ಠಾಣೆ ಸಿಬ್ಬಂದಿ ವಿರುದ್ಧ ದೂರಿಗಾಗಿ ಕ್ಯೂಆರ್ ಕೋಡ್
ಚಿಕ್ಕಮಗಳೂರು: ಸಹಾಯ ಕೋರಿ ಬಂದವರಿಗೆ ಪೊಲೀಸ್ ಠಾಣೆಯಲ್ಲಿ ಸ್ಪಂದನೆ ದೊರಕುತ್ತಿಲ್ಲವೇ, ಸಿಬ್ಬಂದಿ ಸೌಜನ್ಯದಿಂದ ನಡೆದುಕೊಳ್ಳುತ್ತಿಲ್ಲವೆ… ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿ ಇಂತಹದೊಂದು ಹೊಸ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿದ್ದು, ಇದಕ್ಕೆ ಅವಲೋಕನ ಎಂದು ಹೆಸರಿಸಿದೆ. ದೂರು ದಾಖಲಿಸಲು ಠಾಣೆಗೆ ಹೋದಾಗ ಆದ ಅನುಭವಗಳನ್ನು ಹಂಚಿಕೊಳ್ಳಲು ಈ ವ್ಯವಸ್ಥೆ ತರಲಾಗಿದೆ. ತಮ್ಮ ಮೊಬೈಲ್ ದೂರವಾಣಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಠಾಣೆಯ ಹೆಸರು, ಠಾಣೆಗೆ ಹೋದ ಉದ್ದೇಶ, ದೂರವಾಣಿ ಸಂಖ್ಯೆ, ದೂರಿಗೆ ಸ್ವೀಕೃತಿ ನೀಡಲಾಗಿದೆಯೇ, ಎಂಬಿತ್ಯಾದಿ ಅನುಭವಗಳ್ನು ದಾಖಲಿಸಬಹುದು ಎಂದಿದ್ದಾರೆ.
ಪೊಲೀಸರ ವರ್ತನೆ ಉತ್ತಮವೇ, ಸಾಧಾರಣವೇ, ತೃಪ್ತಿಕರವಾಗಿಲ್ಲವೇ ಎಂಬುದನ್ನು ನಮೂದಿಸಲು ಅವಕಾಶ ಇದೆ. ದೂರುದಾರರು ನೀಡುವ ಎಲ್ಲಾ ಪ್ರತಿಕ್ರಿಯೆಗಳು ನೇರವಾಗಿ ನನ್ನ ಕಚೇರಿಗೆ ಬರಲಿದೆ. ಅದನ್ನು ಗೌಪ್ಯವಾಗಿ ಇಡಲಾಗುತ್ತದೆ, ಸಾರ್ವಜನಿಕರು ನಿರ್ಭಯವಾಗಿ ವಿವರ ದಾಖಲಿಸಬಹುದು. ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯನ್ನು ಜನಸ್ನೇಹಿ ಆಗಿಸುವುದು ಇದರ ಉದ್ದೇಶ. ಕಹಿ ಅನುಭವ ಆಗಿದ್ದಲ್ಲಿ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
QR code for complaint against station staff