ಸಿನಿಮಾದಲ್ಲಿ ಹೀರೋಗಳಾದವರು ನಿಜ ಜೀವನದಲ್ಲಿ ಹೀರೋಗಳಾಗಿರುವುದಿಲ್ಲ
ಚಿಕ್ಕಮಗಳೂರು: ಸಿನಿಮಾದಲ್ಲಿ ಹೀರೋಗಳಾದವರು ನಿಜ ಜೀವನದಲ್ಲಿ ಹೀರೋಗಳಾಗಿರುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ದರ್ಶನ್ ಪ್ರಕರಣ ನೋಡಿದಾಗ ಅವರು ಸಿನಿಮಾದಲ್ಲಿ ಮಾತ್ರವೇ ಹೀರೋ ಆಗಿದ್ದರು ಎನಿಸುತ್ತದೆ. ದರ್ಶನ್ಗೆ ಇಷ್ಟೊಂದು ಕ್ರೂರ ಮನಸ್ಥಿತಿ ಇದೆ ಎಂದು ಯಾರೂ ಭಾವಿಸಿರಲಿಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಹತ್ಯೆಗೊಳಗಾದ ರೇಣುಕಾ ಸ್ವಾಮಿ ಅವರ ಕುಟುಂಬದ ಜೊತೆಗಿದೆ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ದರ್ಶನ್ ಪ್ರಕರಣ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹದ್ದಾಗಿದೆ. ಯಾರಿಗೂ ಕಾನೂನು ಕೈಗೆತ್ತಿಕೊಂಡು ಕ್ರೌರ್ಯ ಮಾಡುವ ಅಧಿಕಾರವಿಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಈ ಬಗ್ಗೆ ಹೆಚ್ಚು ಬದ್ಧತೆ ಇರಬೇಕು. ಇಂಥ ಕ್ರೌರ್ಯವನ್ನು ಯಾರೂ ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ರಾಜಕಾರಣಿಗಳ ಮೇಲಿನ ಟೀಕೆಗೆ ಕೊಲೆ ಮಾಡುವುದಾಗಿದ್ದರೆ ಗಂಟೆಗೊಂದು ಹೆಣ ಬೀಳುತ್ತಿತ್ತು. ಆದರೆ ದರ್ಶನ್ ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು. ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ಕ್ರೌರ್ಯವನ್ನು ಯಾರು ಒಪ್ಪಲು ಸಾಧ್ಯವಿಲ್ಲ ಎಂದರು.
ದರ್ಶನ್ ಗೆ ರಾಜ ಮರ್ಯಾದೆ ವಿಶೇಷ ಸವಲತ್ತು ಕೊಡುತ್ತಿದ್ದಾರೆ ಎನ್ನುವ ಸಂದೇಶ ಒಳ್ಳೆಯದಲ್ಲ. ಒಂದು ವೇಳೆ ಇದೇ ರೀತಿ ಆಗಿದ್ದರೆ ಬಲ ಇದ್ದವನಿಗೆ ಒಂದು ಬಡವನಿಗೆ ಒಂದು ನ್ಯಾಯ ಎಂಬ ಸಂದೇಶ ಹೋಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Heroes in movies are not heroes in real life