September 21, 2024

ಜ್ಞಾನದ ಬೆಳಕನ್ನು ಸಾರಿದ ಬುದ್ದನ ದಾರಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕು

0

ಚಿಕ್ಕಮಗಳೂರು: ಬುದ್ದ ಮಾನವೀಯತೆ ಮತ್ತು ಜ್ಞಾನದ ಬೆಳಕನ್ನು ಸಾರಿದ್ದಾರೆ. ಹೀಗಾಗಿ ಬುದ್ದನ ದಾರಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದು ಬಾಬಾಸಾಹೇಬ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.

ನಗರ ಹೊರವಲಯದ ಗವನಹಳ್ಳಿಯ ಸರಕಾರಿ ಜಾಗದಲ್ಲಿ ಬುದ್ದ ಅಧ್ಯಯನ ದಮ್ಮ ಕೇಂದ್ರ ಸ್ಥಾಪನೆಗೆ ಭಾನುವಾರ ಶಂಕುಸ್ಥಾಪನೆ ಹಾಗೂ ಬುದ್ದನ ವಿಗ್ರಹ ಅನಾರಣಗೊಳಿಸಿ ಅವರು ಮಾತನಾಡಿದರು.

ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಪ್ರತಿಯೊಬ್ಬರು ಬುದ್ದನ ಹಾದಿಯಲ್ಲಿ ನಡೆಯಬೇಕು ಎಂದಿದ್ದಾರೆ. ಆ ನಿಟ್ಟಿನಲ್ಲಿ ಈ ದೇಶ ಬುದ್ಧನ ನಾಡಾಗಬೇಕು. ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಈ ದಿನ ಇಲ್ಲಿ ಬುದ್ದನ ಪ್ರತಿಮೆಯನ್ನು ಸಾಂಕೇತಿಕವಾಗಿ ಸ್ಥಾಪನೆ ಮಾಡಿದ್ದೇವೆ ಎಂದು ಹೇಳಿದರು.

ಪ್ರಪಂಚದಾದ್ಯಂತ ತಡವಾಗಿಯಾದರೂ ಬುದ್ದನ ಅನುಯಾಯಿಗಳು ಹೆಚ್ಚಾಗಿ ಬೌದ್ಧ ಧರ್ಮವನ್ನು ಸ್ವೀಕರಿಸುವ ಕೆಲಸ ನಡೆಯುತ್ತಿದೆ. ಇತ್ತೀಚೆಗೆ ನಗರದ ಕುವೆಂಪು ಕಲಾಮಂದಿರದಲ್ಲಿಯೂ ಕೂಡ ಬುದ್ಧ ಧಮ್ಮ ದೀಕ್ಷಾ ಕಾರ್ಯಕ್ರಮ ನಡೆದಿತ್ತು. ಬೌದ್ಧಧಮ್ಮದ ಕಾರ್ಯಚಟುವಟಿಕೆಗಳನ್ನು ನಡೆಸಲು ನಮಗೆ ಬುದ್ಧ ಅಧ್ಯಯನ ಕೇಂದ್ರದ ಸ್ಥಾಪನೆ ಅಗತ್ಯತೆ ಇದೆ ಎಂದರು.

ಈ ನಿಟ್ಟಿನಲ್ಲಿ ಗವನಹಳ್ಳಿ ಸರ್ವೆ ನಂಬರ್ ೯೩ ರಲ್ಲಿ ೧೦ ಎಕರೆ ಜಾಗವನ್ನು ಕೇಳಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಕಂದಾಯ ಕಾರ್ಯದರ್ಶಿ, ಡಿಸಿ, ಎಸಿ ಗಮನಕ್ಕೆ ತಂದಿದ್ದೇವೆ. ನಮ್ಮ ಮನವಿಗೆ ಮನ್ನಣೆ ನೀಡಿ ಭೂಮಿ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ವಕೀಲ ಅನಿಲ್‌ಕುಮಾರ್ ಮಾತನಾಡಿ, ಬುದ್ದ ಅಧ್ಯಯನ ಮತ್ತು ಧಮ್ಮ ಕೇಂದ್ರವನ್ನು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಇಂದು ಸಾಂಕೇತಿಕವಾಗಿ ಬುದ್ದನ ಪ್ರತಿಮೆ ಪ್ರತಿಷ್ಠಾಪಿಸಿದ್ದೇವೆ ಎಂದರು. ಡಿಎಸ್‌ಎಸ್ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ ಸ್ಥಳೀಯ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ದಲಿತರ ಬಗ್ಗೆ ಅಸಮಾಧಾನ ಇದ್ದಂತಿದೆ ಎಂದು ತಿಳಿಸಿದರು.

ಅದನ್ನು ಬದಿಗಿಟ್ಟು ಇದೀಗ ನಾವೇ ಹುಡುಕಿ ಕೊಟ್ಟಿರುವ ಸರಕಾರಿ ಭೂಮಿಯನ್ನು ಬುದ್ದ ಧಮ್ಮ ಕೇಂದ್ರ ಸ್ಥಾಪನೆಗೆ ಮಂಜೂರು ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು. ಡಿಎಸ್‌ಎಸ್ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿವರೆಗೆ ಆಳಿದ ಯಾವೊಬ್ಬ ಜನಪ್ರತಿನಿಗಳು ಬುದ್ದ, ಬಸವ, ಅಂಬೇಡ್ಕರ್ ಭವನ, ಧರ್ಮ ಕೇಂದ್ರ ಸ್ಥಾಪಿಸವ ಕೆಲಸಕ್ಕೆ ಕೈಹಾಕಲಿಲ್ಲ. ಇನ್ನಾದರೂ ಜಾಗ ಮಂಜೂರುಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಬುದ್ದ ವಿಗ್ರಹ ಪ್ರತಿಷ್ಠಾಪನೆಯ ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಯಿತು.

ವಿವಿಧ ಪ್ರಗತಿಪರ ಸಂಘಟನೆಯ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಕೂದುವಳ್ಳಿ ಮಂಜು, ಹೊನ್ನೇಶ್, ವಸಂತಕುಮಾರ್, ಅನಂತ್ ಮತ್ತಿತರರು ಮಾತನಾಡಿದರು. ಎಂ.ಜಿ.ಲೋಕೇಶ್,ಪೂರ್ಣೇಶ್, ನಾಗೇಶ್, ಮರಿಯಪ್ಪ, ಸುರೇಶ್, ಬಸವರಾಜು ಮತ್ತಿತರರಿದ್ದರು. ಜಿಲ್ಲೆಯ ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Unveiling of the Buddha statue for the establishment of the Buddha Study Dhamma Center

 

About Author

Leave a Reply

Your email address will not be published. Required fields are marked *