September 19, 2024

ಶ್ರೀ ಗುರುನಿರ್ವಾಣಸ್ವಾಮಿ ಮಠದ ಬ್ರಹ್ಮರಥೋತ್ಸವ

0
ಶ್ರೀ ಗುರುನಿರ್ವಾಣಸ್ವಾಮಿ ಮಠದ ಬ್ರಹ್ಮರಥೋತ್ಸವ

ಶ್ರೀ ಗುರುನಿರ್ವಾಣಸ್ವಾಮಿ ಮಠದ ಬ್ರಹ್ಮರಥೋತ್ಸವ

ಚಿಕ್ಕಮಗಳೂರು: ಚಂದ್ರದ್ರೋಣಪರ್ವತ ತಪ್ಪಲಿನ ಹಸಿರುವನಸಿರಿಯ ನಡುವೆ ಶ್ರೀಗುರು ನಿರ್ವಾಣಸ್ವಾಮಿ ಮಠದ ಶ್ರೀ ಮಲ್ಲೇಶ್ವರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.

ನಗರದಿಂದ ೭ಕಿ.ಮೀ.ದೂರದ ಕೈಮರ ಸಮೀಪದ ಹೊಸಹಳ್ಳಿ ಶ್ರೀಗುರು ನಿರ್ವಾಣ ಸ್ವಾಮಿಗಳವರ ಮಠದಲ್ಲಿ ಶುಭಕೃತ್ ನಾಮಸಂತ್ಸರದ ಫಾಲ್ಗುಣ ಬಹುಳ ಸಪ್ತಮಿ ಸೋಮವಾರ ಪೂರ್ವಾಹ್ನ ಶ್ರೀಸ್ವಾಮಿಯ ಬ್ರಹ್ಮರಥೋತ್ಸವ, ರಾತ್ರಿ ಮಹಾರಥೋತ್ಸವ, ಇಂದು ಅಷ್ಟಮಿ ಮಂಗಳವಾರ ಘಳಿಗೆ ತೇರು ಸಾಂಪ್ರದಾಯಕವಾಗಿ ನೆರವೇರಿತು.

ಮಂಗಳವಾದ್ಯ, ದೀವಟಿಕೆಸೇವೆ, ಛತ್ರ್ರಿ ಚಾಮರಗಳ ಗೌರವದೊಂದಿಗೆ ಗರ್ಭಗುಡಿಯ ಶ್ರೀ ಮಲ್ಲೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ವಿಶೇಷಪೂಜಾದಿ ಅಭಿಷೇಕಗಳ ನಂತರ ಮಧ್ಯಾಹ್ನ ನೆಡಮುಡಿಯೊಂದಿಗೆ ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಿ ಸೋಮವಾರ ಪೂರ್ವಾಹ್ನ ಬ್ರಹ್ಮರಥೋತ್ಸವ ಭಕ್ತಾದಿಗಳ ಜಯಘೋಷದೊಂದಿಗೆ ಪ್ರಾರಂಭವಾಯಿತು. ಸ್ವಲ್ಪ ದೂರ ಕ್ರಮಿಸಿದ ನಂತರ ರಥದೊಳಗಿನ ಸ್ವಾಮಿಗೆ ಭಕ್ತಾದಿಗಳ ಹಣ್ಣುಕಾಯಿ ಸಮರ್ಪಣೆ ಸೇವೆ ನೆರವೇರಿತು.

ರಾತ್ರಿ ರಥವನ್ನು ಮಠದ ಒಂದುಸುತ್ತು ಭಕ್ತಿಪೂರ್ವಕವಾಗಿ ಎಳೆದುತಂದು ಸಂಪಿಗೆಕಟ್ಟೆಯ ಬಳಿ ನಿಲ್ಲಿಸಲಾಯಿತು. ಪೂಜೆಯ ನಂತರ ಮಠದ ಸುತ್ತಲಿನ ಐದೂರಿನ ಗ್ರಾಮಸ್ಥರು ವಿಶೇಷ ಉಪಮೆಗಳಂದಿಗೆ ಸ್ವಾಮಿಯ ಪವಾಡವನ್ನು ಕೊಂಡಾಡುತ್ತಾ ಕುಣಿದುಕುಪ್ಪಳಿಸಿದರು.

ಳ್ಳಿವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆಹಾಕಿ ಸುಗ್ಗಿಕುಣಿತದ ಹಾಡುಗಳೊಂದಿಗೆ ತಡರಾತ್ರಿಯವರೆಗೂ ಕುಣಿದು ಭಕ್ತಿಸೇವೆ ಸಮರ್ಪಿಸಿದರು. ಇಂದು ಬೆಳಗಿನಜಾವ ದೊಡ್ಡತೇರನ್ನು ಮಠದ ಸುತ್ತ ಸುತ್ತಿಸಿ ಉತ್ಸವಮೂರ್ತಿಯನ್ನು ಗರ್ಭಗುಡಿ ಒಳಗಿರಿಸಲಾಯಿತು. ರಾತ್ರಿಪೂರ್ತಿ ಜಾತ್ರಾಸಂಭ್ರಮಕ್ಕೆ ನಾಡಿನ ವಿವಿಧಡೆಯಿಂದ ಆಗಮಿಸಿದ ಭಕ್ತರು ಸಾಕ್ಷಿಯಾದರು.

ಇಂದು ಮಧ್ಯಾಹ್ನ ಶ್ರೀಸ್ವಾಮಿಯ ಉತ್ಸವಮೂರ್ತಿಗೆ ವಿಶೇಷಪೂಜೆ ಸಲ್ಲಿಸಿ ಕಾರ್‍ಯದರ್ಶಿ ಎನ್.ಎಂ.ಅಜಯ್ ನೇತೃತ್ವದಲ್ಲಿ ಘಳಿಗೆತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀಮತಿ ಉಮಾ ಹಾಗೂ ಅಶ್ವಿನಿ ನೇತೃತ್ವದಲ್ಲಿ ಸುಮಂಗಲಿಯರು ಸ್ವಾಮಿಗೆ ಆರತಿ ಮಾಡಿದರು. ಶ್ರೀಮಠದ ಧರ್ಮಕರ್ತ ಎನ್.ಮಹೇಶ್ ತೆಂಗಿನಕಾಯಿ ಒಡೆಯುವ ಮೂಲಕ ಘಳಿಗೆತೇರು ಉತ್ಸವಕ್ಕೆ ಚಾಲನೆ ನೀಡಲಾಯಿತು.

ಹೂ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಗೌರವದೊಂದಿಗೆ ಶ್ರೀಮಠದ ಹೊರ ಆವರಣದಲ್ಲಿ ಎರಡುಸುತ್ತು ಬಂದು ರಥೋತ್ಸವ ಪೂರ್ಣಗೊಳಿಸಲಾಯಿತು. ಶ್ರೀಸ್ವಾಮಿಗೆ ಮಂಗಳಾರತಿ ನೆರವೇರಿಸಿ ಗರ್ಭಗುಡಿಯೊಳಗೆ ಉತ್ಸವ ಮೂರ್ತಿಯನ್ನು ಇರಿಸಿ ವಿಶೇಷಪೂಜಾದಿಗಳ ನಂತರ ಭಕ್ತಾದಿಗಳಿಗೆ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ, ರಾಗಿರಬ್ಬಳ್ಳಿಗೆ, ಅನ್ನ ಸಂಬಾರ್, ಮೊಸರಿನ ಸಂತರ್ಪಣೆ ನಡೆಸಲಾಯಿತು. ಆ ನಂತರ ಶ್ರೀಗುರುನಿರ್ವಾಣಸ್ವಾಮಿ ಗದ್ದುಗೆಪೂಜೆ ನೆರವೇರಿಸಿ ದೂಳತ ಪ್ರಸಾದ ವಿತರಿಸಲಾಯಿತು.

ಹೊಸಹಳ್ಳಿ, ತೋಟದಹಳ್ಳಿ, ಹಿತ್ತಲಮಕ್ಕಿ, ಪುಟ್ಟೇನಹಳ್ಳಿ ಮತ್ತು ಮಾವಿನಹಳ್ಳಿ ಒಳಗೊಂಡ ಐದೂರಿನ ಗ್ರಾಮವಾಸಿಗಳು ಜಾತಿಮತ ಬೇಧವಿಲ್ಲದೆ ರಥೋತ್ಸವ ಕಾರ್‍ಯದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮರಸ್ಯದ ಸಂದೇಶ ಸಾರಲಾಯಿತು. ಶ್ರೀಗುರು ನಿರ್ವಾಣಸ್ವಾಮಿಗಳು ಕಲ್ಯಾಣಕ್ರಾಂತಿಯ ನಂತರ ಐವರು ಸಿದ್ಧರೊಂದಿಗೆ ಈ ಭಾಗಕ್ಕೆ ಬಂದು ಇಲ್ಲಿಯ ಗುಹೆಯಲ್ಲಿ ಜೀವಂತವಾಗಿದ್ದಾರೆಂಬ ನಂಬಿಕೆ ಭಕ್ತರದ್ದಾಗಿದೆ. ತೆಂಗಿನಕಾಯಿ ಒಡೆದು ನೈವೇದ್ಯ ಸಮರ್ಪಿಸುವ ಪದ್ಧತಿ ಇಲ್ಲಿಲ್ಲ. ಅದಕ್ಕಾಗಿಯೆ ಹಣ್ಣುಕಾಯಿಯನ್ನು ಗದ್ದುಗೆಯಲ್ಲಿ ಆಶೀರ್ವಾದದೊಂದಿಗೆ ಭಕ್ತರಿಗೆ ಕೊಡಲಾಗುತ್ತದೆ.

Brahmarathotsavam of Sri Gurunirvanaswamy Mutt

About Author

Leave a Reply

Your email address will not be published. Required fields are marked *

You may have missed