ಕಾಫಿ ನಾಡಿನಾದ್ಯಂತ ಮುಸ್ಲಿಂ ಸಮುದಾಯದಿಂದ ಬಕ್ರೀದ್ ಆಚರಣೆ
ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸೇರಿದಂತೆ ಕಾಫಿ ನಾಡಿನಾದ್ಯಂತ ಸೋಮವಾರ ಬಕ್ರೀದ್ ಆಚರಣೆ ನಡೆಯಿತು. ಮುಸ್ಲಿಂ ಸಮುದಾಯದವರು, ಮಸೀದಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯವನ್ನು ವಿನಿಯಮ ಮಾಡಿಕೊಂಡರು.
ಚಿಕ್ಕಮಗಳೂರು ನಗರದ ಎಂ.ಜಿ. ರಸ್ತೆಯಲ್ಲಿರುವ ತಾಜಾರಿನ್, ಸಂಗೀನಾ, ನೆಹರು ನಗರದ ಬದ್ರಿಯಾ, ಉಪ್ಪಳ್ಳಿಯ ಶಾದ್ರುಲಿ, ಕಲ್ಲುದೊಡ್ಡಿಯ ಅಮ್ಜದ್ ಖಾರಾರ್ ಹಾಗೂ ಆದಿಶಕ್ತಿ ನಗರದ ಮಸೀದಿಗಳಲ್ಲಿ ಬ್ಯಾರಿ ಸಮುದಾಯದವರು ಬೆಳಿಗ್ಗೆ ೮ ಗಂಟೆಯ ವೇಳೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಬೆಳಿಗ್ಗೆ ೧೦ ಯ ವೇಳೆಗೆ ಮುಸ್ಲಿಂ ಸಮುದಾಯದವರು ಚಿಕ್ಕಮಗಳೂರಿನ ವಿಜಯಪುರ ಹಾಗೂ ಕೆಂಪನಹಳ್ಳಿಯ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕೆಂಪನಹಳ್ಳಿಯ ಈದ್ಗಾ ಮೈದಾನಕ್ಕೆ ಸಾಮೂಹಿಕ ಪ್ರಾರ್ಥನೆ ವೇಳೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಅವರು ಭೇಟಿ ನೀಡಿ ಮಾತನಾಡಿ, ಬಕ್ರೀದ್ ಹಬ್ಬದ ಶುಭಾಶಯ ಸಲ್ಲಿಸಿದರು.
ಎಲ್ಲರೂ ಕೂಡ ಜಾತಿ, ಧರ್ಮವನ್ನು ಬದಿಗಿಟ್ಟಿ ಸೌಹಾರ್ದತೆಯಿಂದ ಬಾಳಬೇಕು. ಇದು, ಸಂವಿಧಾನದ ಆಶಯವಾಗಿದೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಮದಶೀರ್, ವಕ್ಫ್ ಬೋರ್ಡ್ ಚೇರ್ಮನ್ ಶಾಹೀದ್ ರಜ್ವಿ ಹಾಗೂ ಧರ್ಮಗುರುಗಳು ಹಾಜರಿದ್ದರು.
Bakrid celebration by Muslim community across coffee country