ಮಾ.೧೦ ಜಿಲ್ಲಾ ಆಟದ ಮೈದಾನದಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ೨೦೨೪ ನೇ ಸಾಲಿನಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ನಗರದ ನೇತಾಜಿ ಸುಭಾಷ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಮಾ.೧೦ ರಂದು ಏರ್ಪಡಿಸಲಾಗಿದೆ ಎಂದು ಚಿಕ್ಕಮಗಳೂರು ಕೆನಲ್ ಕ್ಲಬ್ ಅಧ್ಯಕ್ಷ ಕವೀಶ್ ಕುಮಾರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಪಶುಸಂಗೋಪನೆ ಇಲಾಖೆ ಮತ್ತು ಚಿಕ್ಕಮಗಳೂರು ಕೆನಲ್ ಕ್ಲಬ್ ಇವರುಗಳ ಸಹಯೋಗದಲ್ಲಿ ಈ ಶ್ವಾನ ಪ್ರದರ್ಶನ ಏರ್ಪಡಿಸಲಾಗಿದ್ದು, ೨೫ ರಿಂದ ೩೦ ವಿವಿಧ ದೇಶೀಯ ತಳಿ ಶ್ವಾನಗಳು ಭಾಗವಹಿಸಲಿವೆ. ಈ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲಿಚ್ಚಿಸುವವರು ೪೯೯ ರೂ ಗಳನ್ನು ಪಾವತಿಸಿ ನೊಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಆಯ್ಕೆಯಾದ ತಳಿವಾರು ಉತ್ತಮ ಶ್ವಾನಗಳಿಗೆ ಪ್ರಥಮ ಬಹುಮಾನ ೩೦ ಸಾವಿರ ರೂ, ದ್ವಿತೀಯ ೨೦ ಸಾವಿರ ರೂ. ತೃತೀಯ ೧೫ ಸಾವಿರ ರೂ, ೪ನೇ ಬಹುಮಾನ ೧೦ ಸಾವಿರ ಹಾಗೂ ೫ನೇ ಬಹುಮಾನ ೫ ಸಾವಿರ ರೂ ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಗುವುದು ಎಂದು ಹೇಳಿದರು.
ಈ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸುವ ಎಲ್ಲಾ ಶ್ವಾನಗಳಿಗೂ ಉಚಿತ ರೇಬೀಸ್ ಲಸಿಕೆಯನ್ನು ನೀಡಲಾಗುವುದು. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಂದ ೨೦೦ ನೋಂದಣಿಯಾಗಿದ್ದು, ೫೦೦ ನೋಂದಣಿಯಾಗುವ ನಿರೀಕ್ಷೆ ಇದೆ. ಇದೇ ಕಾರ್ಯಕ್ರಮದಲ್ಲಿ ೧ ಸಾವಿರ ಗಿಡಗಳನ್ನು ವಿತರಣೆ ಮಾಡಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಲಬ್ ಖಜಾಂಚಿ ದೀಪಕ್ ಸುವರ್ಣ, ಸದಸ್ಯರುಗಳಾದ ರಂಜಿತ್ ಶೆಟ್ಟಿ, ಚಂದನ್, ಉದಯ್ಕುಮಾರ್, ಪುನೀತ್ ಮತ್ತಿತರರು ಭಾಗವಹಿಸಿದ್ದರು.
Mar. 10 State level dog show at district playground