ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ
ಚಿಕ್ಕಮಗಳೂರು: ಕಾಫಿನಾಡು ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಿ ತ್ವರಿತವಾಗಿ ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ಆಮ್ ಅದ್ಮಿ ಪಕ್ಷದ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ.ಕೆ.ಸುಂದರಗೌಡ ಆಗ್ರಹಿಸಿದರು.
ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಚಿಕ್ಕಮಗಳೂರು ತಾಲ್ಲೂಕಿನ ಕೆಲವು ಹೋಬಳಿಗಳನ್ನು ಬರ ವ್ಯಾಪ್ತಿಯಿಂದ ಕೈಬಿಟ್ಟಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಕಾರಣ. ಕೇಂದ್ರದ ಬರ ಅಧ್ಯಯನ ತಂಡಕ್ಕೆ ಮನವರಿಗೆ ಮಾಡಿಕೊಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ರೈತರ ಪಂಪ್ಸೆಟ್ಗಳಿಗೆ ನಿರಂತರ ೭ ಗಂಟೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವುದಾಗಿ ಹೇಳಿದ್ದ ಸರ್ಕಾರ ೩ಫೇಸ್ ವಿದ್ಯುತ್ ಸರಬರಾಜು ಮಾಡುವಲ್ಲಿ ವಿಫಲವಾಗಿರುವುದರಿಂದ ರೈತರು ವಲಸೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೂಡಲೇ ರೈತರ ಬದುಕು ಕಟ್ಟುವ ಕೆಲಸಕ್ಕೆ ಚಾಲನೆ ನೀಡಬೇಕೆಂದು ಒತ್ತಾಯಿಸಿದರು.
ಬರಗಾಲದ ಈ ಕಠಿಣ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು, ಪ್ರತೀ ವಾರ ಜಿಲ್ಲೆಯ ಒಬ್ಬ ಉನ್ನತ ಅಧಿಕಾರಿ ಲೋಕಾಯುಕ್ತರ ದಾಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಜನಸ್ನೇಹಿ ಆಡಳಿತಕ್ಕೆ ಅಧಿಕಾರಿಗಳು ಬದ್ಧರಾಗಿದ್ದಾರೆಂಬುದು ತಿಳಿಯುತ್ತದೆ ಎಂದರು.
ಕಾಡಿನ ನಾಶದಿಂದಾಗಿ ಬೇಸಿಗೆಯ ಬೆಂಕಿಯ ಹಾವಳಿಯಿಂದ ವನ್ಯ ಜೀವಿಗಳು ನಾಡಿಗೆ ಪ್ರವೇಶ ಮಾಡಿ ದಾಂದಲೆ ನಡೆಸಿದರೂ ಪರಿಣಾಮಕಾರಿಯಾದ ನಿರ್ವಹಣೆ ಇಲ್ಲದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಜನವಿರೋಧಿ ನೀತಿಗೆ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.
ಶ್ರೀಗಂಧವು ನಾಡಿಗೆ ವಿಶ್ವ ಪ್ರಾಶಸ್ತ್ಯವನ್ನು ತಂದುಕೊಟ್ಟಿದ್ದು, ಈಗ ಸ್ಪೈಕ್ ರೋಗದಿಂದ ಶ್ರೀಗಂಧ ಮರ ಸಂಪೂರ್ಣ ನಾಶದ ಅಂಚಿನಲ್ಲಿದ್ದು ಕೂಡಲೇ ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ನಡೆಸಿ ರೈತರ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು.
ಇಂಡಿಯನ್ ಇನ್ಸ್ಟೂಟ್ ಆಫ್ ಗುಡ್ ಸೈನ್ಸ್ ಸಂಸ್ಥೆಗೆ ವೈಜ್ಞಾನಿಕ ಸಂಶೋಧನೆಗಾಗಿ ೨೮ ಲಕ್ಷ ರೂಗಳ ಅನುದಾನವನ್ನು ನೀಡದೇ ಇರುವುದು ಕಾಡಿನ ಮೇಲಿನ ಪ್ರೀತಿ, ಶ್ರೀಗಂಧ ಮರದ ಸಂರಕ್ಷಣೆಯ ಗುಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ವಿಲಿಯಂ ಪೆರೇರಾ, ಪುಟ್ಟರಾಜು ಉಪಸ್ಥಿತರಿದ್ದರು.
Declare the district as a fully drought prone area