ಡಾ. ಬಿ.ಆರ್. ಅಂಬೇಡ್ಕರ್ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ
ಚಿಕ್ಕಮಗಳೂರು: ದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾನ್ ತಪಸ್ವಿಯಾಗಿದ್ದಾರೆ ಅವರೊಬ್ಬ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಇಂದು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳು ಪ್ರಸ್ತುತ ಮನುಕುಲದ ಉಳಿವಿಗೆ ಹಾಗೂ ದೇಶದ ಪ್ರಗತಿಗೆ ಆಧಾರ ಸ್ಥಂಭಗಳಾಗಿದೆ. ಅವರು ವಿಶ್ವದ ಮಹಾನ್ ಸಂಶೋಧಕರು, ದೇಶದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ ಸುಧಾರಣೆಗಳನ್ನು ಅವಿಷ್ಕರಿಸುವ ಮೂಲಕ ದೇಶದ ಭದ್ರತೆಗೆ ಸಂವಿಧಾನ ರಚಿಸಿದ್ದಾರೆ. ಅವರ ಮೌಲ್ಯಯುತ ಚಿಂತನೆ ಮತ್ತು ಸಾಧನೆಯನ್ನು ಯುವ ಜನಾಂಗ ಸ್ಮರಿಸಿಕೊಂಡು ಹೊಸತನದ ಸಮಾಜಕ್ಕೆ ಸ್ವತಂತ್ರ ಮನಸ್ಸಿನಿಂದ ತೆರೆದುಕೊಳ್ಳಬೇಕಿದೆ ಎಂದರು.
ಸಮಾನತೆಯ ಸಂದೇಶ ಸಾರಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಅಧ್ಯಯನದ ಶಿಸ್ತು, ಕಾರ್ಯಬದ್ಧತೆ ಮತ್ತು ಕರ್ತವ್ಯ ಪ್ರಜ್ಞೆಯ ಮೂಲಕ ಇಡೀ ಜಗತ್ತನ್ನೇ ಬೆಳಗಿದರು. ಸಮಾಜದ ಎಲ್ಲಾ ವರ್ಗಗಳ ಬದಲಾವಣೆಗೆ ಬೆಳಕು ತೋರಿದರು. ಅವರು ಕೌಟುಂಬಿಕ ಬದುಕಿಗೆ ಆದ್ಯತೆ ನೀಡದೆ ಶೋಷಿತ ಹಾಗೂ ದುರ್ಬಲರ ಪರವಾಗಿ ದಿಟ್ಟತನದಿಂದ ಹೋರಾಡಿದ ಮಹಾನ್ ಚೇತನ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಬಿ. ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವ ಮತ್ತು ಜ್ಞಾನವನ್ನು ಇಡೀ ಜಗತ್ತು ಸ್ಮರಿಸಿ ಗೌರವಿಸುತ್ತಿದೆ. ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕ ಚಿಂತನೆಗಳ ಮೂಲಕ ಸರಳೀಕರಿಸಿ ಸುಧಾರಣೆ ಮಾಡಿದ ಮೇಧಾವಿ ಎನಿಸಿಕೊಂಡಿದ್ದಾರೆ. ಅವರ ಮಾನವೀಯತೆ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದೆ. ಯುವ ಜನಾಂಗ ಅವರ ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮ್ಟೆ ಮಾತನಾಡಿ ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ, ಸಾಧನೆ, ವ್ಯಕ್ತಿತ್ವ ಎಲ್ಲರಿಗೂ ದಾರಿದೀಪವಾಗಿದೆ. ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನದಿಂದ ವಿಶ್ವದಲ್ಲಿಯೇ ಭಾರತ ಮಾದರಿ ಪ್ರಜಾಪ್ರಭುತ್ವ ರಾಷ್ಟವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
Dr. B.R. Ambedkar was a multi-faceted cosmologist