ಅನುಮಾಸ್ಪದವಾಗಿ ೩೫ ವರ್ಷದ ಕಾಡಾನೆ ಸಾವು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅನುಮಾಸ್ಪದವಾಗಿ ೩೫ ವರ್ಷದ ಕಾಡಾನೆ ಸಾವಪ್ಪಿದ್ದು, ಪರಿಸರ ಆಸಕ್ತರು ತನಿಖೆಗೆ ಒತ್ತಾಯಿಸಿದ್ದಾರೆ.
ಆಲ್ದೂರು ಸಮೀಪದ ಕೆರೆಹಕ್ಲು ಗ್ರಾಮದಲ್ಲಿ ಘಟನೆ ನಡೆದಿದೆ.ವಿದ್ಯುತ್ ಶಾಕ್ ನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಕಾಫಿ ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿ ತಗುಲಿ ಸಾವಪ್ಪಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ವಾರದ ಹಿಂದೆ ಈ ಭಾಗದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕರೊಬ್ಬರು ಬಲಿಯಾಗಿದ್ದರು. ಒಂಟಿ ಸಲಗವನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಮತ್ತು ಸಾರ್ವಜನಿಕರಿಂದ ಒತ್ತಡ ಬಂದಿದ್ದರಿಂದ ಅರಣ್ಯ ಇಲಾಖೆ ಆನೆ ಸೆರೆಗೆ ಕ್ರಮ ಕೈಗೊಂಡಿತ್ತು.
ಆಲ್ದೂರು ಸಮೀಪದ ಕಂಚಿನಕಲ್ಲು ದುರ್ಗ ಸಮೀಪದ ಖಾಸಗಿ ಕಾಫಿ ತೋಟದಲ್ಲಿ ಒಂಟಿ ಸಲಗವನ್ನು ವಿದ್ಯುತ್ ಹರಿಸಿ ಕೊಲ್ಲಲಾಗಿದೆ.ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತಯಾರಿ ನಡೆಸಿತ್ತು. ಇತ್ತೀಚೆಗೆ ಮೂಡಿಗೆರೆ,ಆಲ್ದೂರು ಸುತ್ತಮುತ್ತಲಲ್ಲಿ ಆನೆ ಮಾನವ ಸಂಘರ್ಷ ತಾರಕಕ್ಕೇರುತ್ತಿದೆ.
ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮತ್ತು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಸಮಗ್ರ ತನಿಖೆ ನಡೆಸಿ ಪ್ರಕರಣ ದಾಖಲುಮಾಡಬೇಕೆಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಮತ್ತು ಮಾನವ ಸಂಘರ್ಷ ಉಂಟಾಗುತ್ತಿದೆ. ಕಳೆದ ೫ ವರ್ಷದಲ್ಲಿ ಕಾಡಾನೆಗಳು ೧೩ ಮಂದಿಯನ್ನು ಬಲಿ ಪಡೆದುಕೊಂಡಿವೆ. ಸುನಿಲ್, ಕುಮಾರನಾಯ್ಕ, ಪ್ರೇಮನಾಥ, ಜಯಮ್ಮ,ಮಲ್ಲಯ್ಯ, ಪುಟ್ಟರಾಜು, ಸರೋಜಬಾಯಿ, ಆನಂದದೇವಾಡಿಗ, ಅರ್ಜುನ್, ಶೋಭಾ, ಕಿನ್ನಿ,ಮೀನಾ, ಕಾರ್ತಿಕ್ಗೌಡ ಸಾವಪ್ಪಿದವರು.
ಆಲ್ದೂರು ಸುತ್ತಮುತ್ತ ತಿರುಗಾಡುತ್ತಿದ್ದ ಈ ಆನೆಯನ್ನು ಪ್ರೇಮದ ಬಲೆಗೆ ಬೀಳಿಸಿ ಸೆರೆಹಿಡಿಯಲು ಹೆಣ್ಣಾನೆಯನ್ನು ಕರೆಸಲಾಗಿತ್ತು. ಇದರ ಸಮೀಪ ಬರುತ್ತಿದ್ದ ಒಂಟಿ ಸಲಹ ತನ್ನನ್ನು ಖೆಡ್ಡಾಕ್ಕೆ ಕೆಡವಬಹುದೆನ್ನುವುದನ್ನು ಅರಿತು ಕಂಚಿನಕಲ್ ದುರ್ಗ ಅರಣ್ಯಕ್ಕೆ ತೆರಳಿತ್ತು. ಮತ್ತೆ ಆಲ್ದೂರು ಸುತ್ತಮುತ್ತಲಲ್ಲಿ ಸುಳಿದಾಡಿರಲಿಲ್ಲ.
ಕೆಲವು ದಿನಗಳ ಹಿಂದೆ ದೊಡ್ಡಮಾಗರವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಂಚಿನಕಲ್ದುರ್ಗ ಸಮೀಪದ ಕೆಸವಿನಕಲ್ ತೋಟದಲ್ಲಿ ಕೆಲಸ ನಿರ್ವಹಿಸಲು ತೆರಳುತ್ತಿದ್ದ ಕಾರ್ಮಿಕ ಆನಂದ ಪೂಜಾರಿಯ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿತ್ತು. ಈ ಆನೆಯ ಸೆರೆಗೆ ಒತ್ತಡಗಳು ಕೇಳಿಬಂದಿದ್ದವು. ಇನ್ನೇನು ಒಂಟಿ ಸಲಗ ಸೆರೆಹಿಡಿಯಲು ಅರಣ್ಯ ಇಲಾಖೆ ತಯಾರಿ ನಡೆಸುತ್ತಿರುವಾಗಲೇ ಅನುಮಾನಾಸ್ಪದವಾಗಿ ಸಾವಪ್ಪಿದೆ.
35-year-old Kadane dies suspiciously