ಬಿಜೆಪಿ ಸ್ವಾಭಿಮಾನ ಪರಿವಾರ ಕಾರ್ಯಕರ್ತರ ಸಮಾವೇಶ
ಮೂಡಿಗೆರೆ: ಬಿಜೆಪಿಯಲ್ಲಿ ಎರಡು ಬಣಗಳಾಗಿರುವುದು ಉತ್ತಮ ಬೆಳೆವಣಿಗೆಯಲ್ಲ. ಇದನ್ನು ಶೀಘ್ರದಲ್ಲಿಯೇ ಸರಿಪಡಿಸಿ ಎಲ್ಲರೂ ಪಕ್ಷ ಸಂಘಟನೆಗೆ ದುಡಿಯುವ ಕೆಲಸ ಆಗಬೇಕಿದೆ ಎಂದು ಜಿ.ಪಂ. ಮಾಜಿ ಸದಸ್ಯ ವಿ.ಕೆ.ಶಿವೇಗೌಡ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಪ್ರೀತಮ್ ಕಲ್ಯಾಣಮಂಟಪದಲ್ಲಿ ಬಿಜೆಪಿ ಸ್ವಾಭಿಮಾನ ಪರಿವಾರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರನ್ನು ಏಕಾಏಕಿ ಅಮಾನತ್ತುಗೊಳಿಸುವ ಕ್ರಮ ಸರಿಯಲ್ಲ. ಇದು ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತದೆ ಎಂದರು.
ಪುಟ್ಟಣ್ಣ ಮತ್ತು ಕನ್ನಳ್ಳಿ ಭರತ್ ಅವರನ್ನು ಪಕ್ಷದಿಂದ ಅಮಾನತ್ತುಗೊಳಿದ್ದರಿಂದ ಬಿಜೆಪಿ ಎರಡು ಬಣಗಳಾಗಿದೆ. ಈ ಅಮಾನತ್ತು ವಾಪಾಸು ಪಡೆದುಕೊಳ್ಳದಿದ್ದರೆ ವಿಕೋಪಕ್ಕೆ ತಿರುಗುತ್ತದೆ. ಹಾಗಾಗಿ ಅಮಾನತ್ತು ವಾಪಾಸು ಪಡೆಯುವವರೆಗೆ ಬಿಜೆಪಿ ತಾಲೂಕು ಅಧ್ಯಕ್ಷರ ಪದಗ್ರಹಣ ಸೇರಿದಂತೆ ತಾಲೂಕಿನಲ್ಲಿ ಎಸ್ಸೀ ಮೋರ್ಚ, ಅಲ್ಪಸಂಖ್ಯಾತ, ಮಹಿಳಾ, ಯುವ ಮೋರ್ಚಾ ಸೇರಿದಂತೆ ಯಾವುದೇ ಹೋಬಳಿ ಅಧ್ಯಕ್ಷರ ಘೋಷಣೆ ಆಗಬಾರದೆಂದು ಎಂದರು.
ಹಿರಿಯ ಮುಖಂಡರೊಂದಿಗೆ ಕೇಳಿಕೊಂಡಾಗ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಇಂದು ನಡೆಯುವ ತಾಲೂಕು ಅಧ್ಯಕ್ಷರ ಪದಗ್ರಹಣ ರದ್ದಾಗಿದೆ. ಬಿಜೆಪಿ ಒಂದು ಕುಟುಂಬ ಇದ್ದ ಹಾಗೆ. ಯಾವುದೇ ಲೋಪ ದೋಷಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಪಕ್ಷ ಸಂಘಟನೆ ಹಾಗೂ ಸಂಸತ್ ಚುನಾವಣೆ ಎದುರಿಸಲು ಮುಂದಾಗೋಣ ಎಂದು ಕರೆ ನೀಡಿದರು.
ಪ.ಪಂ. ಸದಸ್ಯ ಪುಟ್ಟಣ್ಣ ಮಾತನಾಡಿ, ಪಕ್ಷದಲ್ಲಿರುವ ಕೆಲವರು ಗುತ್ತಿಗೆದಾರರಾಗಿ ಕಳಪೆ ಕಾಮಗಾರಿ ಮಾಡುವ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅವೆಲ್ಲಾ ಬಯಲಿಗೆ ಬರುತ್ತದೆ ಎಂಬ ಕಾರಣಕ್ಕೆ ಹಿರಿಯ ಮುಖಂಡರ ಮೂಲಕ ತನನ್ನು ಪಕ್ಷದಿಂದ ಅನಾನತ್ತುಪಡಿಸಿದ್ದಾರೆ. ಹಿಂದೆಯೂ ಕೂಡ ಪಕ್ಷಕ್ಕಾಗಿ ದುಡಿದ ಅನೇಕ ಮುಖಂಡರು ಇಂದು ತಟಸ್ಥವಾಗಿರುವುದಕ್ಕೆ ಕಾರಣ ಕೆಲ ಕಿಡಿಗೇಡಿ ಕಾರ್ಯಕರ್ತರಿಂದ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಇಂತಹ ಘಟನೆ ಪಕ್ಷದೊಳಗೆ ನಡೆಯಲು ಬಿಡಬಾರದು. ತಮ್ಮ ಅಮಾನತ್ತು ಹಿಂಪಡೆಯಬೇಕು. ಇಲ್ಲವಾದರೆ ಮುಂದಿನ ದಿನ ಪ್ರತ್ಯೇಕ ತಾಲೂಕು ಹಾಗೂ ಹೋಬಳಿ ಅಧ್ಯಕ್ಷರ ನೇಮಕಗೊಳಿಸಿ ಪಕ್ಷ ಸಂಘಟನೆ ಮಾಡುವ ಮೂಲ ಮುಂದಿನ ತಲೆಮಾರು ಸ್ಮರಿಸುವಂತಹ ಉತ್ತಮ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಎಲ್ಲರೂ ಶ್ರಮಿಸೋಣ ಎಂದು ಹೇಳಿದರು. ಮನವಿ ಮಾಡಿದರು.
ಭರತ್ ಬಾಳೂರು, ಭರತ್ ಕನ್ನಹಳ್ಳಿ, ರವೀಂದ್ರ ಊರುಬಗೆ, ವಿಜೇಂದ್ರ ಕುಂದೂರು, ಸಂಜಯ್ ಕೊಟ್ಟಿಗೆಹಾರ, ಹೆಮ್ಮಕ್ಕಿ ಗಿರೀಶ್, ಪ್ರಾನ್ಸಿಸ್, ದೇವರಾಜ್ ಸಬ್ಲಿ ಮತ್ತಿತರರಿದ್ದರು.
BJP Swabhimana Parivar workers convention