪಡಿಸಲು ಸೂಚಿಸಿದರು ಎಂದು ಹೇಳಿದರು.
ಪ್ರಸ್ತುತ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ವಿವರಿಸಿ, ಅದರ ನಿವಾರಣೆಗೆ ಅಗತ್ಯವಾದ ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು. ಪ್ರಮುಖವಾಗಿ ಬೆಳೆ ಸಾಲಕ್ಕೆ ಬಡ್ಡಿ ಸಹಾಯಧನ ನೀಡಲು, ಹವಾಮಾನ ಆಧಾರಿತ ವಿಮಾಯೋಜನೆಯನ್ನು ಕಾಫಿ ಬೆಳೆಗೂ ವಿಸ್ತರಿಸಲು ಹಾಗೂ ಬೆಳೆಗಾರರಿಗೆ ಅತ್ಯಂತ ಮಾರಕವಾಗಿರುವ ಸರ್ಫೈಸಿ ಕಾಯ್ದೆಯಿಂದ ಕಾಫಿ ಬೆಳೆಗಾರರನ್ನು ಹೊರಗಿಡಲು ಸಚಿವರಲ್ಲಿ ಮನವಿ ಮಾಡಲಾಯಿತು ಎಂದರು.
ದಶ ವಾರ್ಷಿಕ ಕ್ರಿಯಾಯೋಜನೆಯಲ್ಲಿದ್ದ ಭಾರತದ ಕಾಫಿ ರಫ್ತನ್ನು ದ್ವಿಗುಣಗೊಳಿಸುವ ಬಗ್ಗೆ ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಯಾವಕ್ರಮ ಕೈಗೊಳ್ಳಬೇಕೆಂದು ಸಚಿವರು ಪ್ರಶ್ನಿಸಿದಾಗ ಆ ಬಗ್ಗೆ ವಿವರ ನೀಡಿ, ಕಾಫಿ ತೋಟಗಳಲ್ಲಿ ಕಾಫಿ ಬೆಳೆ ಪ್ರಮಾಣ ಹೆಚ್ಚಿಸಲು ಅತ್ಯಂತ ಅವಶ್ಯಕವಾದ ಮಣ್ಣು ಪರೀಕ್ಷೆ, ಕಾಫಿ ತೋಟಗಳ ಯಾಂತ್ರೀಕರಣ, ಬೆಳೆ ಪ್ರಮಾಣ ಹೆಚ್ಚಿಸಲು ಕೈಗೊಳ್ಳಲು ತದ್ರೂಪಿ ತಳಿಗಳ ಅಭಿವೃದ್ಧಿಗೆ ಅಂಗಾಂಶ ಕೃಷಿ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ತಿಳಿಸಲಾಯಿತು. ಇದಕ್ಕೆ ತಮ್ಮ ಇಲಾಖಾ ವತಿಯಿಂದ ಅಗತ್ಯ ನೆರವು ನೀಡುವ ಭರವಸೆಯನ್ನು ನೀಡಿದರು.
ಕಾಫಿ ಆಧಾರಿತ ರಾಸಾಯನಿಕ ಗೊಬ್ಬರ ತಯಾರಿಸಿ ಬೆಳೆಗಾರರಿಗೆ ಒದಗಿಸಲು ಸಂಬಂಧಿಸಿದ ಇಲಾಖಾ ಸಚಿವರೊಂದಿಗೆ ಚರ್ಚಿಸುವ ಭರವಸೆಯನ್ನೂ ಸಚಿವರು ನೀಡಿದರು.
ಕಾಫಿ ಮಂಡಳಿ ಸಹ ಇದಕ್ಕೆ ಪೂರಕವಾದ ವಿವರವಾದ ಯೋಜನಾ ವರದಿಯನ್ನು ಸಿದ್ಧಗೊಳಿಸುತ್ತಿದೆ. ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ನೀಡುವ ಸಲುವಾಗಿ ಕಾಫಿ ಬೆಳೆಗಾರರು ಪಡೆದಿರುವ ಬೆಳೆ ಸಾಲದ ಪ್ರಮಾಣದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ವಿವರಿಸಿದರು.
ಸಚಿವರ ಭೇಟಿಗೆ ಕೇಂದ್ರ ಕೃಷಿ ಮತ್ತು ರೈತಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪ್ರತಾಪಸಿಂಹ, ಬಿಜೆಪಿ ಮುಖಂಡ ಸಿ.ಟಿ.ರವಿ ಸೂಕ್ತ ಸಹಕಾರ ನೀಡಿದ್ದರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಫಿ ಮಂಡಳಿ ಸದಸ್ಯರುಗಳಾದ ಡಿ.ಎಂ ಶಂಕರ್, ಪ್ರದೀಪ್ ಪೈ ಇದ್ದರು.
Commerce Minister Piyush Goyal submitted action plan on coffee crop development