ನೋಡುಗರ ಗಮನ ಸಳೆದ ‘ಮಹಾಶಕ್ತಿ ವೀರಭದ್ರ’ ಯಕ್ಷಗಾನ
ಚಿಕ್ಕಮಗಳೂರು: : ಜಿಲ್ಲಾ ಮೊಗವೀರ ಮಹಾಜನ ಸಂಘದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಕುಂದಾಪುರದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ಭಾನುವಾರ ನಡೆದ ‘ಮಹಾಶಕ್ತಿ ವೀರಭದ್ರ’ ಯಕ್ಷಗಾನ ನೋಡುಗರ ಗಮನ ಸೆಳೆಯಿತು.
ಕರಾವಳಿಯ ಎಂಟು ಪ್ರಸಿದ್ಧ ವಿವಿಧ ಮೇಳಗಳ ಕಲಾವಿದರು ಪ್ರಸಂಗದಲ್ಲಿ ಅಭಿನಯಿಸಿ ಗಂಡು ಕಲೆಯ ರಸದೌತಣವನ್ನು ಪ್ರೇಕ್ಷಕರಿಗೆ ಉಣಪಡಿಸಿದರು.
ಭಾಗವತರ ಕಂಚಿನ ಕಂಠದ ಗಾಯನ, ಅಬ್ಬರದ ಹಿಮ್ಮೇಳ, ಕಲಾವಿದರ ಪ್ರಾಸ ಬದ್ಧ ಚುರುಕು ಸಂಭಾಷಣೆ, ನವಿರು ಹಾಸ್ಯ, ಮಿಂಚಿನ ನೃತ್ಯ, ಅದ್ಭುತ ಅಭಿನಯ ಪ್ರೇಕ್ಷಕರನ್ನು ನಾಲ್ಕು ಗಂಟೆಗೂ ಅಧಿಕ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ಶಿವನ ಜಟೆಯಿಂದ ಜನಿಸಿದ ವೀರಭದ್ರ ಈಶ್ವರನ ಪತ್ನಿ ದಾಕ್ಷಾಯಣಿಗೆ ಅವಮಾನ ಮಾಡಿ ಆಕೆಯ ಸಾವಿಗೆ ಕಾರಣನಾದ ದಕ್ಷನನ್ನು ಸಂಹರಿಸಿದ ನಂತರ ಈಶ್ವರನ ಆಜ್ಞೆಯಂತೆ ಭೂಲೋಕಕ್ಕೆ ತೆರಳಿ ಲೋಕಕಂಟಕರಾಗಿದ್ದ ಅಸುರರನ್ನು ಸಂಹರಿಸಿ ಮಹಾಶಕ್ತಿ ವೀರಭದ್ರನೆನಿಸಿಕೊಂಡ ಪ್ರಸಂಗವನ್ನು ಪಾತ್ರಧಾರಿಗಳು ಸಮರ್ಥವಾಗಿ ತೆರೆದಿಟ್ಟರು.
ವಿಧಾನ ಪರಿಷತ್ ಸದಸ್ಯ ಡಾ,ಸಿ, ಟಿ, ರವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಜಗತ್ತಿನಲ್ಲೇ ಅತ್ಯಂತ ಸಮೃದ್ಧವಾದ ಕಲೆ ಯಕ್ಷಗಾನ, ಅದಕ್ಕೆ ನಿರ್ದೇಶಕರಿಲ್ಲ, ಅತ್ಯಂತ ಸೊಗಸಾದ ವೇಷ ಭೂಷಣವಿದೆ, ಗಾಯನವಿದೆ, ಯಕ್ಷಗಾನದಲ್ಲಿ ಎಲ್ಲವೂ ಇದೆ, ಇಡೀ ಪ್ರಪಂಚದಲ್ಲಿ ಯಾವ ಕಲೆಗಳಿವೆಯೋ ಅವುಗಳ ಸಾರವೆಲ್ಲಾ ನೋಡಲು ಸಿಗುವುದು ಯಕ್ಷಗಾನದಲ್ಲಿ ಮಾತ್ರ ಎಂದರು.
ಯಕ್ಷಗಾನದಲ್ಲಿರುವ ಕಲೆಗಳನ್ನು ಬೇರೆ ಯಾವುದೇ ಕಲೆಗಳಲ್ಲೂ ನೋಡಲು ಸಾಧ್ಯವಿಲ್ಲ ಎಂದ ಅವರು ಮೊಗವೀರ ಮಹಾಜನ ಸಂಘ ಪ್ರತಿ ವರ್ಷ ಯಕ್ಷಗಾನವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ, ಸಿ,ಟಿ, ರವಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಮೊಗವೀರ ಸಮುದಾಯದ ಹಿರಿಯ ರಾಮಚಂದ್ರ ಕುಂದರ್, ಯಕ್ಷಗಾನ ಕಲಾವಿದ ನಡೂರು ದಿನಕರ ಕುಂದರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಬಿ, ನಾರಾಯಣ್, ಗೌರವಾಧ್ಯಕ್ಷರಾದ ಕೆ, ರಾಮಣ್ಣ, ಡಿ,ಎಲ್, ಶಂಕರ್ ನಾಥ್, ಉಪಾಧ್ಯಕ್ಷರಾದ ಎನ್, ಸುರೇಶ್, ಎಸ್, ನಾರಾಯಣ್, ಪ್ರಧಾನ ಕಾರ್ಯದರ್ಶಿ ಗಣೇಶ್ ಮೊಗವೀರ, ಸಹ ಕಾರ್ಯದರ್ಶಿ ಕೆ,ಎಚ್, ಆನಂದ್, ಎಸ್, ಬಾಬು, ಖಜಾಂಚಿ ಕೆ,ಪಿ, ಸುನಿಲ್ ಕುಮಾರ್, ಕೆ, ಶ್ರೀನಿವಾಸ್ ಉಪಸ್ಥಿತರಿದ್ದರು
The ‘Mahashakti Veerbhadra’ Yakshagana attracted the attention of the viewers