ಅಭಿವೃದ್ಧಿ ಎಲ್ಲಿ ಎಂದು ಕೇಳುವವರಿಗೆ ನಮ್ಮ ಬಳಿ ಬೇಕಾದಷ್ಟು ಪಟ್ಟಿ ಇದೆ
ಚಿಕ್ಕಮಗಳೂರು: ಅಭಿವೃದ್ಧಿ ಎಲ್ಲಿ ಎಂದು ಕೇಳುವವರಿಗೆ ನಮ್ಮ ಬಳಿ ಬೇಕಾದಷ್ಟು ಪಟ್ಟಿ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತರು ಯಾರೂ ಹಿಂಜರಿಯುವ ಅಗತ್ಯವಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕರ್ತರು ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದಿಂದ ಆಗಿರುವ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನ ಇಟ್ಟುಕೊಂಡು ಜನತೆಗೆ ತಿಳಿಸುವ ಕೆಲಸ ಆಗಬೇಕು ಎಂದರು.
ಇದು ನಮಗೆ ಪ್ರತಿಷ್ಠೆಯ ಚುನಾವಣೆ ಇಲ್ಲಿ ಯಾರು ಅಭ್ಯರ್ಥಿ ಆಗುತ್ತಾರೆ. ಯಾರಿಗೆ ಟಿಕೆಟ್ ಎನ್ನುವುದನ್ನು ಪಕ್ಷ ನಿರ್ಧಾರ ಮಾಡುತ್ತಾರೆ. ಅದಕ್ಕೆಂದೇ ಪಕ್ಷದ ವೇದಿಕೆ ಇದೆ. ರಸ್ತೆಯಲ್ಲಿ ನಿರ್ಧಾರವಾಗುವುದಲ್ಲ. ಮಾಧ್ಯಮದ ಮುಂದೆಯೇ ನಿರ್ಧಾರ ಮಾಡಲು ಆಗುವುದಿಲ್ಲ. ಹೈಕಮಾಂಡ್ ಹೇಳಿದಂತೆ ನಾವು ಕೆಲಸ ಮಾಡಬೇಕು ಎಂದು ಹೇಳಿದರು.
ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ನಮ್ಮ ಹಳ್ಳಿಗಳಲ್ಲಿರುವ ಶೇ.೮೦ ರಿಂದ ೯೦ ಭಾಗ ಜನಕ್ಕೆ ಕೇಂದ್ರದ ಒಂದಲ್ಲ ಒಂದು ಯೋಜನೆಯ ಲಾಭ ಪಡೆಯುತ್ತಿರುವುದನ್ನು ಕಾಣಬಹುದು. ಈ ಕಾರಣಕ್ಕೆ ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಏನೇ ಚರ್ಚೆಗಳು ನಡೆದರೂ ಕಾರ್ಯಕರ್ತರು ಹಿಂಜರಿಯಬೇಕಾದ ಅಗತ್ಯವಿಲ್ಲ. ಹತ್ತು ವರ್ಷದ ಹಿಂದೆ ನಮ್ಮ ಕ್ಷೇತ್ರದಲ್ಲಿ ಹೆದ್ದಾರಿಗಳು, ರೈಲ್ವೆ ಪರಿಸ್ಥಿತಿ ಹೇಗಿತ್ತು. ಎಷ್ಟು ಅನುದಾನ ಬರುತ್ತಿತ್ತು, ಹಳ್ಳಿಗಳಿಗೆ ಕೇಂದ್ರದಿಂದ ಯಾವ ಯೋಜನೆ ಬರುತ್ತಿತ್ತು. ಎನ್ನುವುದನ್ನು ಯೋಚಿಸಬೇಕು ಎಂದರು.
ಕಿಸಾನ್ ಸಮ್ಮಾನ್, ವಿದ್ಯುತ್ ಇಲ್ಲದ ಮನೆಗಳಿಗೆ ಪಂಡಿತ್ ದೀನ್ದಯಾಳ್ ವಿದ್ಯುದೀಕರಣ ಯೊಜನೆಯಲ್ಲಿ ವಿದ್ಯುತ್ ಸಿಕ್ಕಿದೆ. ತರೀಕೆರೆ, ಕಡೂರು, ಶೃಂಗೇರಿ ಇತರೆಡೆ ಬೆಳೆ ವಿಮೆ ಕಟ್ಟಿದವರ ಖಾತೆಗೆ ಹತ್ತು ಪಟ್ಟು ಹಣ ಅವರ ಖಾತೆಗೆ ಸಂದಾಯವಾಗಿದೆ. ಪಿಎಂಜಿಎಸ್ವೈ ಯೋಜನೆಯಡಿ ಇಡೀ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಯೋಜನೆಗಳು ಬಂದಿದ್ದು ಉಡುಪಿ-ಚಿಕ್ಕಮUಳೂರು ಕ್ಷೇತ್ರಕ್ಕೆ ಮಾತ್ರ. ಅತೀವೃಷ್ಠಿ ಪರಿಹಾರ ನಿಧಿಯಿಂದ ಹಣ ನಮ್ಮ ಕ್ಷೇತ್ರಕ್ಕೆ ಬಂದಿದೆ ಎಂದರು.
ಸರ್ಕಾರಿ ಮೆಡಿಕಲ್ ಕಾಲೇಜಿಗೆ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಮಹಿಳೆಯರ ಮೇಲಿನ ದೌರ್ಜನ್ಯ ನಡೆದ ಸಂದರ್ಭದಲ್ಲಿ ಅವರ ರಕ್ಷಣೆಗಾಗಿ ನಮ್ಮ ಎರಡೂ ಸಖಿ ಕೇಂದ್ರದವನ್ನು ಮಂಜೂರು ಮಾಡಿಸಲಾಗಿದೆ. ರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನಮ್ಮ ಕ್ಷೇತ್ರದ ಮಕ್ಕಳಿಗೂ ಸಿಗಬೇಕು ಎನ್ನುವುದಕ್ಕಾಗಿ ಎರಡೂ ಜಿಲ್ಲೆಗೆ ಮೊದಲ ಬಾರಿಗೆ ಕೇಂದ್ರೀಯ ವಿದ್ಯಾಲಯಗಳು ಬಂದಿವೆ. ಉಡುಪಿಯಲ್ಲಿ ಜಿಐಟಿಸಿ ಸಂಸ್ಥೆ ತೆರೆಯಲಾಗಿದೆ. ಜೆಮ್ಸ್ ಅಂಡ್ ಜ್ಯುವೆಲ್ಸ್ ತರಬೇತಿ ಕೇಂದ್ರ ಉಡುಪಿಯಲ್ಲಿ ಸ್ಥಾಪನೆ ಆಗಿದೆ. ಇಡೀದೇಶದಿಂದ ಮಕ್ಕಳು ಇಲ್ಲಿ ಬಂದು ಆಭರಣ ತಯಾರಿಕೆ ತರಬೇತಿ ಪಡೆಯುತ್ತಿದ್ದಾರೆ ಎಂದರು.
ನಮ್ಮ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇಂದ್ರದ ಬೇರೆ ಬೇರೆ ಕಂಪನಿಗಳ ಸಹಕಾರದಿಂದ ಆಕ್ಸಿಜನ್ ಪ್ಲಾಂಟ್ಗಳನ್ನು ಸ್ಥಾಪಿಸಲಾಗಿದೆ. ಆಸ್ಪತ್ರೆಗಳು ಮೇಲ್ದರ್ಜೆಗೇರಲ್ಪಟ್ಟಿದೆ. ಅತ್ಯಂತ ಹೆಚ್ಚು ಮುದ್ರಾ ಸಾಲ ಪಡೆದಿರುವುದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೇ ಆದರೆ ಅವರು ಹೇಳುವುದಿಲ್ಲ. ಈ ರೀತಿ ಬಹಳ ದೊಡ್ಡ ಪ್ರಮಾಣದಲ್ಲಿ ಕೇಂದ್ರದಿಂದ ಸೌಲತ್ತುಗಳನು ಕಲ್ಪಿಸಲಾಗಿದೆ ಎಂದರು.
ಶೃಂಗೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ತೆರೆಯಲು ಅನುದಾನ ನೀಡಿದ್ದೇವೆ. ದೊಡ್ಡ ಕಟ್ಟಡ ನಿರ್ಮಾಣವಾಗಿದೆ. ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆ ನೀರು ಹೋಗುತ್ತಿದೆ. ಇನ್ನೂ ಕೆಲವು ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರ ಕೆಲವು ತಪ್ಪುಗಳನ್ನು ಮಾಡಿರುವುದರಿಂದ ವಿಳಂಭವಾಗಿರಬಹುದು. ತರೀಕೆರೆಯಲ್ಲಿ ಮೊದಲ ಬಾರಿಗೆ ಎಲ್ಲಾ ರೈಲು ನಿಲ್ಲುವಂತೆ ಮಾಡಿದ್ದೇವೆ. ಅಂಡರ್ ಪಾಸ್, ಓವರ್ ಬ್ರಿಡ್ಜ್ಗಳನ್ನು ಮಾಡಿದ್ದೇವೆ ಎಂದರು.
Inauguration of election office of Lok Sabha constituency in BJP office