September 8, 2024

ಕೋಡಿಬಿದ್ದ ಹಿರೇಕೊಳಲೆ ಕೆರೆಗೆ ನಗರಸಭೆ ವತಿಯಿಂದ ಬಾಗಿನ ಅರ್ಪಣೆ

0
ಕೋಡಿ ಬಿದ್ದ ಹಿರೇಕೊಳಲೆ ಕೆರೆಗೆ ನಗರಸಭೆ ವತಿಯಿಂದ ಬಾಗಿನ ಅರ್ಪಣೆ

ಕೋಡಿ ಬಿದ್ದ ಹಿರೇಕೊಳಲೆ ಕೆರೆಗೆ ನಗರಸಭೆ ವತಿಯಿಂದ ಬಾಗಿನ ಅರ್ಪಣೆ

ಚಿಕ್ಕಮಗಳೂರು: ನಗರದ ಏಳೆಂಟು ವಾರ್ಡ್‌ಗಳಿಗೆ ಕುಡಿಯುವ ನೀರೊದಗಿಸುವ ಹಿರೇಕೊಳಲೆ ಕೆರೆ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಭಾನುವಾರ ನಗರಸಭೆ ವತಿಯಿಂದ ಬಾಗಿನ ಅರ್ಪಿಸಲಾಯಿತು.

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಸೇರಿದಂತೆ ಇತರರು ಗಂಗಾ ಪೂಜೆ ನೆರವೇರಿಸಿ ಒಟ್ಟಿಗೆ ಬಾಗಿನ ಅರ್ಪಿಸಿದರು.

ಈ ವೇಳೆ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕಳೆದ ವರ್ಷ ಬರಗಾಲ ಇದ್ದರೂ ಹಿರೇಕೊಳಲೆ ಮತ್ತು ಅಯ್ಯನ ಕೆರೆ ಕೋಡಿ ಬಿದ್ದಿದ್ದವು. ಭೂಮಿ, ನೀರನ್ನು ಮಾತೆಯರಿಗೆ ಹೋಲಿಸುವ ಪದ್ಧತಿ ಇದ್ದರೆ ಭಾರತದಲ್ಲಿ ಮಾತ್ರ. ಸಧ್ಯದಲ್ಲೇ ಯಗಚಿ ಜಲಾಶಯ ಕೋಡಿ ಬೀಳಲಿದೆ. ಹಿರೇಕೊಳಲೆಯಲ್ಲಿ ಇನ್ನೂ ಹೆಚ್ಚು ನೀರು ಸಂಗ್ರಹಿಸುವ ಕೆಲಸ ಮಾಡುತ್ತೇವೆ. ೫೦ ಲಕ್ಷ ರೂ. ವೆಚ್ಚದಲ್ಲಿ ಕೆರೆ ಏರಿ ಕಾಮಗಾರಿ ನಡೆಯುತ್ತಿದೆ. ಇನ್ನೂ ೭೫ ಲಕ್ಷ ರೂ. ಮೊನ್ನೆಯಷ್ಟೆ ಬಿಡುಗಡೆ ಆಗಿದೆ ಎಂದರು.

ನಮ್ಮ ಜಿಲ್ಲೆಯನ್ನು ಅತೀ ಹೆಚ್ಚು ಮಳೆ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಮುಂದಿನ ದಿನಗಳಲ್ಲಿ ಒಳ್ಳೆ, ಮಳೆ, ಬೆಳೆ ಕೊಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪಂಚಭೂತಗಳಿಂದಲೇ ಜಗತ್ತು ಸೃಷ್ಠಿಯಾಗಿದೆ. ಅದನ್ನು ಕೃತಜ್ಞತೆಯಿಂದ ನೆನಪಿಸಿಕೊಂಡು ಬದುಕುವುದು ಸನಾತನ ಸಂಸ್ಕೃತಿಯ ಒಂದು ಭಾಗ. ಅದರ ಅಂಗವಾಗಿ ಗಂಗೆಗೆ ಇಂದು ಬಾಗಿನ ಅರ್ಪಿಸಿ ಎಲ್ಲವೂ ನಿನ್ನಿಂದಲೇ ಬಂದಿರುವುದು ಎನ್ನುವ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದೇವೆ. ಈ ವರ್ಷವೂ ಕೆರೆ ಭರ್ತಿ ಆಗಿದೆ. ಪ್ರತಿ ವರ್ಷವೂ ಸುಖ ಸಂವೃದ್ಧಿ ನೆಲೆಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಹಿಂದೆ ಹಿರೇಕೊಳಲೆ ಕೆರೆಯಿಂದ ನೈಸರ್ಗಿಕವಾಗಿ ಇಡೀ ನಗರಕ್ಕೆ ನೀರು ಪೂರೈಸಲಾಗುತ್ತಿತ್ತು. ಈ ಕೆರೆಯನ್ನು ಸಂರಕ್ಷಿಸಬೇಕು. ಒತ್ತುವರಿ ತೆರವುಗೊಳಿಸಬೇಕು. ಹೂಳು ತೆಗೆದರೆ ಇಂದಿಗೂ ಅರ್ಧ ನಗರಕ್ಕೆ ನೀರು ಕೊಡಲು ಸಾಧ್ಯವಿದೆ. ಕೆರೆಗಳ ನಿರ್ವಹಣೆ ವಿಚಾರದಲ್ಲಿ ಸರ್ಕಾರವೂ ಕಾಳಜಿ ವಹಿಸಬೇಕಿದೆ ಎಂದರು.

ಪ್ರಾಕೃತಿಕವಾಗಿ ಒಂದೇವಾರದಲ್ಲಿ ಇಡೀ ರಾಜ್ಯದ ಎಲ್ಲಾ ಜಲಾಶಯ, ಕೆರೆಗಳಿಗೆ ನೀರು ಹರಿದು ಬಂದೇ ವಾರದಲ್ಲಿ ಚಿತ್ರಣ ಬದಲಾಗಿದೆ. ಇದೆಲ್ಲ ಭಗವಂತನ ಕೃಪೆ, ಪರಿಸರವನ್ನು ನಾವು ಸದಾ ಕಾಪಾಡಿಕೊಳ್ಳಬೇಕು. ಪ್ರಾಣಿ, ಪಕ್ಷಿ, ಪರಿಸರವನ್ನು ಸಂರಕ್ಷಿಸಿ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮದ್ ಸಯ್ಯದ್ ಮತ್ತು ಸದಸ್ಯರು, ಆಶ್ರಯ ಸಮಿತಿ ಸದಸ್ಯರುಗಳು, ನಗರಸಭೆ ಸದಸ್ಯರುಗಳು, ಹಿರೇಕೊಳಲೆ ಗ್ರಾ.ಪಂ.ಅಧ್ಯಕ್ಷರು ಇತರರು ಈ ಸಂದರ್ಭದಲ್ಲಿ ಇದ್ದರು

Kodibidda Hirekolale lake is offered by the city council

About Author

Leave a Reply

Your email address will not be published. Required fields are marked *

You may have missed