September 21, 2024

ಡಿಸಿಸಿ ಬ್ಯಾಂಕ್‌ನಿಂದ 983 ಕೋಟಿ ರೂ ಕೆಸಿಸಿ ಸಾಲ ನೀಡಲು ಗುರಿ

0
ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆದ ಸರ್ವ ಸದಸ್ಯರ ಸಭೆ

ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆದ ಸರ್ವ ಸದಸ್ಯರ ಸಭೆ

ಚಿಕ್ಕಮಗಳೂರು:  ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಮುಂದಿನ ವರ್ಷಾಂತ್ಯದೊಳಗೆ ೯೮೩ ಕೋಟಿ ರೂ ಕೆಸಿಸಿ ಸಾಲ ನೀಡಲು ಗುರಿ ಹೊಂದಲಾಗಿದ್ದು, ೪೭೭೬ ಜನರಿಗೆ ೩೦ ಕೋಟಿ ರೂ ಹೊಸ ಸಾಲ ನೀಡಲು ಉದ್ದೇಶಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಿ.ಎಸ್ ಸುರೇಶ್ ತಿಳಿಸಿದರು.

ಅವರು ಇಂದು ಇಲ್ಲಿನ ಡಿಸಿಸಿ ಬ್ಯಾಂಕ್ ಆವರಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ತಮ್ಮೆಲ್ಲರ ಸಹಕಾರದೊಂದಿಗೆ ೨೦೨೪-೨೫ನೇ ಸಾಲಿನ ಅಂತ್ಯಕ್ಕೆ ಪ್ರಸ್ತುತ ೧೨೮೧ ಕೋಟಿ ರೂ ಠೇವಣಿ ಇದ್ದು, ಇದನ್ನು ೧೪೦೦ ಕೋಟಿ ರೂ ಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.೩ರ ಬಡ್ಡಿ ದರದಲ್ಲಿ ೨೯ ಕೋಟಿ ಮಧ್ಯಮಾವಧಿ ಸಾಲ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಪ್ರಸ್ತುತ ಇರುವ ನಿವ್ವಳ ಲಾಭವನ್ನು ೮ ಕೋಟಿ ರೂಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಫ್ಯಾಕ್ಸ್ ಎಂಎಸ್‌ಸಿ ಯೋಜನೆಯಡಿ ೩೨ ಕೋಟಿ ರೂ ಸಾಲ ಮಂಜೂರು ಮಾಡಲಾಗಿದೆ. ಇನ್ನು ಹೊಸ ಹೊಸ ಸಂಘಗಳಿಗೆ ಸ್ವಂತ ಗೋದಾಮು ನಿರ್ಮಿಸಿಕೊಳ್ಳಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಆರ್‌ಬಿಐ ಗೃಹ ಸಾಲದ ವೈಯಕ್ತಿಕ ಮಿತಿಯನ್ನು ೨೦ ಲಕ್ಷ ರೂಗಳಿಂದ ೫೦ ಲಕ್ಷಗಳವರೆಗೆ ಏರಿಸಿದ್ದು, ಮುಂದಿನ ಸಾಲಿಗೆ ೩೫೦ ಕೋಟಿ ರೂ ಕೃಷಿಯೇತರ ಸಾಲವನ್ನು ವಿವಿಧ ಯೋಜನೆಗಳ ಮೂಲಕ ವಿತರಿಸಲು ಗುರಿ ಹೊಂದಲಾಗಿದೆ. ಪ್ರಸ್ತುತ ಸಾಲಿನಲ್ಲಿ ಬ್ಯಾಂಕಿನ ವಾರ್ಷಿಕ ವಹಿವಾಟು ೨ ಸಾವಿರ ಕೋಟಿ ರೂ ಮೀರಿದೆ ಎಂದು ಹೇಳಿದರು.

ಪ್ರಸಕ್ತ ಆರ್ಥಿಕ ವರ್ಷದ ಮಾರ್ಚ್ ೩೧ ಕ್ಕೆ ೬೪೯೯ ಕೋಟಿ ರೂ ಷೇರು ಬಂಡವಾಳ ಸಂಗ್ರಹಿಸಿದ್ದು, ಬ್ಯಾಂಕ್ ದಿನೇ ದಿನೆ ಅಭಿವೃದ್ಧಿ ಪಥದಲ್ಲಿ ಸಾಗಲು ಕಾರಣರಾದ ಮತ್ತು ಸಂಪೂರ್ಣ ಸಹಕಾರ ನೀಡಿದ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಸದಸ್ಯರಿಗೆ, ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಬ್ಯಾಂಕ್ ತನ್ನದೇ ಆದ ಸುಸಜ್ಜಿತ ಕಟ್ಟಡ ಹೊಂದಿದ್ದು, ಸದ್ಯದಲ್ಲೇ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ. ಗ್ರಾಹಕರುಗಳಿಗೆ ಬ್ಯಾಂಕ್ ಕೊಡುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಶಾಖೆಗಳಲ್ಲಿ ದೂರದರ್ಶನಗಳನ್ನು ಅಳವಡಿಸಿ, ಗ್ರಾಹಕರನ್ನು ಜಾಗೃತಗೊಳಸಲಾಗುತ್ತಿದೆ ಎಂದರು.

ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ಸಹಕಾರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರೆಲ್ಲರೂ ಒಂದು ಕುಟುಂಬದವರಂತೆ ಡಿಸಿಸಿ ಬ್ಯಾಂಕ್ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಬ್ಯಾಂಕಿನಲ್ಲಿ ಠೇವಣಿ ಇಡುವವರ ಸಂಖ್ಯೆ ಬಹಳ ಇಳಿಮುಖವಾಗಿದ್ದು, ಗ್ರಾಹಕರು ಸಾಲ ಕೇಳಲು ಡಿಸಿಸಿ ಬ್ಯಾಂಕಿಗೆ ಬರುತ್ತಿದ್ದಾರೆ, ಠೇವಣಿ ಇಡದೆ ಸಾಲ ಕೇಳಿದರೆ ಬ್ಯಾಂಕಿನ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಹಕಾರ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಗ್ರಾಹಕರು ಹೆಚ್ಚು ಹಣ ತೊಡಗಿಸುವುದನ್ನು ರೂಢಿಸಿಕೊಳ್ಳಬೇಕು, ಪ್ರಸ್ತುತ ಕೃಷಿಯೇತರ ಚಟುವಟಿಕೆಗಳಿಗೆ ಸಾಲ ಸೌಲಭ್ಯ ನೀಡುವುದು ಅಗತ್ಯವಾಗಿದೆ ಎಂದರು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಕೆ.ಆರ್ ಆನಂದಪ್ಪ, ಟಿ.ಎಲ್ ರಮೇಶ್, ಹೆಚ್.ಬಿ ಶಿವಣ್ಣ, ರಾಮಪ್ಪ, ರಾಮಸ್ವಾಮಿ, ಸಂದೀಪ್ ಕುಮಾರ್, ಎಂ.ಎಸ್ ನಿರಂಜನ್, ಸತೀಶ್, ಪರಮೇಶ್ವರಪ್ಪ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಜಗದೀಶ್, ಸಹಕಾರ ಸಂಘಗಳ ಉಪ ನಿಬಂಧಕರಾದ ತೇಜಸ್ವಿನಿ ಉಪಸ್ಥಿತರಿದ್ದರು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಮ್ಮಪ್ಪ ಸಭೆಗೆ ಅಗತ್ಯ ಮಾಹಿತಿ ನೀಡಿದರು, ಮೊದಲಿಗೆ ಉಪಾಧ್ಯಕ್ಷ ಡಿ.ಸಿ ಶಂಕರಪ್ಪ ಸ್ವಾಗತಿಸಿದರು.

All members meeting held at DCC Bank premises

About Author

Leave a Reply

Your email address will not be published. Required fields are marked *