Farmers’ union demands to drop the Land Reforms Amendment Act: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಕೈಬಿಡಲು ರೈತ ಸಂಘ ಆಗ್ರಹ
ಚಿಕ್ಕಮಗಳೂರು: ರೈತ ವಿರೋಧಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ಪಡೆಯುವಂತೆ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ನೇತೃತ್ವದಲ್ಲಿ ರೈತ ಸಂಘದ ಮುಖಂಡರು ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂ ಒಡೆಯ ಎಂಬ ಉದ್ದೇಶಕ್ಕೆ ಕೊಡಲಿ ಪೆಟ್ಟು ನೀಡಿ, ಉಳ್ಳವನೇ ಭೂ ಒಡೆಯನಾಗಲು ಅವಕಾಶ ಕಲ್ಪಿಸಿ ಭೂ ಸುಧಾರಣಾ ಕಾಯ್ದೆಯ ಮೂಲ ಉದ್ದೇಶವನ್ನೇ ಅಳಿಸಿ ಹಾಕಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ರೈತ ಪರವಾಗಿ ಸುಧಾರಣೆಗಳನ್ನು ತರಬೇಕಾದ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ಹೈನುಗಾರಿಕೆಗೆ ದೊಡ್ಡ ಪೆಟ್ಟು ನೀಡಿದೆ.
ಈ ಮೂರು ತಿದ್ದುಪಡಿ ಕಾಯ್ದೆಗಳು ರೈತ ಸಮುದಾಯಕ್ಕೊಂದೆ ಅಲ್ಲದೆ ಸಮಾಜಕ್ಕೆ ಮಾರಕವಾಗಿದೆ. ಇದರ ವಿರುದ್ಧ ೨೦೨೦ ರಿಂದಲೂ ನಿರಂತರವಾಗಿ ರಾಜ್ಯದಲ್ಲಿ ರೈತರು, ದಲಿತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ, ಯುವ ಜನತೆ ಮತ್ತು ಪ್ರಗತಿಪರರು ಐಕ್ಯ ಹೋರಾಟ ನಡೆಸುತ್ತಾ ಬಂದಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಎಪಿಎಂಸಿ ಮಾರುಕಟ್ಟೆಯನ್ನು ರೈತ ಸ್ನೇಹಿಯಾಗಿ ರೂಪಿಸಬೇಕು, ಮಾರುಕಟ್ಟೆ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿ ರೈತರಿಗೆ ಆಗುತ್ತಿರುವ ವಂಚನೆ, ಮೋಸವನ್ನು ತಪ್ಪಿಸಿ ಭ್ರಷ್ಟಚಾರವನ್ನು ನಿರ್ಮೂಲನೆ ಮಾಡಬೇಕು, ಭೂ ಸುಧಾರಣಾ ಕಾಯ್ದೆಯನ್ನು ಉಳುವ ರೈತನ ಕೇಂದ್ರಿತ ದೃಷ್ಟಿಯಿಂದ ಮತ್ತಷ್ಟು ಬಲಯುತಗೊಳಿಸಬೇಕು.
ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ೨೦೧೩ರ ಭೂ ಸ್ವಾಧೀನ ಕಾಯ್ದೆಗೆ ರೂಪಿಸಿರುವ ನಿಯಮಗಳು ರೈತ ವಿರೋಽಯಾಗಿವೆ. ಇದನ್ನು ಮಾರ್ಪಾಡು ಮಾಡಿ ರೈತ ಪರ ನಿಯಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ.ಹಿಂದಿನ ಸರ್ಕಾರ ಭೂ ಮಂಜೂರಾತಿ ಕಾಯ್ದೆಯ ನಿಯಮಗಳನ್ನು ಮೀರಿ ಸರ್ಕಾರಿ ಭೂಮಿಯನ್ನು ಸಂಘ ಪರಿವಾರಕ್ಕೆ ಮಂಜೂರು ಮಾಡಿದೆ. ಅವುಗಳನ್ನೆಲ್ಲಾ ರದ್ದುಪಡಿಸಿ ಆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಬಸವರಾಜ್, ಪ್ರಧಾನ ಕಾರ್ಯದರ್ಶಿ ಮಹೇಶ್ ಹಾಜರಿದ್ದರು.
Farmers’ union demands to drop the Land Reforms Amendment Act