September 24, 2024

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮುಂದಾದ ಪಕ್ಷದ ಮುಖಂಡರು

0
ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆ

ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆ

ಚಿಕ್ಕಮಗಳೂರು:  ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಮನೆಯನ್ನು ಕಟ್ಟಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗುವಂತೆ ಕೆಪಿಸಿಸಿ ಉಪಾಧ್ಯಕ್ಷರಾದ ಡಾ.ಬಿ.ಎಲ್.ಶಂಕರ್ ಕರೆ ನೀಡಿದರು.

ಅವರು ಇಂದು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಆಶಯದಂತೆ ಕಾಂಗ್ರೆಸ್ ಕಟ್ಟಡಗಳ ಸಮಿತಿಯ ಅಧ್ಯಕ್ಷರು ಹಾಗೂ ಸಚಿವರಾದ ಕೆ.ಜೆ.ಜಾರ್ಜ್ ಅವರು ಜಿಲ್ಲಾ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಅತ್ಯಂತ ಉತ್ಸುಕರಾಗಿದ್ದಾರೆ. ಜಿಲ್ಲೆಯ ಐವರು ಶಾಸಕರುಗಳು ಕೂಡ ಇವರ ಆಶಯದ ಬೆಂಬಲಕ್ಕೆ ನಿಂತಿರುವುದು ಸ್ವಾಗತಾರ್ಹವಾದುದಾಗಿದೆ ಎಂದರು.

ಕಟ್ಟಡ ಕಟ್ಟುವುದರ ಜೊತೆಗೆ ಪಕ್ಷವನ್ನು ಇನ್ನು ಹೆಚ್ಚು ಸಂಘಟನಾತ್ಮಕವಾಗಿ ಕಟ್ಟಲು ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಸಮಿತಿಗಳನ್ನು ಪುನರ್ ರಚಿಸಿ ಅವುಗಳು ಕಾರ್ಯ ಪ್ರವೃತ್ತವಾಗುವಂತೆ ನೋಡಿಕೊಳ್ಳಬೇಕು ಹಾಗೂ ಬಿಎಲ್‌ಎ-೨ ನೇಮಕ ಕೂಡ ಅಗತ್ಯವಿದೆ ಎಂದು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಹೆಚ್.ಡಿ.ತಮ್ಮಯ್ಯ ಅವರು ಮಾತನಾಡಿ, ಪಕ್ಷ ಕಟ್ಟುವುದರ ಜೊತೆಗೆ ಪಕ್ಷದ ಮನೆ ಕಟ್ಟುವುದು ಕೂಡ ಅಗತ್ಯವಾಗಿದೆ. ನನ್ನ ಸುದೈವ ಜಿಲ್ಲಾ ಕೇಂದ್ರದಲ್ಲಿ ವಿಶಾಲವಾದ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.

ಇಂತಹ ಕಟ್ಟಡ ಕಟ್ಟುವಾಗ ಸಹಕಾರಕ್ಕಾಗಿ ಮೂರು ವರ್ಗದ ಜನರನ್ನು ಕಾಣಬಹುದು. ಹಣವುಳ್ಳವರು, ಪಕ್ಷದ ಬಗ್ಗೆ ಗೌರವವಿರುವವರು, ದಾನ ನೀಡಿ ಗೌಪ್ಯವಾಗಿರುತ್ತಾರೆ. ಮತ್ತೊಂದು ವರ್ಗ ತಮ್ಮ ಅಲ್ಪ ಕಾಣಿಕೆಯೊಂದಿಗೆ ಸಂಗ್ರಹಕ್ಕೆ ಮುಂದಾಗುತ್ತಾರೆ. ಮತ್ತೊಂದು ವರ್ಗ ದೈಹಿಕವಾಗಿ ಸಹಕಾರ ನೀಡುತ್ತಾರೆ. ಈ ಮೂರು ವರ್ಗದ ಜನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ತಮ್ಮ ತಮ್ಮ ಶಕ್ತನುಸಾರ ಸಹಾಯ ಒದಗಿಸಲಿದ್ದು, ಸುಂದರ ಭವನ ನಿರ್ಮಾಣವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕಟ್ಟಡ ಉಪ ಸಮಿತಿ ಅಧ್ಯಕ್ಷರಾದ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಭವನ ನಿರ್ಮಾಣ ಸಮಿತಿಯೊಂದು ರೂಪುಗೊಂಡಿದ್ದು, ಕಟ್ಟಡ ಉಪ ಸಮಿತಿಗೆ ನನ್ನನ್ನು ಅಧ್ಯಕ್ಷರನ್ನಾಗಿ, ಕೆ.ಎಸ್.ಶಾಂತೇಗೌಡ ಅವರನ್ನು ಖಜಾಂಚಿಯನ್ನಾಗಿ ಮಾಡಿದ್ದು, ಸಮಿತಿಯ ಸಲಹೆಯಂತೆ ಕಾರ್ಯ ಪ್ರವೃತ್ತವಾಗಿದ್ದೇವೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್ ಅವರು ಮಾತನಾಡಿ, ಈಗಾಗಲೇ ತರೀಕೆರೆ ಹಾಗೂ ಕಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ನೇತೃತ್ವದಲ್ಲಿ ಭವನ ನಿರ್ಮಾಣಕ್ಕೆ ವಂತಿಕೆ ಸಂಗ್ರಹ ಕಾರ್ಯ ಸಕರಾತ್ಮಕವಾಗಿ ಮುಂದುವರೆದಿದ್ದು, ಇಂದು ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರದಲ್ಲಿ ಇಂತಹ ಚಟುವಟಿಕೆಗಳು ಮುಂದುವರೆಯಲಿವೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ, ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ನಯಾಜ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ಹಾಗೂ ನಗರಸಭಾ ಸದಸ್ಯ ಮುನೀರ್ ಅಹಮದ್ ಸ್ವಾಗತಿಸಿದರೆ, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ನಾಯ್ಡು ವಂದಿಸಿದರು.

A meeting of Chikmagalur Block Congress office bearers and workers

About Author

Leave a Reply

Your email address will not be published. Required fields are marked *