ಭೂಮಾಫೀಯಾದವರಿಂದ ಕಳಸದ ಕುಂಬಾರಕೇರಿ ಮೂಲನಿವಾಸಿಗಳಿಗೆ ದೌರ್ಜನ್ಯ
ಚಿಕ್ಕಮಗಳೂರು: ಕಳಸದ ಕುಂಬಾರಕೇರಿ ಮೂಲನಿವಾಸಿಗಳಿಗೆ ಭೂಮಾಫೀಯಾದವರಿಂದ ಆಗುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸಂಕಷ್ಟದಲ್ಲಿರುವ ಬಡ ಕುಂಬಾರ ಸಮುದಾಯದ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ದಿ ಸಂಘದ ಕೆ.ಎಂ. ಗಂಗಾಧರ್ ಒತ್ತಾಯಿಸಿದರು.
ನಗರದಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ನೂರಾರು ವರ್ಷಗಳಿಂದ ಕಳಸ ದೇವಾಲಯಕ್ಕೆ ಬಿಟ್ಟಿ ಕೆಲಸ ಮಾಡಲು ನಿಯೋಜನೆಗೊಂಡಿದ್ದ ಕುಂಬಾರ ಸಮುದಾಯದ ೧೫ ಕುಟುಂಬಗಳಿಗೆ ಮಹಾರಾಜರ ಕಾಲದಲ್ಲಿ ತಲಾ ೨ ಎಕರೆ ಜಮೀನು ನೀಡಲಾಗಿತ್ತು.
ಆ ಜಮೀನಿನಲ್ಲಿ ನಮ್ಮ ಸಮುದಾಯದ ಜನ ಕೃಷಿ ಕೆಲಸ ಮಾಡಿಕೊಂಡು ಅದರೊಂದಿಗೆ ದೇವಾಲಯದ ಜಾತ್ರಾ ಮಹೋತ್ಸವ, ಹಬ್ಬ, ಹರಿದಿನಗಳಲ್ಲಿ ಬಿಟ್ಟಿಕೆಲಸ ನಿರ್ವಹಿಸುತ್ತಾ ಬಂದಿದ್ದರು ಆದರೆ ನೀಡಿದ್ದ ಜಮೀನಿಗೆ ದಾಖಲಾತಿಗಳನ್ನು ನೀಡಿರಲಿಲ್ಲ ಎಂದು ಹೇಳಿದರು
ದೇವಾಲಯದ ಪ್ರಧಾನ ಅರ್ಚಕರಿಗೆ ನೀಡಿದ ಜಮೀನುಗಳಿಗೆ ದಾಖಲೆ ತಯಾರಿಸಿಕೊಂಡ ಅರ್ಚಕರ ಕುಟುಂಬಗಳು ನಮ್ಮ ಜಮೀನುಗಳಿಗೂ ಸೇರಿಸಿ ಅವರ ಹೆಸರಿನಲ್ಲಿ ದಾಖಲೆ ತಯಾರಿಸಿ ಭೂಮಾಫೀಯಾದವರಿಗೆ ಮಾರಾಟ ಮಾಡಿ ನಮ್ಮ ಕುಟುಂಬಗಳಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದರು.
ಈ ಜಮೀನುಗಳನ್ನು ಸ್ಥಳೀಯರಾದ ಭೂಮಾಫೀಯಾದ ವ್ಯಕ್ತಿಗಳು ಖರೀದಿಸಿಕೊಂಡು ನಮ್ಮ ಜಮೀನುಗಳಿಗೆ ಅನಧೀಕೃತವಾಗಿ ಪ್ರವೇಶಿಸಿ ನಮ್ಮ ಬೆಳೆಗಳನ್ನು ನಾಶಮಾಡಿ ನಮ್ಮ ವಾಸದ ಮನೆ, ಶೆಡ್ಗಳನ್ನು ನಾಶಗೊಳಿಸಿದ್ದು ಇದಕ್ಕೆ ಸ್ಥಳೀಯ ಪಿಡಿಓಗಳು, ತಹಶೀಲ್ದಾರ್, ಆರಣ್ಯಾಧಿಕಾರಿಗಳು, ಸರ್ವೇಯರುಗಳ ಬೆಂಬಲದೊಂದಿಗೆ ನಮ್ಮ ಜಮೀನುಗಳನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದಾರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ನಮಗೆ ನ್ಯಾಯದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಮೂಡಿಗೆರೆಯ ಹರೀಶ್, ಅರುಣ್ಕುಮಾರ್, ರಮೇಶ್ ಇದ್ದರು.
Scavenging of garbage by land grabbers is an atrocity to the indigenous people